ADVERTISEMENT

ರಾಮಮಂದಿರ ಉದ್ಘಾಟನೆ: ಹರಿಪ್ರಸಾದ್ ಹೇಳಿಕೆ ಬಗ್ಗೆ ಮಾಹಿತಿಯಿಲ್ಲ- ಸಚಿವ ಪರಮೇಶ್ವರ

ರಾಮಮಂದಿರ ಉದ್ಘಾಟನೆ ರಾಜಕೀಯ ಕಾರ್ಯಕ್ರಮವಾಗದಿರಲಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2024, 11:56 IST
Last Updated 3 ಜನವರಿ 2024, 11:56 IST
<div class="paragraphs"><p>ಸಚಿವ ಪರಮೇಶ್ವರ</p></div>

ಸಚಿವ ಪರಮೇಶ್ವರ

   

ಕೋಲಾರ: ‘ಬಿ.ಕೆ.ಹರಿಪ್ರಸಾದ್ ನೀಡಿರುವ ಹೇಳಿಕೆ ಬಗ್ಗೆ ನನಗೆ ಮಾಹಿತಿಯಿಲ್ಲ. ಅವರಿಗೆ ಗೊತ್ತಿರಬಹುದೇನೋ? ಇಲಾಖೆಯ ಗಮನಕ್ಕೂ ಆ ವಿಚಾರ ಬಂದಿಲ್ಲ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ಅಯೋಧ್ಯೆ ವಿಚಾರವಾಗಿ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಗೋಧ್ರಾ ರೀತಿಯ ಮತ್ತೊಂದು ದುರಂತ ಸಂಭವಿಸಲಿದೆ ಎಂಬ ಹರಿಪ್ರಸಾದ್‌ ಹೇಳಿಕೆ ಕುರಿತು ನಗರದಲ್ಲಿ ಬುಧವಾರ ಸುದ್ದಿಗಾರರ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು.

ADVERTISEMENT

‘ಹರಿಪ್ರಸಾದ್‌ ಯಾವ ಮಾಹಿತಿ ಆಧರಿಸಿ ಅಥವಾ ಯಾವ ದೃಷ್ಟಿಕೋನದಲ್ಲಿ ಹೇಳಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಇದು ವೈಯಕ್ತಿಕ ಹೇಳಿಕೆ ಎಂದು ಅವರೇ ಹೇಳಿಕೊಂಡಿರುವಾಗ ಮತ್ತೆ ಇನ್ನೇನಿದೆ? ಸರ್ಕಾರಕ್ಕೆ ಯಾರೇ ಆಗಲಿ ಒಳ್ಳೆಯ ಸಲಹೆ ನೀಡಿದರೆ ಪಡೆದು ಸ್ವೀಕಾರ ಮಾಡಿ ಅಗತ್ಯ ಕ್ರಮಕೈಗೊಳ್ಳಲಾಗುವುದು’ ಎಂದರು.

‘ರಾಮಮಂದಿರ ಉದ್ಘಾಟನೆಯ ಧಾರ್ಮಿಕ ಕಾರ್ಯಕ್ರಮವು ರಾಜಕೀಯ ಕಾರ್ಯಕ್ರಮವಾಗಬಾರದು. ಶ್ರೀರಾಮ ಒಳ್ಳೆಯ ಆಡಳಿತ ನಡೆಸಿದ್ದ. ಅದಕ್ಕೆ ರಾಮರಾಜ್ಯ ಎಂದು ಕರೆದಿದ್ದರು. ದೇಶವು ರಾಮರಾಜ್ಯ ಆಗಬೇಕು ಎನ್ನುವ ಬಗ್ಗೆ ನಾವೂ ಅನೇಕ ಭಾಷಣ ಮಾಡಿದ್ದೇವೆ. ರಾಮ ಎಲ್ಲರಿಗೂ ಸೇರಿದವನಾಗಿದ್ದರಿಂದ ಇದರಲ್ಲಿ ರಾಜಕೀಯ ಬೇಡ ಎಂಬುದನ್ನು ನಾನೂ ಹೇಳಿದ್ದೇನೆ’ ಎಂದು ತಿಳಿಸಿದರು.

ಕೋಲಾರದಲ್ಲಿನ ಮರ್ಯಾದಾ ಹತ್ಯೆ, ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆದು ಅಗತ್ಯ ಕ್ರಮಕ್ಕೆ ಸೂಚಿಸುವುದಾಗಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.