ADVERTISEMENT

ಶುದ್ಧೀಕರಿಸದಿದ್ದರೆ ಕೆ.ಸಿ.ವ್ಯಾಲಿ ನೀರು ಬೇಡ: ಶಾಸಕ ವೆಂಕಟಶಿವಾರೆಡ್ಡಿ ಆಕ್ರೋಶ

ಜನರ ಆರೋಗ್ಯದ ಜೊತೆ ಚೆಲ್ಲಾಟ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 6:33 IST
Last Updated 27 ಜುಲೈ 2025, 6:33 IST
ಕೋಲಾರ ತಾಲ್ಲೂಕಿನ ಮುದುವಾಡಿಯಲ್ಲಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಸಂಸದ ಎಂ.ಮಲ್ಲೇಶ್‌ ಬಾಬು, ಮುಖಂಡರು ಹಾಗೂ ಅಧಿಕಾರಿಗಳು ಕೆ.ಸಿ ವ್ಯಾಲಿ ಪಂಪ್‌ಹೌಸ್‌ ವೀಕ್ಷಣೆ ಮಾಡಿದರು
ಕೋಲಾರ ತಾಲ್ಲೂಕಿನ ಮುದುವಾಡಿಯಲ್ಲಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಸಂಸದ ಎಂ.ಮಲ್ಲೇಶ್‌ ಬಾಬು, ಮುಖಂಡರು ಹಾಗೂ ಅಧಿಕಾರಿಗಳು ಕೆ.ಸಿ ವ್ಯಾಲಿ ಪಂಪ್‌ಹೌಸ್‌ ವೀಕ್ಷಣೆ ಮಾಡಿದರು   

ಕೋಲಾರ: ‘ಕೆ.ಸಿ.ವ್ಯಾಲಿ ವಿಚಾರದಲ್ಲಿ ಜಿಲ್ಲೆಗೆ ಬಗ್ಗೆ ಗೌರವವಿದ್ದರೆ ಮೂರನೇ ಹಂತದಲ್ಲಿ ಶುದ್ಧೀಕರಣ ಮಾಡಿದರೆ ಮಾತ್ರ ನೀರು ಹರಿಸಬೇಕು. ಇಲ್ಲವಾದರೆ ನಮಗೆ ಕೆ.ಸಿ.ವ್ಯಾಲಿ ನೀರು ಬೇಡವೇ ಬೇಡ’ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಸರ್ಕಾರವನ್ನು ಒತ್ತಾಯಿಸಿದರು.

ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರವಾದ ತಾಲ್ಲೂಕಿನ ಮುದುವಾಡಿಯಲ್ಲಿ ಶನಿವಾರ ಕೋಲಾರ-ಶ್ರೀನಿವಾಸಪುರ ರಸ್ತೆ ಅಭಿವೃದ್ಧಿ ಹಾಗೂ ಕೆ.ಸಿ ವ್ಯಾಲಿ ಪಂಪ್‌ಹೌಸ್‌ ವೀಕ್ಷಣೆಯ ನಂತರ ಮಾತನಾಡಿದರು.

‘ಯೋಜನೆಯಡಿಯಲ್ಲಿ ಶ್ರೀನಿವಾಸಪುರ ತಾಲ್ಲೂಕಿನ ಎಲ್ಲಾ ಕಡೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಪೈಪ್‌ಲೈನ್ ಅಳವಡಿಸಿದ್ದು ಎಲ್ಲಿಯೂ ನೀರು ಹರಿಸಲಾಗುತ್ತಿಲ್ಲ. ಬೆಳ್ಳಂದೂರು ಸಮೀಪ ಕೆ.ಸಿ.ವ್ಯಾಲಿ ಶುದ್ಧೀಕರಣ ಘಟಕದಲ್ಲಿ ಶೇ 10 ರಷ್ಟು ಕೂಡ ನೀರು ಶುದ್ಧೀಕರಣ ಮಾಡದೆ ಕೋಲಾರದ ಕೆರೆಗಳಿಗೆ ಹರಿಸಲಾಗುತ್ತಿದೆ. ಇದರಿಂದ ನೀರು ಹರಿಯುವ ಮತ್ತು ನಿಲ್ಲುವ ಭೂಮಿ ಸಂಪೂರ್ಣ ಕಲುಷಿತವಾಗುತ್ತಿದೆ. ಆ ನೀರಿನಿಂದ ಬೆಳೆಯುವ ಹಣ್ಣು, ತರಕಾರಿಗಳು ಗುಣಮಟ್ಟ ಕಳೆದುಕೊಂಡು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಜನರ ಆರೋಗ್ಯದ ಜತೆಗೆ ಚೆಲ್ಲಾಟವಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.

ADVERTISEMENT

‘ಕೋಲಾರ– ಶ್ರೀನಿವಾಸಪುರ ರಸ್ತೆ ಕಿರುದಾಗಿದ್ದು, ವಾಹನ ದಟ್ಟಣೆ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತಿವೆ. ಎಸ್ಎಚ್‌ಡಿಪಿ ಯೋಜನೆಯಡಿ ₹10 ಕೋಟಿ ವೆಚ್ಚದಲ್ಲಿ ಮುದುವಾಡಿಯಿಂದ ದಳಸನೂರಿನವರೆಗೆ 3.4 ಕಿ.ಮೀ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಲಾಗಿದೆ. ಕೋಲಾರ ಕ್ಷೇತ್ರ ವ್ಯಾಪ್ತಿಯ ರಸ್ತೆಗೆ ಶಾಸಕ ಕೊತ್ತೂರು ಮಂಜುನಾಥ್ ಪ್ರಯತ್ನ ಮಾಡಿ ಹಣ ಬಿಡುಗಡೆ ಮಾಡಿಸಿದ್ದಾರೆ. ತ್ವರಿತವಾಗಿ ರಸ್ತೆ ಅಭಿವೃದ್ಧಿ ಆಗಲಿದೆ’ ಎಂದು ಹೇಳಿದರು.

‘ಜೊತೆಗೆ ಗೌನಿಪಲ್ಲಿಯಿಂದ ಕೊತ್ತಕೋಟೆ ವರೆಗೆ ₹ 12 ಕೋಟಿ ವೆಚ್ಚದಲ್ಲಿ ಕೆಲಸ ಕೈಗೆತ್ತಿಕೊಳ್ಳಲಾಗಿದೆ. ಅದೇ ರೀತಿ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಲು ಸಂಸದ ಮಲ್ಲೇಶ್ ಬಾಬು ಮೂಲಕ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಬಂಗಾರಪೇಟೆ, ಕೋಲಾರ, ಶ್ರೀನಿವಾಸಪುರ ಭಾಗದ ಜನತೆಗೆ ಅನುಕೂಲವಾಗಲಿದೆ. ಇನ್ನು ಕಲ್ಲೂರಿನಿಂದ ಮೀಸಗಾನಪಲ್ಲಿ ತನಕ ಹೆದ್ದಾರಿ ನಿರ್ಮಾಣದ ಕಾರ್ಯ ಆಗಲಿದೆ’ ಎಂದು ತಿಳಿಸಿದರು.

ಸಂಸದ ಎಂ.ಮಲ್ಲೇಶ್‍ಬಾಬು ಮಾತನಾಡಿ, ‘ಕೈಗಾರಿಕಾ ವಲಯಗಳಲ್ಲಿ ಶಾಲೆ, ಆಸ್ಪತ್ರೆಗಳನ್ನು ತೆರೆಯಲು ಕಾರ್ಮಿಕರು ಮನವಿ ಮಾಡಿದ್ದು ವೇಮಗಲ್‍ನಲ್ಲಿ ಅಥವಾ ಶಿಡ್ಲಘಟ್ಟದಲ್ಲಿ ತೆರೆಯುವ ಆಲೋಚನೆ ಇದೆ. ಕೆಜಿಎಫ್‍ನಲ್ಲಿ 5 ಸಾವಿರ ಎಕರೆಯಲ್ಲಿ ನ್ಯಾಷನಲ್ ಲ್ಯಾಂಡ್ ಬ್ಯಾಂಕ್ ಮಾಡುವ ಉದ್ದೇಶವನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಜತೆ ಚರ್ಚೆ ಮಾಡಲಾಗುವುದು. ಅಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಯೋಜನೆಯೂ ಇದೆ’ ಎಂದರು.

‘ಹೊಸಕೋಟೆಯಿಂದ ರಾಜ್ಯದ ಗಡಿಭಾಗದವರೆಗೆ 6ಪಥ ರಸ್ತೆಯನ್ನು ನಿರ್ಮಿಸಲು ನಿತಿನ್‍ ಗಡ್ಕರಿ ಅವರಿಗೆ ಮನವಿ ಮಾಡಲಾಗಿದೆ. ವೇಮಗಲ್‍ನಲ್ಲಿ ಕೈಗಾರಿಕಾ ವಲಯದಲ್ಲಿ ಹೆಲಿಕ್ಯಾಪ್ಟರ್‌ ನಿರ್ಮಾಣ ಮಾಡಲು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಿಗೆ ಕೋರಲಾಗಿದೆ’ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಇಂಚರ ಗೋವಿಂದರಾಜು,ಜೆಡಿಎಸ್‌ ಮುಖಂಡ ಸಿಎಂಆರ್‌ ಶ್ರೀನಾಥ್‌, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಪೂಲ ಶಿವಾರೆಡ್ಡಿ, ಎಸ್.ಎನ್,ಮಂಜುನಾಥರೆಡ್ಡಿ, ಚೌಡರೆಡ್ಡಿ, ಮಧುಸೂದನರೆಡ್ಡಿ,  ಶ್ರೀನಿವಾಸಪುರ ತಹಶೀಲ್ದಾರ್‌ ಸುಧೀಂದ್ರ ಇದ್ದರು.

ಕೋಲಾರ–ವೈಟ್‌ಫೀಲ್ಡ್‌ ರೈಲು ಮಾರ್ಗಕ್ಕೆ ಪ್ರಸ್ತಾವ

‘ಜನರ ಬೇಡಿಕೆಗೆ ತಕ್ಕಂತೆ ಕೋಲಾರದಿಂದ ವೈಟ್‌ಫೀಲ್ಡ್ ರೈಲು ಮಾರ್ಗ ಸಂಬಂಧ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಾಗಿದೆ. ರಾಜ್ಯ ಸರ್ಕಾರ ಜಾಗ ನೀಡಿದರೆ ಕೆಲಸ ಕೈಗೆತ್ತಿಕೊಳ್ಳಲಾಗುವುದು’ ಎಂದು ಎಂ.ಮಲ್ಲೇಶ್‌ ಬಾಬು ಹೇಳಿದರು. ‘ರೈಲು ಮಾರ್ಗಕ್ಕೆ ಜಮೀನು ಕೊಡಿಸುವ ಜವಾಬ್ದಾರಿಯನ್ನು ಶಾಸಕ ಕೊತ್ತೂರು ಮಂಜುನಾಥ್ ವಹಿಸಿಕೊಂಡಿದ್ದಾರೆ. ಇದರ ಜತೆಗೆ ಕೋಲಾರ– ಚಿಕ್ಕಬಳ್ಳಾಪುರ ಮಾರ್ಗವಾಗಿ ಬೆಂಗಳೂರಿಗೆ ರೈಲು ಮಾರ್ಗಗಳ ಸಂಚಾರ ಹೆಚ್ಚಿಸಲು ಬೇಡಿಕೆ ಬಂದಿದೆ. ಮೊದಲು ಗೂಡ್ಸ್ ರೈಲುಗಳ ಸಂಚಾರ ಆಗಲಿದೆ. ಆನಂತರ ಪ್ರಯಾಣಿಕರ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಈ ಬಗ್ಗೆ ಈಗಾಗಲೇ ರೈಲ್ವೆ ಸಚಿವರ ಬಳಿ ಚರ್ಚಿಸಲಾಗಿದೆ’ ಎಂದರು.

ಅಭಿವೃದ್ಧಿಗೆ ಯಾವತ್ತೂ ಅಡ್ಡಿಪಡಿಸಿಲ್ಲ

‘ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಪಡಿಸುವ ಜಾಯಮಾನ ನನ್ನದು ಅಲ್ಲ. ಕೆಐಎಡಿಬಿ ಸಂಬಂಧಿಸಿದಂತೆ ರಾಜ್ಯ‌ದಾದ್ಯಂತ ಭೂಮಿ ವಶಪಡಿಸಿಕೊಳ್ಳುತ್ತಿದ್ದಾರೆ. ರೈತರಿಗೆ ತೊಂದರೆ ಕೊಟ್ಟು ಕೈಗಾರಿಕಾ ವಲಯ ಸ್ಥಾಪಿಸಬೇಕು ಎಂಬ ಭಾವನೆ ನನ್ನದಲ್ಲ. ಅಂದು 1500 ಎಕರೆ ಜಮೀನು ರೈಲ್ವೆ ಕೋಚ್ ಮಾಡಿಸಬೇಕೆನ್ನುವಾಗ ಈ ಸಮಸ್ಯೆ ಬರಲಲ್ಲವೇ? 500 ಎಕರೆ ಗೋಮಾಳ ಜಮೀನು ಉಳಿದಂತೆ 1000 ಎಕರೆ ಖಾಸಗಿ ಜಮೀನು ವಶಪಡಿಕೊಳ್ಳಲಿಲ್ಲವೆ? ನಾನು ಮತ್ತು ಮಾಜಿ ಶಾಸಕರು ತಾಲ್ಲೂಕಿನ ಜನತೆಯ ಋಣ ತೀರಿಸಿಕೊಳ್ಳಬೇಕಾಗಿದೆ’ ಎಂದು ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.

ಕೆಲಸ ಮಾಡಲು ಗುತ್ತಿಗೆದಾರರು ಹಿಂದೇಟು

‘ಹಿಂದಿನ ಸರ್ಕಾರಗಳಲ್ಲಿ ಗುತ್ತಿಗೆದಾರರು ಕಾಮಗಾರಿ ಮಾಡಿಸಲು ಹಿಂಜರಿಯುತ್ತಿರಲ್ಲಿಲ್ಲ. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಅಭಿವೃದ್ಧಿ ಕಾಮಗಾರಿ ಮಾಡಿಸಲು ಟೆಂಡರ್ ಪಡೆದುಕೊಳ್ಳಲು ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದಾರೆ. ಇದು ಏಕೆ ಎಂಬುದಕ್ಕೆ ಸರ್ಕಾರವೇ ಉತ್ತರ ನೀಡಬೇಕಾಗಿದೆ’ ಎಂದು ವೆಂಕಟಶಿವಾರೆಡ್ಡಿ ಹೇಳಿದರು. ‘ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳಿಗೆ ಹಣ ಒದಗಿಸಲು ಪರದಾಡುತ್ತಿದ್ದು ಸರ್ಕಾರದ ಖಜಾನೆ ಖಾಲಿಯಾಗಿರಬಹುದು. ಸಕಾಲಕ್ಕೆ ಅಭಿವೃದ್ಧಿ ಕೆಲಸಗಳಿಗೆ ಹಣ ಸಿಗುತ್ತಿಲ್ಲ. ಇಲಾಖೆಯ ಸಚಿವರು ಅಧಿಕಾರಿಗಳ ಮೇಲೆ ಒತ್ತಡ ತಂದು ಬಿಡುಗಡೆ ಮಾಡಿಸಬೇಕಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.