ಕೋಲಾರ: ‘ಸಂಸದ ಕೆ.ಎಚ್.ಮುನಿಯಪ್ಪ ಜಾತಿ ಮತ್ತು ಕುಟುಂಬ ರಾಜಕಾರಣ ನಡೆಸುತ್ತಿದ್ದಾರೆ. ನಿರಂತರವಾಗಿ ಸಂಸದರಾಗಿ ಆಯ್ಕೆಯಾಗಿದ್ದರೂ ಕ್ಷೇತ್ರದ ಅಭಿವೃದ್ಧಿ ಕಡೆಗಮನ ಹರಿಸುತ್ತಿಲ್ಲ’ ಎಂದು ದಲಿರ ರಕ್ಷಣಾ ಸಮಿತಿಯ ರಾಜ್ಯ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಎಂ.ಎಸ್.ನಾರಾಯಣಸ್ವಾಮಿ ಆರೋಪಿಸಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘7 ಭಾರಿ ಸಂಸದರಾಗಿ ಆಯ್ಕೆಯಾಗಿದ್ದು ಅಭಿವೃದ್ಧಿ ಅಭಿವೃದ್ಧಿಗೆ ನೀಡಿರುವ ಕೊಡುಗೆ ಶೂನ್ಯ. 2019ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ದಲಿತ ರಕ್ಷಣಾ ಸಮಿತಿಯಿಂದ ಕೋಲಾರ ಮುರಳಿ ಅವರನ್ನು ಬೆಂಬಲಿಸಲಾಗುವುದು’ ಎಂದು ಘೋಷಿಸಿದರು.
‘ಸಂಸದ ಕೆ.ಎಚ್.ಮುನಿಯಪ್ಪ ಅವರಿಗೆ ಚುನಾವಣೆಗಳಲ್ಲಿ ಎಲ್ಲ ವರ್ಗದವರ ಮತ ಬೇಕು. ಆದರೆ ಕೆಲಸ ಕಾರ್ಯಗಳು ಮಾತ್ರ ತಮ್ಮವರಿಗೆ ಮಾತ್ರ ಸೀಮಿತಗೊಳಿಸಿದ್ದಾರೆ. ಉತ್ತಮ ವ್ಯಾಸಾಂಗ ಮಾಡಿರುವ ಕೋಲಾರ ಮುರಳಿ ಅವರಿಗೆ ಸಮಿತಿ ಬೆಂಬಲ ನೀಡಲು ತೀರ್ಮಾನಿಸಿದೆ. ಹೊಸ ಮುಖವನ್ನು ಆಯ್ಕೆ ಮಾಡುವ ಮೂಲಕ ಅಭಿವೃದ್ಧಿಯನ್ನು ನಿರೀಕ್ಷಿಸೋಣ’ ಎಂದರು.
‘ಸಂಸದ ಕೆ.ಎಚ್.ಮುನಿಯಪ್ಪ ಜಾತಿ, ಕುಟುಂಬ ರಾಜಕಾರಣ ಮಾಡುತ್ತಾ ಬಂದಿದ್ದಾರೆ. ಎಸ್ಸಿ ಸಮುದಾಯದಲ್ಲಿ 101 ಉಪ ಜಾತಿಗಳಿದ್ದರೂ ತಾವೊಬ್ಬರೇ ರಾಜಕೀಯವಾಗಿ ಬೆಳೆದಿದ್ದಾರೆ ಇತರರಿಗೆ ಅವಕಾಶ ಕಲ್ಪಿಸಿಲ್ಲ’ ಎಂದು ದೂರಿದರು.
ಅಭ್ಯರ್ಥಿ ಕೋಲಾರ ಮುರುಳಿ ಮಾತನಾಡಿ, ‘ಸಂಸದ ಕೆ.ಎಚ್.ಮುನಿಯಪ್ಪ 7 ಭಾರಿ ಆಯ್ಕೆಯಾಗಿದ್ದು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ನಿರ್ಮಾಣ ಮಾಡಬಹುದಿತ್ತು. ಆದರೆ ಅವರು ಕುಟುಂಬ ರಾಜಕಾರಣ ಮಾಡುತ್ತಿರುವುದರಿಂದ ಕ್ಷೇತ್ರವನ್ನು ಕಡೆಗಣಿಸಿದ್ದಾರೆ’ ಎಂದು ಹೇಳಿದರು.
‘ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಯರಗೋಳ್ ರ್ರಗೋಳು ಯೋಜನೆ ಶುರುವಾಗಿ 12 ವರ್ಷಗಳಾಗಿದೆ. ಈವರೆಗೆ ತೊಟ್ಟು ನೀರು ಬಂದಿಲ್ಲ. ಅಂದಿನ ಶಾಸಕರು, ಅಧಿಕಾರಿಗಳು ಪೈಪ್ಲೈನ್ ಹಾಕಿ ಹಣ ಲೂಟಿ ಮಾಡಿದ್ದಾರೆ ಹೊರತು ಕಾಮಗಾರಿ ಇದುವರೆಗೂ ಪೂರ್ಣಗೊಂಡಿಲ್ಲ’ ಎಂದು ಟೀಕಿಸಿದರು.
‘ಯರಗೋಳು, ಎತ್ತಿನನಹೊಳೆ, ಪರಮಶಿವಯ್ಯ ವರದಿ ಆಧಾರಿತ ನೀರಾವರಿ ಯೋಜನೆ ಜಾರಿಗೊಳಿಸಬೇಕು. ಕೆಸಿ ವ್ಯಾಲಿ ಯೋಜನೆಯಡಿ 3ನೇ ಹಂತದ ಶುದ್ಧೀಕರಣ ಮಾಡಿ ಕೆರೆಗೆ ನೀರು ಹರಿಸಬೇಕು ಎಂಬುದು ತಮ್ಮ ಆಕಾಂಕ್ಷೆಯಾಗಿದೆ’ ಎಂದು ತಿಳಿಸಿದರು.
ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಯಲ್ಲಪ್ಪ, ಪದಾಧಿಕಾರಿಗಳಾದ ಪ್ಯಾರಾಜನ್, ವೆಂಕಟೇಶ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.