ADVERTISEMENT

ಮಾಲೂರು | ಕನ್ನಡ ಭಾಷೆ ಜತೆಗೆ ಶಾಲೆಗಳ ಜಾಗವೂ ಉಳಿಸಬೇಕು: ಡಾ.ಪುರುಷೋತ್ತಮ ಬಿಳಿಮಲೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 6:03 IST
Last Updated 17 ಫೆಬ್ರುವರಿ 2026, 6:03 IST
ಮಾಲೂರಿನಲ್ಲಿ ಭಾನುವಾರ ನಡೆದ ‘ಶಿವ ಸಂಸ್ಕೃತಿ ದರುವು’ ಕಾರ್ಯಕ್ರಮದಲ್ಲಿ ಡಾ.ಪುರುಷೋತ್ತಮ ಬಿಳಿಮಲೆ, ಡಾ.ಚಂದ್ರಶೇಖರ ನಂಗಲಿ, ಡಾ.ಕೆ.ವೈ.ನಾರಾಯಣಸ್ವಾಮಿ, ಎಂ.ವಿ.ತಮ್ಮಯ್ಯ, ಗಾಯಕ ಪಿಚ್ಚಳ್ಳಿ ಶ್ರೀನಿವಾಸ ಇತರರು ಇದ್ದಾರೆ.
ಮಾಲೂರಿನಲ್ಲಿ ಭಾನುವಾರ ನಡೆದ ‘ಶಿವ ಸಂಸ್ಕೃತಿ ದರುವು’ ಕಾರ್ಯಕ್ರಮದಲ್ಲಿ ಡಾ.ಪುರುಷೋತ್ತಮ ಬಿಳಿಮಲೆ, ಡಾ.ಚಂದ್ರಶೇಖರ ನಂಗಲಿ, ಡಾ.ಕೆ.ವೈ.ನಾರಾಯಣಸ್ವಾಮಿ, ಎಂ.ವಿ.ತಮ್ಮಯ್ಯ, ಗಾಯಕ ಪಿಚ್ಚಳ್ಳಿ ಶ್ರೀನಿವಾಸ ಇತರರು ಇದ್ದಾರೆ.   

ಮಾಲೂರು: ಮಾಲೂರಿನಲ್ಲಿ ಸಾರಂಗರಂಗ ಸಂಸ್ಥೆ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ಭಾನುವಾರ ‘ಶಿವ ಸಂಸ್ಕೃತಿ ದರವು’ ಕಾರ್ಯಕ್ರಮ ನಡೆಯಿತು.

ಈ ವೇಳೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಮಾತನಾಡಿ, ‘ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇದುವರೆಗೆ ಮೂರು ಸಾವಿರಕ್ಕೂ ಅಧಿಕ ಆದೇಶಗಳನ್ನು ಹೊರಡಿಸಿದೆ. ಆದರೆ, ಕೇವಲ ಶೇ 10ರಷ್ಟು ಮಾತ್ರ ಅನುಷ್ಠಾನಕ್ಕೆ ತಂದಿದೆ ಎಂದು ಹೇಳಿದರು.

ಒಂದೂವರೆ ವರ್ಷದಿಂದ ರಾಜ್ಯದ 26 ಜಿಲ್ಲೆಗಳಿಗೆ ಭೇಟಿ ನೀಡಿ ಕೆಲಸ ಮಾಡುತ್ತಿದ್ದೇವೆ. ಯಾದಗಿರಿ ಜಿಲ್ಲೆಯ ಸರ್ಕಾರಿ ಶಾಲೆಯೊಂದಕ್ಕೆ ಭೇಟಿ ನೀಡಿದಾಗ ಶಾಲೆಗೆ ಖಾತೆ ಪತ್ರವೇ ಇರಲಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಾಗ, 19,500ಕ್ಕೂ ಅಧಿಕ ಸರ್ಕಾರಿ ಶಾಲೆಗಳಿಗೆ ಖಾತೆ ಪತ್ರ ಇಲ್ಲದಿರುವುದು ಪ್ರಾಧಿಕಾರದ ಗಮನಕ್ಕೆ ಬಂದಿತು ಎಂದರು.

ADVERTISEMENT

ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವ ಸ್ಥಿತಿಯಲ್ಲಿ 75, ನೂರು ವರ್ಷಗಳ ಹಿಂದೆ ಊರಿನ ಹಿರಿಯರು ದಾನ ಮಾಡಿದ ಜಾಗವನ್ನು ಅವರ ಕುಟುಂಬಸ್ಥರು ವಾಪಸ್ ಪಡೆದು ಮಾರಾಟ ಮಾಡುತ್ತಿರುವ ಪ್ರಕರಣಗಳು ರಾಜ್ಯದ ಹಲವೆಡೆ ಕಂಡು ಬಂದಿದೆ. ಹಾಗಾಗಿ ಇದನ್ನು ಪರಿಗಣಿಸಿ ಶಿಕ್ಷಣ ಇಲಾಖೆ, ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಸರ್ಕಾರಿ ಶಾಲೆಗಳ ಜಾಗ ಉಳಿಸಲು ಒತ್ತಡ ಹೇರಲಾಯಿತು. ಇದರ ಪರಿಣಾಮ ಈಗ 19 ಸಾವಿರ ಸರ್ಕಾರಿ ಶಾಲೆಗಳಿಗೆ ಖಾತಾ ಪತ್ರ ಸಿಕ್ಕಿದೆ. ಕನ್ನಡ ಭಾಷೆ ಜತೆಗೆ ಕನ್ನಡದ ಶಾಲೆಗಳ ಜಾಗವೂ ಉಳಿಯಬೇಕಾಗಿದೆ ಎಂದರು.

ಊರಿನ ಹೆಸರು, ಹೆದ್ದಾರಿ ನಾಮಫಲಕಗಳಲ್ಲಿ ಕನ್ನಡ ಅಕ್ಷರಗಳ ದೋಷವನ್ನು ಪ್ರಾಧಿಕಾರವು ಸರಿಪಡಿಸಲಾಗುತ್ತಿದೆ. ಜೊತೆಗೆ ಕನ್ನಡ ಪ್ರಜ್ಞೆ ಬೆಳೆಸಲು ಪುಸ್ತಕಗಳನ್ನು ಹೊರ ತರಲಾಗುತ್ತಿದೆ. ಮಾದರಿ ಕನ್ನಡ ಪದಕೋಶ ತರಲು ಪ್ರಮುಖ ಹೆಜ್ಜೆ ಇಡಲಾಗಿದೆ ಎಂದು ತಿಳಿಸಿದರು.

ನೀಟ್, ಯುಜಿಸಿಯೊಂದಿಗೆ ವ್ಯವಹಾರ ನಡೆಸುವಾಗ ಕನ್ನಡದಲ್ಲೇ ಕೆಲ ವರದಿಗಳನ್ನು ನೀಡುವ ಕೆಲಸ ಮಾಡಲಾಗುತ್ತಿದೆ ಎಂದರು. 

‘ಗಡಿ ಭಾಗದಲ್ಲಿನ ಕಲೆ, ಸಂಸ್ಕೃತಿ, ಕಲಾವಿದರ ಭಾಷೆ ಸಮಸ್ಯೆಗಳು’ ವಿಷಯ ಕುರಿತು ಡಾ.ಚಂದ್ರಶೇಖರ ನಂಗಲಿ ಮಾತನಾಡಿದರು. ದಲಿತರಿಗೂ ಭೂಮಿಗೆ ಅವಿನಾಭಾವ ಸಂಬಂಧವಿದೆ. ಇದನ್ನು ಹಲವು ನೆಲೆಗಳಲ್ಲಿ ಕಾಣಬಹುದಾಗಿದೆ. ಹಾಗೆಯೇ ದಲಿತ ಚಳವಳಿಗೆ ಕಾವ್ಯದ ಸ್ಫೂರ್ತಿ ನೀಡಿದ್ದು ಕೋಲಾರ ಜಿಲ್ಲೆಯಲ್ಲಿ ನಡೆದ ಜನಪರ ಹೋರಾಟಗಳೇ ಸಾಕ್ಷಿ ಎಂದು ವಿಶ್ಲೇಷಿಸಿದರು.

ಕಾರ್ಯಕ್ರಮದಲ್ಲಿ ವರ್ತಮಾನದ ತಲ್ಲಣಗಳಿಗೆ ಮಿಡಿಯುವ ಕವಿತೆಗಳನ್ನು ವಾಚಿಸಲಾಯಿತು. ಜೊತೆಗೆ ಜನಪದ ಕಲಾವಿದೆ ಲಾಫ್ರಿಡ ಶಾಂತಿ ಅವರಿಗೆ ಸಾರಂಗರಂಗ ಗದ್ದುಗೆ ಗೌರವ ನೀಡಿ ಸತ್ಕರಿಸಲಾಯಿತು.

ಗಾಯಕ ಪಿಚ್ಚಳ್ಳಿ ಶ್ರೀನಿವಾಸ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕಿ ಡಾ.ನೇತ್ರಾವತಿ, ನಾಟಕಕಾರ ಡಾ.ಕೈ.ವೈ.ನಾರಾಯಣಸ್ವಾಮಿ, ಸಿ.ಲಕ್ಷ್ಮಿನಾರಾಯಣ, ಜೆ.ಜಿ ನಾಗರಾಜ್, ಡಾ.ವಿ.ರಾಮಕೃಷ್ಣ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.