
ಮುಳಬಾಗಿಲು: ದೇಶದಲ್ಲಿ ಸಮಾನ ಶಿಕ್ಷಣ ಹಾಗೂ ಗುಣಾತ್ಮಕ ಶಿಕ್ಷಣ ಇಲ್ಲದೆ ಬಡವರಿಗೊಂದು, ಶ್ರೀಮಂತರಿಗೊಂದು ರೀತಿ ಶಾಲೆಗಳು ಹಾಗೂ ಶಿಕ್ಷಣ ಇದೆ. ಶಿಕ್ಷಣದಲ್ಲಿ ಅಸಮಾನತೆ ತುಂಬಿದೆ. ಎಲ್ಲರಿಗೂ ಒಂದೇ ರೀತಿಯ ಶಾಲೆಗಳು ಹಾಗೂ ಸಮಾನ ಶಿಕ್ಷಣ ಸಿಗಲು ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ದಾಸ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ನಂಗಲಿ ಗ್ರಾಮದ ಅನುದಾನಿತ ವರಸಿದ್ದ ವಿನಾಯಕ ಗ್ರಾಮಾಂತರ ವಿದ್ಯಾ ಸಂಸ್ಥೆಯಲ್ಲಿ ಭಾನುವಾರ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಪ್ರತಿಭೆ ಇದ್ದರೂ ಒಂದೇ ರೀತಿ ಶಾಲೆಗಳು ಹಾಗೂ ಶಿಕ್ಷಣವಿಲ್ಲದೆ ಇರುವ ಪರಿಣಾಮ ಅಸಮಾನತೆಯಿಂದ ಕೂಡಿದೆ. ಇದು ಮಹಾ ಅಪರಾಧ. ಇದಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಗುಣಾತ್ಮಕ ಶಿಕ್ಷಣಕ್ಕೆ ಸರ್ಕಾರ ಪಠ್ಯ ರೂಪಿಸುವ ಕೆಲಸ ಸರ್ಕಾರದ್ದಾಗಿದೆ ಎಂದರು.
ನೆರೆಯ ಆಂಧ್ರಪ್ರದೇಶದ ಗಡಿಯಲ್ಲಿ ಇರುವ ವಿದ್ಯಾರ್ಥಿಗಳಿಗೆ ಭಾಷೆ ಮೇಲೆ ಸರಿಯಾದ ಹಿಡಿತವಿಲ್ಲ. ಆದರೆ, ಪ್ರತಿಭೆಗೆ ಕೊರತೆ ಇಲ್ಲ. ಹೆಚ್ಚು ಸಮಯ ವಿದ್ಯಾರ್ಥಿಗಳು ಶಿಕ್ಷಕರ ಜೊತೆಯಲ್ಲಿ ಕಳೆಯುವಂತಾಗಬೇಕು. ಶಿಕ್ಷಕರು ಮಕ್ಕಳ ಮನಸ್ಸು ಪ್ರೀತಿಯಿಂದ ಗೆಲ್ಲಬೇಕು. ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಓದಿದ ಶಾಲೆ ಊರಿಗೆ ಸಹಾಯ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಇದೇ ಸಮಯದಲ್ಲಿ ನಂಗಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಎಚ್.ಡಿ.ವಿದ್ಯಾಶ್ರೀ, ವಿದ್ಯಾರ್ಥಿಗಳು, ಪೋಷಕರು ಹಾಗೂ ಶಾಲಾ ಸಿಬ್ಬಂದಿಗೆ ಮೊಬೈಲ್ ಬಳಕೆ, ಅಪರಾಧ ತಡೆಯುವಿಕೆ, ವಾಹನಗಳ ಸಂಚಾರ, ಗಾಂಜಾ, ಬೆಟ್ಟಿಂಗ್ಸ್ ಹಾಗೂ ಆನ್ಲೈನ್ ಗೇಮ್ ಬಗ್ಗೆ ಜಾಗೃತಿ ಮೂಡಿಸಿದರು.
ಎಸ್.ವಿ.ವಿ ಆಡಳಿತ ಮಂಡಳಿ ಅಧ್ಯಕ್ಷ ಎನ್.ಎಸ್.ಶೇಷಾದ್ರಿ, ಪ್ರಾಧ್ಯಾಪಕ ಅರಿವು ಶಿವಪ್ಪ, ಪಂಡಿತ್ ಮುನಿವೆಂಕಟಪ್ಪ, ಕೆ.ಎನ್.ಸುಬ್ರಮಣಿ, ಪಿ.ಅನಿಲ್, ಲಕ್ಷ್ಮಣಪ್ಪ, ಮಾರ್ಕೊಂಡರೆಡ್ಡಿ, ಎನ್.ಜಿ ಜಗದೀಶ್, ಜಿ.ಎ ಮಧುಸೂಧನ್, ಪ್ರಾಂಶುಪಾಲ ಅಬ್ಬಯ್ಯ, ಮಾದವರೆಡ್ಡಿ, ಕೇಶವ, ಮುಖ್ಯ ಶಿಕ್ಷಕಿ ಶಾರದಮ್ಮ, ಸಬ್ ಇನ್ಸ್ಪೆಕ್ಟರ್ ಎಚ್.ಡಿ.ವಿದ್ಯಾಶ್ರೀ, ವಸೀಮ್ ಅಕ್ರಮ್, ವಿಜಯ್ ಕುಮಾರ್ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.