ADVERTISEMENT

ಮುಳಬಾಗಿಲು: ಮಾಯವಾದ ರಾಜಕಾಲುವೆಗಳು...

ಕೆ.ತ್ಯಾಗರಾಜ್ ಎನ್.ಕೊತ್ತೂರು.
Published 14 ಏಪ್ರಿಲ್ 2025, 7:34 IST
Last Updated 14 ಏಪ್ರಿಲ್ 2025, 7:34 IST
ಮುಳಬಾಗಿಲು ತಾಲ್ಲೂಕಿನ ನಂಗಲಿ ದೊಡ್ಡ ಕೆರೆಗೆ ನಿರ್ಮಿಸಲಾಗಿದ್ದ ರಾಜಕಾಲುವೆ ಚಿತ್ರಣ
ಮುಳಬಾಗಿಲು ತಾಲ್ಲೂಕಿನ ನಂಗಲಿ ದೊಡ್ಡ ಕೆರೆಗೆ ನಿರ್ಮಿಸಲಾಗಿದ್ದ ರಾಜಕಾಲುವೆ ಚಿತ್ರಣ   

ಮುಳಬಾಗಿಲು: ತಾಲ್ಲೂಕಿನಲ್ಲಿನ ಬಹುತೇಕ ರಾಜಕಾಲುವೆಗಳು ಕೆಲವು ಕಡೆ ಸಂಪೂರ್ಣವಾಗಿ ಮುಚ್ಚಿ ಹೋಗಿದ್ದರೆ ಮತ್ತೆ ಕೆಲವಡೆ ಒತ್ತುವರಿ ಆಗಿವೆ. ಸಂಬಂಧಿಸಿದ ಇಲಾಖೆ ರಾಜಕಾಲುವೆಗಳನ್ನು ಉಳಿಸಬೇಕಾಗಿದ್ದು, ಇದು ಜನರ ಹಕ್ಕೋತ್ತಾಯವಾಗಿದೆ.

ತಾಲ್ಲೂಕಿನಲ್ಲಿ ಒಟ್ಟು 436 ಕೆರೆಗಳಿದ್ದು ಇದರಲ್ಲಿ 53 ಕೆರೆಗಳು ಸಣ್ಣ ನೀರಾವರಿ ಇಲಾಖೆಗೆ ಸೇರಿದ್ದರೆ ಉಳಿದ 383 ಸಣ್ಣ ಕೆರೆಗಳಿವೆ. ಆದರೆ, ಎಲ್ಲ ಕೆರೆಗಳಿಂದ ಅಚ್ಚುಕಟ್ಟು ಪ್ರದೇಶಗಳಿಗೆ ಅಥವಾ ರೈತರ ಜಮೀನುಗಳಿಗೆ ನೀರು ಹೋಗಲು ನಿರ್ಮಿಸಲಾಗಿರುವ ಎಲ್ಲ ರಾಜಕಾಲುವೆಗಳು ಬಹುತೇಕ ಇಲ್ಲವಾಗಿವೆ. ಬೆರಳಣಿಕೆಯಷ್ಟು ರಾಜಕಾಲುವೆಗಳು ಇದ್ದರೂ ಸುಸ್ಥಿಯಲ್ಲಿ ಇಲ್ಲ.

ಸತತ ಮಳೆ ಕೊರತೆ ಬರಗಾಲ ಇರುವುದರಿಂದ ರಾಜಕಾಲುವೆ ಹಾಗೂ ಕೆರೆಗಳಲ್ಲಿ ಗಿಡಗಂಟಿ ಬೆಳೆದು, ರಾಜಕಾಲುವೆಗಳ ಚಪ್ಪಡಿ ಕಲ್ಲುಗಳನ್ನೇ ಕೆಲವರು ಎತ್ತಿಕೊಂಡು ಹೋಗಿದ್ದರು. ಐದು ವರ್ಷಗಳ ಹಿಂದೆ ಸುರಿದ ಭಾರಿ ಮಳೆಗೆ ಬಹುತೇಕ ಕೆರೆಗಳು ತುಂಬಿದ್ದವು. ಆಗ ರಾಜಕಾಲುವೆಗಳು ಸುಸ್ಥಿತಿಯಲ್ಲಿ ಇಲ್ಲದ ಕಾರಣ ನೀರು ಹರಿದು ಹೋಗಲು ಸಾಧ್ಯವಾಗಿರಲಿಲ್ಲ.

ADVERTISEMENT

ತಾಲ್ಲೂಕಿನ ಒಟ್ಟು 436 ಸಣ್ಣ ಹಾಗೂ ದೊಡ್ಡ ಕೆರೆಗಳ ರಾಜಕಾಲುವೆಗಳಲ್ಲಿ ಶೇ90ರಷ್ಟು ಕಾಲುವೆಗಳು ಎಲ್ಲಿದ್ದವು ಎಂದು ಗುರುತು ಇಲ್ಲದಂತೆ ನಶಿಸಿ ಹೋಗಿವೆ. ಕೇವಲ ಶೇ10 ಮಾತ್ರ ಕಾಲುವೆಗಳು ಕಣ್ಣಿಗೆ ಕಾಣಿಸಿದರೂ ತಮ್ಮ ರೂಪವನ್ನೇ ಬದಲಿಸಿಕೊಂಡು ಪೊದೆಗಳಲ್ಲೋ ಗಿಡಗಂಟಿಗಳಲ್ಲೋ ಮುಚ್ಚಿ ಹೋಗಿವೆ. ಮುಂದೆ ಮಳೆ ಸುರಿದು ಕೆರೆಗಳು ತುಂಬಿದರೆ ಕೆರೆ ನೀರನ್ನೇ ನಂಬಿ ಕಾಯುತ್ತಿರುವ ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ರೈತ ಅರಿವು ಪ್ರಭಾಕರ್ ಆಗ್ರಹಿಸಿದರು.

ಈ ವರ್ಷ ಏನಾದರೂ ಕೆರೆಗಳು ತುಂಬಿದರೆ ತೂಬುಗಳನ್ನು ತೆರೆಯುವ ಸಂಭವ ಇದೆ. ಅಕಸ್ಮಾತ್ತಾಗಿ ತೂಬುಗಳನ್ನು ತೆರೆದು ನೀರು ಹರಿಸಿದರೆ ಯಾವ ಕಾಲುವೆಗಳಿಂದ ನೀರು ಹರಿಸುವುದು ಎಂಬುವುದೇ ಯಕ್ಷ ಪ್ರಶ್ನೆಯಾಗಿದೆ.

ರಾಜಕಾಲುವೆಗಳ ಚಪ್ಪಡಿಗಳು ಮಾಯ: ಇನ್ನು ಸುಮಾರು 17-20 ವರ್ಷಗಳ ಹಿಂದೆ ರಾಜಕಾಲುವೆಗಳನ್ನು ಕಲ್ಲು ಚಪ್ಪಡಿಗಳಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಲಾಗಿತ್ತು. ಆದರೆ, ಕಲ್ಲು ಚಪ್ಪಡಿಗಳನ್ನು ಕೆಲವರು ಎತ್ತಿಕೊಂಡು ಹೋಗಿ ಹಸುಗಳ ಕೊಟ್ಟಿಗೆಗೆ ಬಳಸಿಕೊಂಡಿದ್ದಾರೆ, ಕೆಲವರು ಬಚ್ಚಲು ಮನೆಗಳ ನಿರ್ಮಾಣಕ್ಕೆ ಅಥವಾ ಇನ್ನಿತರ ಕೆಲಸ ಕಾರ್ಯಗಳಿಗೆ ಬಳಕೆ ಮಾಡಿಕೊಂಡಿದ್ದಾರೆ.

ರಾಜಕಾಲುವೆಗಳ ಒತ್ತುವರಿ: ತಾಲ್ಲೂಕಿನ ಬೈರಕೂರು ಹೋಬಳಿ ಗ್ರಾಮವೊಂದರ ಬಳಿಯಲ್ಲಿ ಸಿಮೆಂಟ್ ಹಾಗೂ ಇಟ್ಟಿಗೆಗಳಿಂದ ನಿರ್ಮಾಣ ಮಾಡಲಾಗಿದ್ದ ರಾಜಕಾಲುವೆಯನ್ನು ಸ್ಥಳೀಯ ಪ್ರಭಾವಿ ವ್ಯಕ್ತಿಯೊಬ್ಬರು ಕಾಲುವೆಯನ್ನು ಜೆಸಿಬಿ ಯಂತ್ರದಿಂದ ಸಂಪೂರ್ಣವಾಗಿ ಕಿತ್ತು ನಾಶಪಡಿಸಿ ಕೃಷಿ ಜಮೀನಿನಲ್ಲಿ ಸೇರಿಸಿಕೊಂಡಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ತಾಲ್ಲೂಕಿನ ಬೈರಕೂರು ಕೆರೆ ರಾಜಕಾಲುವೆಯನ್ನು ಸ್ಥಳೀಯರೊಬ್ಬರು ಕಿತ್ತು ಒತ್ತುವರಿ ಮಾಡಿಕೊಂಡಿರುವುದು
ವೆಂಕಟಾಪುರ ಕೆರೆ ಬಳಿ ರಾಜಕಾಲುವೆ ಚಪ್ಪಡಿ ಕಲ್ಲುಗಳನ್ನು ಕಿತ್ತು ಹಾಕಿರುವುದು

Cut-off box - ತಿಪ್ಪೆಗಳಾದ ರಾಜಕಾಲುವೆಗಳು ಕೆಲವು ಗ್ರಾಮಗಳಿಗೆ ಹೊಂದಿಕೊಂಡಿರುವ ಕೆರೆಗಳ ರಾಜಕಾಲುವೆಗಳಲ್ಲಿ ಗ್ರಾಮಗಳಿಂದ ಹೊರಬರುವ ಗಲೀಜು ನೀರನ್ನು ಹರಿಸಲು ಬಳಕೆ ಮಾಡುತ್ತಿದ್ದರೆ. ಮತ್ತೆ ಕೆಲವು ಕಡೆ ಮನೆಗಳಲ್ಲಿನ ಹಳೆ ಬಟ್ಟೆ ಹಾಗೂ ಕಸ ಕಡ್ಡಿ ಹಾಕಲು ತಿಪ್ಪೆಯಂತೆ ಬಳಸಿಕೊಳ್ಳುತ್ತಿರುವುದು ಆಶ್ಚರ್ಯಕರ ಸಂಗತಿಯಾಗಿದೆ. ಯಲವಹಳ್ಳಿ ಪ್ರಭಾಕರ್ ರೈತ ಒತ್ತುವರಿ ತೆರವಿಗೆ ಕ್ರಮ ಇತ್ತೀಚೆಗೆ ಕೆರೆಗಳನ್ನು ಸರ್ವೆ ಮಾಡಿ ಕೆರೆಗಳ ಒತ್ತುವರಿಗಳನ್ನು ತೆರವು ಮಾಡುವ ಕೆಲಸ ಪ್ರಾರಂಭವಾಗಿದೆ. ಈಗಾಗಲೇ ದೇವರಾಯ ಸಮುದ್ರ ವ್ಯಾಪ್ತಿಯ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಮುಂದೆ ರಾಜಕಾಲುವೆಗಳ ಒತ್ತುವರಿಯನ್ನೂ ತೆರವು ಮಾಡಲಾಗುವುದು. ವಿ.ಗೀತಾ ತಹಶೀಲ್ದಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.