ADVERTISEMENT

ಕೋಲಾರ| ಮೀಸಲಾತಿ ‌ಭಿಕ್ಷೆ ಅಲ್ಲ, ನಮ್ಮ ಹಕ್ಕು: ವಿ.ಎಸ್‌.ಉಗ್ರಪ್ಪ

ಪ್ರಧಾನಿ ಬಳಿ ಸರ್ವಪಕ್ಷ ನಿಯೋಗ ಕೊಂಡೊಯ್ಯಲು ಸಿಎಂ ಸಿದ್ದರಾಮಯ್ಯಗೆ ಉಗ್ರಪ್ಪ ಒತ್ತಾಯ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 5:54 IST
Last Updated 9 ಫೆಬ್ರುವರಿ 2026, 5:54 IST
ಕೋಲಾರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಸದ, ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆಯ ಅಧ್ಯಕ್ಷ ವಿ.ಎಸ್‌.ಉಗ್ರಪ್ಪ ಮಾತನಾಡಿದರು
ಕೋಲಾರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಸದ, ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆಯ ಅಧ್ಯಕ್ಷ ವಿ.ಎಸ್‌.ಉಗ್ರಪ್ಪ ಮಾತನಾಡಿದರು    

ಕೋಲಾರ: ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗದವರಿಗೆ ಮೀಸಲಾತಿ ಪ್ರಮಾಣವನ್ನು ಶೇ 56ಕ್ಕೆ ಹೆಚ್ಚಿಸಿ ವಿಧಾನ ಮಂಡಲದ ಅಧಿವೇಶನದಲ್ಲಿ ಕೈಗೊಂಡ ನಿರ್ಣಯದಂತೆ ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ಬಳಿ ಸರ್ವಪಕ್ಷ ನಿಯೋಗ ಕೊಂಡೊಯ್ಯಬೇಕು ಎಂದು ಮಾಜಿ ಸಂಸದ ಹಾಗೂ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆಯ ಅಧ್ಯಕ್ಷ ವಿ.ಎಸ್‌.ಉಗ್ರಪ್ಪ ಆಗ್ರಹಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ವೇದಿಕೆ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮೀಸಲಾತಿ ‌ಭಿಕ್ಷೆ ಅಲ್ಲ; ನಮ್ಮ ಹಕ್ಕು. ನಮ್ಮನ್ನು ಭಿಕ್ಷುಕರಂತೆ, ಎರಡನೇ ದರ್ಜೆ ನಾಗರಿಕರಂತೆ‌ ನೋಡಬೇಡಿ. ಮೀಸಲಾತಿ ಯಾರಪ್ಪನ ಸ್ವತ್ತು ಅಲ್ಲ. ರಾಜ್ಯದ ಎಲ್ಲಾ 224 ಶಾಸಕರು ಹಾಗೂ 28 ಸಂಸದರು ಒತ್ತಡ ಹೇರಬೇಕು ಎಂದು ಒತ್ತಾಯಿಸಿದರು.

ADVERTISEMENT

ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು ಎಸ್‌ಸಿ ಮೀಸಲಾತಿಯನ್ನು ಶೇ 15ರಿಂದ ಶೇ 17ಕ್ಕೆ ಮತ್ತು ಎಸ್‌ಟಿ ಮೀಸಲಾತಿಯನ್ನು ಶೇ 3 ರಿಂದ ಶೇ 7ಕ್ಕೆ ಏರಿಸಿತ್ತು. ಇದರಿಂದ ಒಟ್ಟು ಮೀಸಲಾತಿ ಪ್ರಮಾಣ ಶೇ 56ಕ್ಕೆ ಏರಿಕೆಯಾಗಿತ್ತು. ಆದರೆ, ಕೆಲವರು ಇದನ್ನು ಕೆಎಟಿ ಹಾಗೂ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರಿಂದ ತಡೆಯಾಜ್ಞೆ ನೀಡಿದ್ದು ಹಿಂದಿನ ಮೀಸಲಾತಿಯೇ ಮುಂದುವರಿದಿದೆ. ಹೀಗಾಗಿ, ಉದ್ಯೋಗ ನೇಮಕಾತಿ ತಡೆಯಲಾಗಿದೆ. ಎಸ್‌ಸಿ, ಎಸ್‌ಟಿ, ಓಬಿಸಿಗೆ ತೊಂದರೆಯಾಗಿದೆ ಎಂದರು.

ನಾನಿಲ್ಲಿ ರಾಜಕಾರಣಿಯಾಗಿ ಬಂದಿಲ್ಲ; ಮಹರ್ಷಿ ವಾಲ್ಮೀಕಿ ಜನಾಂಗದ ಪ್ರತಿನಿಧಿಯಾಗಿ ಬಂದಿದ್ದೇನೆ. ಎಲ್ಲಾ ರಾಜಕಾರಣಿಗಳು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾರೆ. ವಾಸ್ತವವಾಗಿ ನಮ್ಮ ಆ ಹಕ್ಕುಗಳನ್ನು ರಕ್ಷಣೆ ಮಾಡಲು ಸ್ವಾತಂತ್ರ್ಯ ಬಂದು 78 ವರ್ಷವಾದರೂ ಆಗಿಲ್ಲ. ಈ ಸಮಸ್ಯೆಗೆ ರಾಜಕೀಯ ನಾಯಕರು,‌ ಪಕ್ಷಗಳೇ ಕಾರಣ‌ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಎಸ್‌ಸಿಯಲ್ಲಿ 101 ಜಾತಿ ಹಾಗೂ ಎಸ್‌ಟಿಯಲ್ಲಿ 51 ಜಾತಿ ವಿಂಗಡಣೆ ಮಾಡಲಾಗಿದೆ. ಸುಮಾರು 1.25 ಕೋಟಿ ಎಸ್‌ಸಿ ಹಾಗೂ 50 ಲಕ್ಷಕ್ಕೂ ಹೆಚ್ಚು ಎಸ್‌ಟಿ ಜನರಿದ್ದಾರೆ. 2.25 ಕೋಟಿಗೂ ಅಧಿಕ ಮಂದಿ ಓಬಿಸಿ ಜನರಿದ್ದಾರೆ ಎಂದು ಹೇಳಿದರು.

ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕೆಂದು ಸಂವಿಧಾನದಲ್ಲಿ ಅಂಬೇಡ್ಕರ್ ಸ್ಪಷ್ಟಪಡಿಸಿದ್ದಾರೆ. ಸಮಾಜದ ಮುಖ್ಯವಾಹಿನಿಗೆ ತರಲು ಮೀಸಲಾತಿ ‌ನೀಡಲಾಗಿದೆ. ಆದರೆ, ಈ ವರ್ಗವನ್ನು ಯಾವುದಾದರೂ ರೀತಿಯಲ್ಲಿ ಓಲೈಸಬಹುದು ಎಂಬ ಯೋಚನೆಯಲ್ಲಿ ರಾಜಕೀಯ ಪಕ್ಷಗಳು ಇವೆ ಎಂದರು.

ಮೀಸಲಾತಿ ಪ್ರಮಾಣ ಶೇ 50 ಮೀರಬಾರದು ಎಂಬ ನಿಯಮವಿತ್ತು. ಆದರೆ, ಪಕ್ಕದ‌ ರಾಜ್ಯ ತಮಿಳುನಾಡಿನಲ್ಲಿ ಶೇ 69ಮೀಸಲಾತಿ ಲಭ್ಯವಾಗಿದೆ‌. ಅಲ್ಲಿ ಎಲ್ಲಾ ಸಮುದಾಯಕ್ಕೂ ಮೀಸಲಾತಿ ಲಭಿಸಿದೆ ಎಂದು ಮಾಹಿತಿ ನೀಡಿದರು.

ಮುಂಬರುವ ಬಜೆಟ್‌ನಲ್ಲಿ ಸಿದ್ದರಾಮಯ್ಯ ಎಸ್‌ಸಿ, ಎಸ್‌ಟಿ ಮಠಗಳಿಗೆ ‌ಶಿಕ್ಷಣಕ್ಕೆ ತಲಾ ₹ 2 ಕೋಟಿ‌ ಮೀಸಲಿಡಬೇಕು. ಕೋಲಾರ ಜಿಲ್ಲೆಯ ಆವಣಿಯಲ್ಲಿ ವಾಲ್ಮೀಕಿ ಬಂದು ಹೋಗಿರುವ ಕುರುಹು ಇದ್ದು, ಲವಕುಶರ ಆರೈಕೆ ನಡೆದ ಸ್ಥಳ ಎಂಬ ಪ್ರತೀತಿ ಇದೆ. ಈ ಸ್ಥಳವನ್ನು ರಾಷ್ಟ್ರೀಯ ಸ್ಮಾರಕ ‌ಮಾಡಬೇಕು. ಗಂಗಾವತಿ ಅಂಜಾನಾದ್ರಿಯನ್ನು ಅಭಿವೃದ್ಧಿ ಮಾಡಬೇಕು. ತಲಾ ₹ 25 ಕೋಟಿ ಅನುದಾನ ಮೀಸಲಿಡಬೇಕು. ಕೇಂದ್ರ ಸರ್ಕಾರ ಆವಣಿಗೆ ₹ 100 ಕೋಟಿ‌ ನೀಡಬೇಕು ಎಂದು ‌ಒತ್ತಾಯಿಸಿದರು.

ವೇದಿಕೆಯ ನರಸಿಂಹಯ್ಯ, ರಾಜ್ಯ ವಾಲ್ಮೀಕಿ ನಾಯಕ ಮಹಾಸಭಾದ ರಾಜ್ಯ ನಿರ್ದೇಶಕ ಮಾಲೂರು ಸಂಚಿಕೆ ನಾರಾಯಣಸ್ವಾಮಿ, ಸಮುದಾಯದ ಮುಖಂಡರಾದ ಎನ್.ಅಂಬರೀಷ್, ಗೋವಿಂದಸ್ವಾಮಿ, ಜಯಶ್ರೀ, ಶ್ರೀರಾಮುಲು, ನಾರಾಯಣಪ್ಪ, ಚಲಪತಿ, ಹನುಮಂತಪ್ಪ, ಕುಡುವನಹಳ್ಳಿ ಆನಂದ್‌, ಅಡ್ಡಗಲ್‌ ನರೇಶ್‌, ರೈತ ಸಂಘದ ಕೆ.ಅನಂತ ಕುಮಾರ್ ಇದ್ದರು.

ಮೀಸಲಾತಿ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಆಶ್ವಾಸನೆ ಮರೆತಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಜನರ ಮೂಗಿಗೆ ತುಪ್ಪ ಸವರುತ್ತಿವೆ .
ವಿ.ಎಸ್‌.ಉಗ್ರಪ್ಪ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ

ಬಳ್ಳಾರಿ ರೆಡ್ಡಿಗಳು ಎಸ್‌ಟಿಗಳಿಗೆ ಜಮೀನು ಕೊಡಿಸಿದ್ದಾರೆಯೇ?

ಎರಡು ಗುಂಪಿನ ರೆಡ್ಡಿಗಳು ಗಂಗಾವತಿಯಲ್ಲಾಗಲಿ ಬಳ್ಳಾರಿಯಲ್ಲಾಗಲೀ ವಾಲ್ಮೀಕಿ ಸಮುದಾಯದ ಯಾರಿಗಾದರೂ ಎಸ್‌ಸಿಪಿ ಟಿಎಸ್ಪಿ ಅನುದಾನದಲ್ಲಿ ಜಮೀನು ಟ್ರ್ಯಾಕ್ಟರ್‌ ಕೊಡಿಸಿದ್ದಾರೆಯೇ ಎಂದು ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಪ್ರಶ್ನಿಸಿದರು. ಬಳ್ಳಾರಿ ರೆಡ್ಡಿಗಳ ನಡುವೆ ಗಲಾಟೆ ನಡೆದಾಗ ಆಸ್ಪತ್ರೆಯಲ್ಲಿದ್ದೆ. ಮುಖ್ಯಮಂತ್ರಿ ಜೊತೆಗೂ ಅಂದೇ ಮಾತನಾಡಿದ್ದೆ. ಬಳ್ಳಾರಿಯಲ್ಲಿ ಈಗಾಗಲೇ ವಾಲ್ಮೀಕಿಯ ಪ್ರತಿಮೆ ಇದ್ದು ಮತ್ತೊಂದು ಪ್ರತಿಮೆ ಅವಶ್ಯವಿರಲಿಲ್ಲ. ಹೊಸದಾಗಿ ಪ್ರತಿಮೆ ಮಾಡಲು ಜಿಲ್ಲಾಡಳಿತ ₹ 8 ಕೋಟಿ ವೆಚ್ಚ ಮಾಡಿದೆ ಎಂಬ ಮಾಹಿತಿ ಇದೆ. ಎರಡು ಗುಂಪುಗಳಿದ್ದು ಮನುಷ್ಯರಿಗೆ ಅಧಿಕಾರ ಹಣ ಅಹಂ ಬಂದರೆ ಈ ರೀತಿ ಆಗುತ್ತದೆ ಎಂದು ಹರಿಹಾಯ್ದರು. ವಾಲ್ಮೀಕಿ ನಿಗಮದ ಹಗರಣ‌‌ ಸಂಬಂಧ ಪ್ರತಿಕ್ರಿಯಿಸಿ ‘ಹಗರಣ ಬೆಳಕಿಗೆ ಬಂದಾಗಲೇ ಮುಖ್ಯಮಂತ್ರಿಗೆ ಪತ್ರ ಬರೆದು ತಪ್ಪಿತಸ್ಥರಿಗೆ ಶಿಕ್ಷೆಗೆ ಆಗ್ರಹಿಸಿದ್ದೆ. ಎಸ್‌ಸಿಪಿ ಟಿಎಸ್‌ಪಿ ಅನುದಾನವನ್ನು ಈ ವರ್ಗದ ಜನರಿಗೆ ಮಾತ್ರ ಇಡಬೇಕು’ ಎಂದು ಮನವಿ ಮಾಡಿದರು‌. ಈ ಸಂಬಂಧ ಎಸ್‌ಸಿ ಎಸ್‌ಟಿ ಶಾಸಕರು ಸಂಸದರು ಹಾಗೂ ನಮ್ಮ ವೋಟು ಪಡೆದ ಇತರ ಶಾಸಕ ಸಂಸದರು ಬಾಯಿ ಬಿಚ್ಚಬೇಕು ಎಂದರು.

ನಮ್ಮ ಸಹನೆ ಪರೀಕ್ಷಿಸಬೇಡಿ

ನಮ್ಮ ಸಹನೆ ಪರೀಕ್ಷಿಸಬೇಡಿ. ನಾವು ಹೋರಾಟಕ್ಕೆ ಸಿದ್ಧವಿದ್ದೇನೆ. ನಮ್ಮ ಹಕ್ಕುಗಳಿಗೆ ರಕ್ಷಣೆ ಪಡೆಯಲು ‌ಸಮುದಾಯದವರು ಜಾಗೃತರಾಗಬೇಕು. ನಮ್ಮ ವೋಟು ಪಡೆದು ಮಂತ್ರಿ ಆದವರು ಏಕೆ ಹೋರಾಟ ಮಾಡುತ್ತಿಲ್ಲ? 28 ಸಂಸತ್ ಸದಸ್ಯರು ಏಕೆ ಬಾಯಿ‌ ಬಿಚ್ಚುತ್ತಿಲ್ಲ? 224 ಶಾಸಕರು ಏ‌ನು‌ ಮಾಡುತ್ತಿದ್ದಾರೆ ಎಂದು ಉಗ್ರಪ್ಪ ಪ್ರಶ್ನಿಸಿದರು. ಸಂಸತ್ತಿನಲ್ಲಿ ಹಾಗೂ ವಿಧಾನಸಭೆಯಲ್ಲಿ ಧ್ವನಿ ಎತ್ತಬೇಕು. ನಮ್ಮ ಸಮುದಾಯ ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಕುರುಬರಿಗೆ ಮೀಸಲಾತಿ;

ವಿರೋಧವಿಲ್ಲ ಪರಿಶಿಷ್ಟ ಪಂಗಡಕ್ಕೆ ಕುರುಬರು ಸೇರಿದಂತೆ ಯಾವುದೇ ಸಮುದಾಯವನ್ನು ಸೇರ್ಪಡೆ ಮಾಡಲು ವಿರೋಧವಿಲ್ಲ ಅಸೂಯೆಯೂ ಇಲ್ಲ. ಕುರುಬರಿಗೆ ಮೀಸಲಾತಿ ನೀಡಬಾರದೆಂದು ಯಾರೂ ಹೋರಾಟವನ್ನೂ ನಡೆಸಿಲ್ಲ. ಅರ್ಹತೆಗೆ ತಕ್ಕನಂತೆ ಕೊಡಲಿ ಎಂದು ಉಗ್ರಪ್ಪ ಹೇಳಿದರು. ನಮ್ಮ ಸಮುದಾಯದಲ್ಲಿ  ನಾಯಕತ್ವ ವಿಚಾರದಲ್ಲಿ ಗೊಂದಲ ಇಲ್ಲ ಭಿನ್ನಾಭಿಪ್ರಾಯ ಇಲ್ಲ. ಆದರೆ ಸಮುದಾಯದ ಈಗಿನ ಶಾಸಕರಿಗೆ ಹೋರಾಟದ ಹಿನ್ನೆಲೆ ಇಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.