ಕೋಲಾರ: ‘ಸರ್ಕಾರವು ಮಾವಿಗೆ ಬೆಂಬಲ ಬೆಲೆ ಘೋಷಣೆ ಮಾಡುತ್ತಿದ್ದಂತೆ ಮಂಡಿ ಮಾಲೀಕರು, ಕಾರ್ಖಾನೆಯವರು ಖರೀದಿ ದರ ಕಡಿಮೆ ಮಾಡಿರುವುದು ಗಮನಕ್ಕೆ ಬಂದಿದೆ. ಮೊದಲಿನ ದರದಲ್ಲೇ ಮಾರಾಟ ಮಾಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹೇಳಿದರು.
ನಗರದಲ್ಲಿ ಕೆಡಿಪಿ ಸಭೆಯಲ್ಲಿ ಹಾಗೂ ಸುದ್ದಿಗಾರರೊಂದಿಗೆ ಮಾತನಾಡಿ, ‘ಮಂಡಿ ಹಾಗೂ ಕೈಗಾರಿಕೆಗಳಲ್ಲಿ ಈ ಮೊದಲು ₹ 4 ದರದಲ್ಲಿ ಖರೀದಿಸುತ್ತಿದ್ದರು. ರೈತರಿಗೆ ಬೆಂಬಲ ಬೆಲೆ ಸಿಗುತ್ತದೆ ಎಂದು ₹ 2ಕ್ಕೆ ಇಳಿಕೆ ಮಾಡಿರುವುದು ಘೋರ ಅನ್ಯಾಯ. ಹಿಂದಿನ ₹ 4 ದರದಲ್ಲೇ ಖರೀದಿಸಬೇಕು’ ಎಂದರು.
‘ಮಾವಿಗೆ ಬೆಂಬಲ ಬೆಲೆ ಕೊಡಲು ಸರ್ಕಾರ ₹ 101 ಕೋಟಿ ಮೀಸಲಿಟ್ಟಿದೆ. ಕೆ.ಜಿಗೆ ₹ 4 ಬೆಂಬಲ ದರ ಎಲ್ಲಾ ರೈತರಿಗೆ ಸಿಗಬೇಕು. ಸೂಕ್ಷ್ಮತೆ ಅರ್ಥ ಮಾಡಿಕೊಂಡು ಬೆಂಬಲ ಬೆಲೆ ಕೊಡಬೇಕು. ಮಂಡಿಗಳು, ಫ್ಯಾಕ್ಟರಿಗಳು ಖರೀದಿ ದರ ಕಡಿಮೆ ಮಾಡಿರುವ ದೂರುಗಳಿದ್ದು, ಈ ರೀತಿ ಆಗಬಾರದು. ಈ ಸಂಬಂಧ ಸ್ಪಷ್ಟ ಆದೇಶ ಹೊರಡಿಸಬೇಕು. ಸರ್ಕಾರದ ಮುಖ್ಯ ಕಾರ್ಯದರ್ಶಿ ಗಮನಕ್ಕೆ ತಂದು ಆದೇಶ ಹೊರಡಿಸಲಾಗುವುದು’ ಎಂದು ಹೇಳಿದರು.
‘ಪ್ರಸ್ತುತ ಬೆಳೆ ಇದ್ದವರಿಗೆ ಮಾತ್ರ ಬೆಂಬಲ ಬೆಲೆ ಕೊಡಲಾಗುತ್ತದೆ. ಹಿಂದೆ ಸಮಸ್ಯೆಯಾದವರಿಗೆ ಕೊಡಲು ಆಗದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.