ಬಂಧನ
(ಪ್ರಾತಿನಿಧಿಕ ಚಿತ್ರ)
ಕೋಲಾರ: ಮಾಲೂರು ತಾಲ್ಲೂಕಿನ ಸೀತಪ್ಪನಹಳ್ಳಿ ಬಳಿ ಪಶ್ಚಿಮ ಬಂಗಾಳದ ಕಾರ್ಮಿಕನನ್ನು ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡಿ ರಾತ್ರಿ ಮನೆಗೆ ತೆರಳುತ್ತಿದ್ದ ಅರ್ನಾಬ್ ಮುನ್ನಾ (25) ಎಂಬುವರನ್ನು ಸೆಪ್ಟೆಂಬರ್ 17ರಂದು ಕೊಲೆ ಮಾಡಲಾಗಿತ್ತು.
ಮಾಲೂರಿನಲ್ಲಿ ಮಟನ್ ಅಂಗಡಿಯಲ್ಲಿ ಕೆಲಸ ಮಾಡುವ ಸೈಯದ್ ವಸೀಂ (32) ಹಾಗೂ ಪಂಚರ್ ಅಂಗಡಿಯಲ್ಲಿ ಕೆಲಸ ಮಾಡುವ ಮಾಸ್ತಿಯ ಸೈಯದ್ ಸಮೀರ್ (32) ಎಂಬುವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬೈಕ್ನಲ್ಲಿ ಹೋಗಿ ಆ ವ್ಯಕ್ತಿಯಿಂದ ಫೋನ್ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ಆಗ ಆ ವ್ಯಕ್ತಿ ಫೋನ್ ಕೊಡಲ್ಲ. ಬೈಕ್ ತಳ್ಳಿ ಬೀಳಿಸುತ್ತಾರೆ. ನಂತರ ಪಕ್ಕೆಗೆ ಚುಚ್ಚಿ ಆರೋಪಿಗಳು ಪರಾರಿಯಾಗಿದ್ದರು ಎಂದು ಹೇಳಿದರು.
ಆರೋಪಿಗಳ ಪತ್ತೆಗಾಗಿ ಇನ್ಸ್ಪೆಕ್ಟರ್ ರಾಮಪ್ಪ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ನೆರೆ ರಾಜ್ಯಗಳಿಗೂ ಹೋಗಿ ಶೋಧಿಸಲಾಗಿತ್ತು. ಇವರಿಬ್ಬರು ಹೊರರಾಜ್ಯದ ಕಾರ್ಮಿಕರನ್ನು ಗುರಿಯಾಗಿಸಿ ತಮ್ಮ ಕಾರ್ಯಾಚರಣೆ ನಡೆಸುತ್ತಿದ್ದರು ಎಂದರು,
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.