ADVERTISEMENT

ಕೋಲಾರ | ನಡು ಬೀದಿಯಲ್ಲಿ ಮತ್ತೆ ಮುನಿಯಪ್ಪ-ರಮೇಶ್ ಕುಮಾರ್ ಬಣದ ನಡುವೆ ಘರ್ಷಣೆ

ಮುನಿಯಪ್ಪ ನೇತೃತ್ವದಲ್ಲಿ ನಡೆದ‌ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ನೂಕಾಟ, ತಳ್ಳಾಟ‌

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 10:31 IST
Last Updated 5 ಡಿಸೆಂಬರ್ 2022, 10:31 IST
ಸಭೆಯಲ್ಲಿ ಮುನಿಯಪ್ಪ ಎದುರೇ ಕಾಂಗ್ರೆಸ್‌ ಕಾರ್ಯಕರ್ತರ ಗಲಾಟೆ
ಸಭೆಯಲ್ಲಿ ಮುನಿಯಪ್ಪ ಎದುರೇ ಕಾಂಗ್ರೆಸ್‌ ಕಾರ್ಯಕರ್ತರ ಗಲಾಟೆ   

ಕೋಲಾರ: ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ವಿರೋಧ ಪಕ್ಷದ ನಾಯಕಸಿದ್ದರಾಮಯ್ಯ ಅವರ ಸ್ಪರ್ಧೆ ವಿಚಾರವಾಗಿ ಕೇಂದ್ರದ‌ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಹಾಗೂ ಶ್ರೀನಿವಾಸಪುರ ಕ್ಷೇತ್ರದಶಾಸಕ ಕೆ.ಆರ್.ರಮೇಶ್ ಕುಮಾರ್ ಬೆಂಬಲಿಗರ ನಡುವೆ ಮತ್ತೆ ನಡುಬೀದಿಯಲ್ಲಿ ಘರ್ಷಣೆ ನಡೆದಿದೆ.

ನಗರದ ಕಾಂಗ್ರೆಸ್ ಭವನದಲ್ಲಿ ಸೋಮವಾರಮುನಿಯಪ್ಪ ನೇತೃತ್ವದಲ್ಲಿ ನಡೆದ‌ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ನೂಕಾಟ, ತಳ್ಳಾಟ‌ ನಡೆಯಿತು.

'ಕೆಲವರು (ರಮೇಶ್ ಕುಮಾರ್ ಬಣ) ನಮ್ಮನ್ನು ಬಿಟ್ಟು ಏಕಪಕ್ಷೀಯವಾಗಿ ಸಭೆ ನಡೆಸುತ್ತಿರುವುದು ಗಮನಕ್ಕೆ ಬಂದಿದೆ.‌ಅದನ್ನು‌ ಮೊದಲು ಬಿಟ್ಟುಬಿಡಬೇಕು‌. ಕೋಲಾರ‌ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡುವುದಾದರೆ ಗೊಂದಲ ಸರಿ‌ಪಡಿಸಿಕೊಂಡು ಬರಬೇಕು. ಅವರ ಸ್ಪರ್ಧೆಗೆ ನಮ್ಮ ಸ್ವಾಗತವಿದೆ. ಸ್ಪರ್ಧೆ‌ ಮಾಡದಿದ್ದರೆ ಸ್ಥಳೀಯರಿಗೆ ‌ಟಿಕೆಟ್ ಕೊಡಬೇಕು. ಪದೇಪದೇ‌ ಸಿದ್ದರಾಮಯ್ಯ ‌ಮುಂದಿನ ಮುಖ್ಯಮಂತ್ರಿ ಎನ್ನಬೇಡಿ. ಉಳಿದವರಿಗೆ ನೋವುಂಟಾಗುತ್ತದೆ. ಮುಖ್ಯಮಂತ್ರಿ ಮಾಡುವ ತಾಕತ್ತು ನಮಗಿಲ್ಲವೇ?' ಎಂದು‌ ಮುನಿಯಪ್ಪ ಹೇಳುತ್ತಿದಂತೆ ರಮೇಶ್ ಕುಮಾರ್ ಬಣದವರು ಸಿಡಿದೆದ್ದರು.

ADVERTISEMENT

ನಗರಸಭೆ ಸದಸ್ಯ ಅಂಬರೀಷ್ ನೇತೃತ್ವದಲ್ಲಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಅವರಿಗೆ ಜೈಕಾರ ಹಾಕಿದರು. ನಡು ಬೀದಿಯಲ್ಲೇ ಪರಸ್ಪರ ಕೈ ಮಿಲಾಯಿಸುವ ಹಂತ ತಲುಪಿದರು.

ಇನ್ನು ಕೆಲ ಕಾರ್ಯಕರ್ತರು, 'ನಿಮ್ಮಿಬ್ಬರ ಬಣದಿಂದ ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ಹಾಳಾಗುತ್ತಿದೆ' ಎಂದು ಹರಿಹಾಯ್ದರು.

ಜಗಳ ಜೋರಾಗುತ್ತಿದ್ದಂತೆ ಮೈಕ್ ಕಿತ್ತುಕೊಂಡ ಮುನಿಯಪ್ಪ, 'ಈ ರೀತಿ ಗಲಾಟೆ ಮಾಡುವವರು ಸಿದ್ದರಾಮಯ್ಯ ಅವರನ್ನು ಕರೆದುಕೊಂಡು ಬಂದು ಗೆಲ್ಲಿಸುತ್ತಾರಾ? ಒಗ್ಗಟಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಿ. ನಾನು ಹಳೆಯದ್ದನ್ನು ಮರೆತಿದ್ದೇನೆ' ಎಂದು ಸಮಾಧಾನಪಡಿಸಲು ಪ್ರಯತ್ನಿಸಿದರು.

ಟಿಕೆಟ್ ಆಕಾಂಕ್ಷಿಗಳಾದ ವಿ.ಆರ್. ಸುದರ್ಶನ್, ಊರುಬಾಗಿಲು ಶ್ರೀನಿವಾಸ್, ಎಲ್.ಎ.ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.