ADVERTISEMENT

ವಿದ್ಯುತ್ ಅವಘಡ: ಬೆಮಲ್‌ ಗುತ್ತಿಗೆ ನೌಕರ ಸಾವು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 1:16 IST
Last Updated 8 ಫೆಬ್ರುವರಿ 2021, 1:16 IST
ಕೆಜಿಎಫ್ ಬೆಮಲ್‌ ಕಾರ್ಖಾನೆಯ ಮುಂಭಾಗದಲ್ಲಿ ಗುತ್ತಿಗೆ ಕಾರ್ಮಿಕನ ಶವವನ್ನಿಟ್ಟು ಕುಟುಂಬದ ಸದಸ್ಯರು ರೋಧಿಸಿದರು
ಕೆಜಿಎಫ್ ಬೆಮಲ್‌ ಕಾರ್ಖಾನೆಯ ಮುಂಭಾಗದಲ್ಲಿ ಗುತ್ತಿಗೆ ಕಾರ್ಮಿಕನ ಶವವನ್ನಿಟ್ಟು ಕುಟುಂಬದ ಸದಸ್ಯರು ರೋಧಿಸಿದರು   

ಕೆಜಿಎಫ್‌: ಬೆಮಲ್‌ ಕಾರ್ಖಾನೆಯಲ್ಲಿ ವಿದ್ಯುತ್ ಅಪಘಾತದಿಂದ ಭಾನುವಾರ ಮೃತಪಟ್ಟ ಗುತ್ತಿಗೆ ಕಾರ್ಮಿಕನಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಕುಟುಂಬದ ಸದಸ್ಯರು ಕಾರ್ಮಿಕನ ಶವವನ್ನು ಬೆಮಲ್‌ ಕಾರ್ಖಾನೆ ಮುಂಭಾಗದಲ್ಲಿಟ್ಟು ಪ್ರತಿಭಟನೆ ನಡೆಸಿದರು.

ನಗರದ ಅಶೋಕನಗರ ನಿವಾಸಿ ಶ್ರೀಧರ್‌ (45) ಬೆಮಲ್ ಕಾರ್ಖಾನೆಯಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ ಕಾರ್ಖಾನೆಯಲ್ಲಿ ಯಂತ್ರ ತೊಳೆಯುವ ಕಾರ್ಯ ನಿರ್ವಹಿಸುತ್ತಿದ್ದಾಗ, ಆಕಸ್ಮಿಕವಾಗಿ ವಿದ್ಯುತ್ ಸಂಪರ್ಕ ಉಂಟಾಗಿ, ಕೆಳಗೆ ಬಿದ್ದರು. ತಲೆಗೆ ಕೂಡ ಪೆಟ್ಟಾಗಿತ್ತು. ಸ್ಥಳದಲ್ಲಿಯೇ ಅವರು ಮೃತಪಟ್ಟಿದ್ದರು.

ಮೃತನ ಶವವನ್ನು ಮುಖ್ಯ ದ್ವಾರದಲ್ಲಿಟ್ಟು ಪ್ರತಿಭಟನೆ ನಡೆಸಿದ ಕುಟುಂಬದ ಸದಸ್ಯರು ಮೃತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ನಂತರ ಕುಟುಂಬದ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬೆಮಲ್ ಅಧಿಕಾರಿಗಳು ಮೃತರಿಗೆ ಬರಬೇಕಾದ ವಿಮೆ ಹಣ ಶೀಘ್ರದಲ್ಲಿಯೇ ಪಾವತಿ ಮಾಡಲು ವ್ಯವಸ್ಥೆ ಮಾಡುವುದಾಗಿ ಹಾಗೂ ಮೃತನ ಕುಟುಂಬದ ಸದಸ್ಯರಿಗೆ ಗುತ್ತಿಗೆ ನೌಕರಿ ನೀಡಲಾಗುವುದು ಎಂದು ಭರವಸೆ ನೀಡಿದ ನಂತರ ಶವವನ್ನು ಸಾಗಿಸಲಾಯಿತು.

ADVERTISEMENT

ಸರ್ಕಲ್ ಇನ್‌ಸ್ಪೆಕ್ಟರ್ ವೆಂಕಟರಮಣಪ್ಪ ಸ್ಥಳಕ್ಕೆ ಭೇಟಿ ನೀಡಿದ್ದರು. ಬೆಮಲ್‌ ನಗರ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.