ADVERTISEMENT

ಮುಳಬಾಗಿಲು | ರಸ್ತೆಯಲ್ಲಿ ಡಾಂಬರು ಮಾಯ...

ಕೆ.ತ್ಯಾಗರಾಜ್ ಎನ್.ಕೊತ್ತೂರು.
Published 8 ಡಿಸೆಂಬರ್ 2025, 5:45 IST
Last Updated 8 ಡಿಸೆಂಬರ್ 2025, 5:45 IST
ಮುಳಬಾಗಿಲು ತಾಲ್ಲೂಕಿನ ಯಳಗೊಂಡಹಳ್ಳಿ ಹಾಗೂ ಮಿಣಜೇನಹಳ್ಳಿ ಮಾರ್ಗದ ರಸ್ತೆಯ ಸ್ಥಿತಿ
ಮುಳಬಾಗಿಲು ತಾಲ್ಲೂಕಿನ ಯಳಗೊಂಡಹಳ್ಳಿ ಹಾಗೂ ಮಿಣಜೇನಹಳ್ಳಿ ಮಾರ್ಗದ ರಸ್ತೆಯ ಸ್ಥಿತಿ   

ಮುಳಬಾಗಿಲು: ತಾಲ್ಲೂಕಿನಿಂದ ಯಳಗೊಂಡಹಳ್ಳಿ ಹಾಗೂ ಮಿಣಜೇನಹಳ್ಳಿ ಮಾರ್ಗದ ಮೂಲಕ ಬಂಗಾರಪೇಟೆ ತಾಲ್ಲೂಕಿನ ಜಯಮಂಗಲ ಹಾಗೂ ಕೆಜಿಎಫ್ ಕಡೆಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಸಂಪೂರ್ಣವಾಗಿ ಜಲ್ಲಿ ಕಲ್ಲುಗಳಿಂದ ಕೂಡಿ ಡಾಂಬರೇ ಮಾಯವಾಗಿದೆ. ಜೊತೆಗೆ ಇದೇ ರಸ್ತೆಯಲ್ಲಿನ ಸೇತುವೆ ಬೀಳುವ ಹಂತಕ್ಕೆ ತಲುಪಿದೆ.

ಬಂಗಾರಪೇಟೆ ಹಾಗೂ ಕೆಜಿಎಫ್ ತಾಲ್ಲೂಕುಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿ ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸಲು ಹೈರಾಣಾಗುತ್ತಿದ್ದಾರೆ.

ಯಳಗೊಂಡಹಳ್ಳಿಯಿಂದ ಬಂಗಾರಪೇಟೆ ಗಡಿವರೆಗೂ ರಸ್ತೆ ಡಾಂಬರು ಸಂಪೂರ್ಣವಾಗಿ ಕಿತ್ತು ಹೋಗಿದ್ದು, ವಾಹನ ಸವಾರರು ರಸ್ತೆ ಬಿಟ್ಟು ರೈತರ ಜಮೀನುಗಳಲ್ಲಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಕ್ಕಳು, ವಯೋವೃದ್ಧರು, ಗರ್ಭಿಣಿಯರು, ಬಾಣಂತಿಯರು ರಸ್ತೆಯಲ್ಲಿ ಸಂಚರಿಸಲು ಅಸಾಧ್ಯ.

ADVERTISEMENT

ಶಿಥಿಲಾವಸ್ಥೆ ತಲುಪಿರುವ ಸೇತುವೆ: ಪಾಲಾರ್ ನದಿಗೆ ಅಡ್ಡಲಾಗಿ ಕಟ್ಟಿರುವ ಹಾಗೂ ತಾಲ್ಲೂಕಿನಲ್ಲೇ ಅತ್ಯಂತ ಹಳೆಯ ಸೇತುವೆ ಶಿಥಿಲಾವಸ್ಥೆ ತಲುಪಿದೆ. ಮುಳಬಾಗಿಲು ತಾಲ್ಲೂಕಿನ ಮಿಣಜೇನಹಳ್ಳಿ ಸಮೀಪದಲ್ಲಿರುವ ಸೇತುವೆಯ ಸಿಮೆಂಟ್ ಬಹುತೇ ಉದುರುತ್ತಾ, ಅಲ್ಲಲ್ಲಿ ಬಿರುಕು ಬಿಟ್ಟಿದೆ. ಇದರಿಂದ ಕೆಲವೇ ದಿನಗಳಲ್ಲಿ ಸೇತುವೆ ಅವನತಿಯತ್ತ ಸಾಗಿದೆ.

ಬೇತಮಂಗಲ ಹಾಗೂ ರಾಮಸಂದ್ರ ಕೆರೆಗಳಿಗೆ ಮುಳಬಾಗಿಲು ತಾಲ್ಲೂಕಿನ ಕೆರೆಗಳ ಕೋಡಿ ನೀರು ಹೋಗುವ ಏಟಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಯ ನೆಲ ಹಾಸು ಹಾಗೂ ವಾಹನ ಸಂಚರಿಸುವ ರಸ್ತೆ ಬಿಟ್ಟರೆ ಉಳಿದಂತೆ ಸೇತುವೆಯ ನಿಲುಗಡೆ ಹಾಗೂ ಅಡ್ಡಲಾಗಿ ಕಟ್ಟಿರುವ ಕಂಬಗಳು ಮುರಿದು ಬೀಳುವ ಹಂತದಲ್ಲಿದೆ. ಅಕಸ್ಮಾತ್ ಸೇತುವೆಗೆ ಯಾವುದೇ ವಿಧದ ಹಾನಿಯಾದರೂ ಯಳಗೊಂಡಹಳ್ಳಿ, ಮಿಣಜೇನಹಳ್ಳಿ ಮಾರ್ಗದ ಮೂಲಕ ಬಂಗಾರಪೇಟೆ ತಾಲ್ಲೂಕಿನ ಜಯಮಂಗಲ, ಘಟ್ಟ ಕಾಮದೇನಹಳ್ಳಿ, ಕೆಜಿಎಫ್ ಮತ್ತಿತರರ ಕಡೆಗಳಿಗೆ ಸಂಚಾರ ನಿಲ್ಲಿಸಬೇಕಾದ ಸ್ಥಿತಿ ಎದುರಾಗುತ್ತದೆ.

15 ವರ್ಷಗಳ ಹಿಂದೆ ನಿರ್ಮಾಣವಾದ ಸೇತುವೆಯ ಕಂಬಗಳಲ್ಲಿ ಸಿಮೆಂಟ್ ಉದುರುತ್ತಿದೆ. ಕಂಬಗಳ ಒಳಗಿನ ಕಂಬಿಗಳು ಕಾಣುತ್ತಿದ್ದು, ಸಂಪೂರ್ಣ ಮುರಿದಿವೆ. ಕೆಲವು ಕಂಬಿಗಳು ಮುರಿದು ಹಾಳಾಗಿವೆ. ಸುಮಾರು 50 ಮೀ ಉದ್ದದ ಸೇತುವೆ ಇಕ್ಕೆಲಗಳಲ್ಲಿರುವ ಸಿಮೆಂಟ್ ಉದುರುತ್ತಿದೆ. 

ಶಿಥಿಲಾವಸ್ಥೆಯ ಮಿಣಜೇನಹಳ್ಳಿ ಸಮೀಪದ ಸೇತುವೆ
ಸೇತುವೆಯ ಕಂಬಗಳು ಬಿರುಕು ಬಿಟ್ಟಿರುವುದು 
ಸೇತುವೆಯ ಸಿಮೆಂಟ್ ಉದುರಿ ಕಬ್ಬಿಣದ ಕಂಬಿ ಕಾಣುತ್ತಿರುವುದು 

ಶೀಘ್ರ ಡಾಂಬರು ಕಾಮಗಾರಿ ಆರಂಭ  ಯಳಗೊಂಡಹಳ್ಳಿ ಹಾಗೂ ಮಿಣಜೇನಹಳ್ಳಿ ಮಾರ್ಗದ ಮೂಲಕ ಸೇತುವೆಯವರೆಗೂ ರಸ್ತೆ ಡಾಂಬರೀಕರಣಕ್ಕೆ  ಈಗಾಗಲೇ ಮೋರಿಗಳ ಕೆಲಸ ನಡೆಯುತ್ತಿದೆ. ಮೋರಿಗಳ ಕೆಲಸ ಮುಗಿದ ಮೇಲೆ ಡಾಂಬರು ಕಾಮಗಾರಿ ಪ್ರಾರಂಭವಾಗಲಿದೆ. ಹಾಗೂ ಸೇತುವೆಯ ಸಮಸ್ಯೆ ಪರಿಶೀಲಿಸಲಾಗುವುದು. ಮೂಡಲಗಿರಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಲೋಕೋಪಯೋಗಿ ಇಲಾಖೆ ಸೇತುವೆಗೆ ಬೇಕಿದೆ ನವೀಕರಣ  ಯಳಗೊಂಡಹಳ್ಳಿ ಹಾಗೂ ಮಿಣಜೇನಹಳ್ಳಿ ಮಾರ್ಗದ ಮೂಲಕ‌ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಡಾಂಬರು ಮಾಯವಾಗಿ ವರ್ಷಗಳೇ ಕಳೆದಿದೆ. ಜಲ್ಲಿ ಕಲ್ಲುಗಳ ರಸ್ತೆಯಾಗಿ ಬದಲಾಗಿದೆ. ಮಿಣಜೇನಹಳ್ಳಿ ಸಮೀಪದ ಸೇತುವೆ ಬಹುತೇಕ ಶಿಥಿಲಾವಸ್ಥೆ ತಲುಪಿದ್ದು ನವೀಕರಣ ನಡೆಯಬೇಕಿದೆ. ನಾಗರಾಜ್ ಸ್ಥಳೀಯ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.