ADVERTISEMENT

ನೆರೆಯಿಂದ ಊರು ತೊರೆದು ಬಂದವರಿಗೆ ನೆರವಾಗಿ ಮಾನವೀಯತೆ ಮರೆದ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2020, 10:49 IST
Last Updated 3 ಅಕ್ಟೋಬರ್ 2020, 10:49 IST
ನೆರೆ ಹಾವಳಿಯಿಂದ ನಿರ್ಗತಿಕರಾಗಿ ತಾಯಿಯ ಜತೆ ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮಕ್ಕೆ ವಲಸೆ ಬಂದಿರುವ ಕಾರವಾರದ ಬಾಲಕ ಹೇಮಂತ್‌ಕುಮಾರ್‌ಗೆ ಗ್ರಾಮಸ್ಥ ಮಹೇಂದ್ರ ಅವರು ಸೈಕಲ್‌ ಕೊಡುಗೆಯಾಗಿ ನೀಡಿದರು.
ನೆರೆ ಹಾವಳಿಯಿಂದ ನಿರ್ಗತಿಕರಾಗಿ ತಾಯಿಯ ಜತೆ ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮಕ್ಕೆ ವಲಸೆ ಬಂದಿರುವ ಕಾರವಾರದ ಬಾಲಕ ಹೇಮಂತ್‌ಕುಮಾರ್‌ಗೆ ಗ್ರಾಮಸ್ಥ ಮಹೇಂದ್ರ ಅವರು ಸೈಕಲ್‌ ಕೊಡುಗೆಯಾಗಿ ನೀಡಿದರು.   

ಕೋಲಾರ: ಕಾರವಾರದಲ್ಲಿ ನೆರೆ ಹಾವಳಿಯ ಸಂಕಷ್ಟಕ್ಕೆ ಸಿಲುಕಿ ಹುಟ್ಟೂರು ತೊರೆದು ತಾಯಿಯೊಂದಿಗೆ ಜಿಲ್ಲೆಗೆ ವಲಸೆ ಬಂದ ಬಾಲಕ ಹೇಮಂತ್‌ಕುಮಾರ್‌ಗೆ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆ ಶಿಕ್ಷಕರು ಹಾಗೂ ಗ್ರಾಮಸ್ಥರು ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.

ಕಾರವಾರದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಹೇಮಂತ್‌ಕುಮಾರ್‌ ಮನೆ ಸಂಪೂರ್ಣ ಕುಸಿದಿತ್ತು. ಸೂರು ಕಳೆದುಕೊಂಡು ಬೀದಿ ಪಾಲಾದ ಬಾಲಕ ಮತ್ತು ಆತನ ತಾಯಿಯು ಉಟ್ಟ ಬಟ್ಟೆಯಲ್ಲೇ ತಾಲ್ಲೂಕಿನ ಅರಾಭಿಕೊತ್ತನೂರಿಗೆ ಬಂದು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು.

ಹೇಮಂತ್‌ಕುಮಾರ್‌ನ ಶೈಕ್ಷಣಿಕ ದಾಖಲೆಪತ್ರಗಳು ಹಾಗೂ ಪುಸ್ತಕಗಳು ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಪರಿಸ್ಥಿತಿ ಅತಂತ್ರವಾಗಿದೆ. ಬಾಲಕ ಮತ್ತು ಆತನ ತಾಯಿಯ ಸಂಕಷ್ಟ ಅರಿತ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್‌ಕುಮಾರ್‌ ಅವರು ವಯಸ್ಸಿನ ಆಧಾರದಲ್ಲಿ ಮತ್ತು ಕಲಿಕಾ ಸಾಮರ್ಥ್ಯ ಆಧರಿಸಿ ಆತನನ್ನು 9ನೇ ತರಗತಿ ಆಂಗ್ಲ ಮಾಧ್ಯಮಕ್ಕೆ ದಾಖಲು ಮಾಡಿಕೊಂಡಿದ್ದಾರೆ.

ADVERTISEMENT

ಶಾಲೆ ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿಯು ಹೇಮಂತ್‌ಕುಮಾರ್‌ಗೆ ಪಠ್ಯಪುಸ್ತಕ, ಬಟ್ಟೆ ಕೊಡುಗೆಯಾಗಿ ನೀಡಿದ್ದಾರೆ. ಅಲ್ಲದೇ, ಮನೆಗೆ ದಿನಸಿ ಪದಾರ್ಥ ಮತ್ತು ಪಾತ್ರೆಗಳನ್ನು ನೀಡಿ ಜೀವನಕ್ಕೆ ನೆರವಾಗಿದ್ದಾರೆ.ಗ್ರಾಮಸ್ಥ ಎ.ಮಹೇಂದ್ರ ಅವರು ಬಾಲಕನಿಗೆ ಶಾಲೆಗೆ ಹೋಗಿ ಬರುವುದಕ್ಕೆ ಸೈಕಲ್‌ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ. ಹೇಮಂತ್‌ಕುಮಾರ್‌, ಗ್ರಾಮಸ್ಥರು ಹಾಗೂ ಶಾಲೆ ಶಿಕ್ಷಕರ ನೆರವಿನಿಂದ ಶೈಕ್ಷಣಿಕ ಜೀವನ ಮುಂದುವರಿಸುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.