ಬಂಗಾರಪೇಟೆ (ಕೋಲಾರ ಜಿಲ್ಲೆ): ತಾಲ್ಲೂಕಿನ ಹಂಚಾಳ ಬಳಿಯವ ಜಿಯೋನ್ ಹಿಲ್ಸ್ ಗಾಲ್ಫ್ ರೆಸಾರ್ಟ್ನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ರಮೇಶ್ ಎಂಬುವರ ವಿಲ್ಲಾ ಮೇಲೆ ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಧರಣಿದೇವಿ ಮಾಲಗತ್ತಿ ನೇತೃತ್ವದ ತಂಡ ದಾಳಿ ನಡೆಸಿ ಅಕ್ರಮವಾಗಿ ಇಟ್ಟಿದ್ದ ಸುಮಾರು ₹ 4.04 ಕೋಟಿ ವಶಕ್ಕೆ ಪಡೆದಿದೆ.
ವಿಲ್ಲಾ ಒಳಗೆ ₹ 2.54 ಕೋಟಿ, ವಿಲ್ಲಾ ಮುಂದೆ ನಿಲ್ಲಿಸಿದ್ದ ಕಾರಿನಲ್ಲಿ ₹ 1.5 ಕೋಟಿ ಇರುವುದು ಪತ್ತೆಯಾಗಿದೆ. ಬಂಗಾರಪೇಟೆ ಕ್ಷೇತ್ರದ ಪಂಚಾಯಿತಿವಾರು ಹೆಸರು ಬರೆದು ಹಣದ ಬಂಡಲ್ ಮಾಡಿ ಇಡಲಾಗಿತ್ತು ಎಂಬುದು ಗೊತ್ತಾಗಿದೆ. ರಾಜಕಾರಣಿಯೊಬ್ಬರು ಮತದಾರರಿಗೆ ಹಂಚಲು ಕೂಡಿಟ್ಟಿದ್ದ ಹಣ ಎಂದು ಹೇಳಲಾಗಿದೆ.
ಧರಣಿದೇವಿ ನೇತೃತ್ವದ ತಂಡ ಕಾರಿನಲ್ಲಿ ವಿಲ್ಲಾದತ್ತ ಬರುವುದು ಗೊತ್ತಾಗಿ ಉದ್ಯಮಿಯು ಮತ್ತೊಂದು ಕಾರಿನಲ್ಲಿ ಪರಾರಿಯಾಗಿದ್ದಾರೆ. ಸಂಜೆ 4 ಗಂಟೆಗೆ ಸುಮಾರಿಗೆ ದಾಳಿ ನಡೆಸಿದ್ದು, 7 ಗಂಟೆವರೆಗೆ ಪರಿಶೀಲನೆ ನಡೆಸಿದ್ದಾರೆ. ಬಂಗಾರಪೇಟೆ ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
‘ವಿಲ್ಲಾದಲ್ಲಿ ಎರಡು ವರ್ಷಗಳಿಂದ ರಮೇಶ್ ಎಂಬುವರು ಬಾಡಿಗೆಗೆ ಇದ್ದರು. ದಾಳಿ ನಡೆಸಿದ ಸಂದರ್ಭದಲ್ಲಿ ಅವರು ಇರಲಿಲ್ಲ. ಹಣಕ್ಕೆ ಸಂಬಂಧಿಸಿದ ಯಾವುದೇ ದಾಖಲೆ ಕೊಟ್ಟಿಲ್ಲ, ಯಾರೂ ಹಣ ತಮ್ಮದೆಂದು ಹೇಳಿಕೊಂಡಿಲ್ಲ’ ಎಂದು ಧರಣಿದೇವಿ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.