ಕೊಪ್ಪಳ: ಇಲ್ಲಿನ ಜಿಲ್ಲಾಸ್ಪತ್ರೆಯ ಶೌಚಾಲಯದಲ್ಲಿ ಬುಧವಾರ ಮೃತ ನವಜಾತ ಶಿಶು ಪತ್ತೆಯಾಗಿದ್ದು, ಇದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಶೌಚಾಲಯದ ಕೊಳವೆಗಳಲ್ಲಿ ನೀರು ಕಟ್ಟಿಕೊಂಡಿದ್ದು, ಆಸ್ಪತ್ರೆಗೆ ಸರಿಯಾಗಿ ನೀರು ಸರಬರಾಜು ಆಗುತ್ತಿಲ್ಲ ಎಂದು ರೋಗಿಗಳು ಹಾಗೂ ಅವರ ಜೊತೆಗಿದ್ದ ಸಂಬಂಧಿಕರು ಗಮನಕ್ಕೆ ತಂದಾಗ ಆಸ್ಪತ್ರೆ ಡಿ ದರ್ಜೆ ಸಿಬ್ಬಂದಿ ಶೌಚಾಲಯಗಳಲ್ಲಿ ಪರಿಶೀಲಿಸಿದರು. ಎಲ್ಲಿಯಾದರೂ ಕೊಳವೆ ಕಟ್ಟಿಕೊಂಡಿದೆಯೇ ಎನ್ನುವುದನ್ನು ಪರಿಶೀಲಿಸಿದಾಗ ಶಿಶು ಪತ್ತೆಯಾಗಿದೆ ಎಂದು ಸಿಬ್ಬಂದಿಯೊಬ್ಬರು ಹೇಳಿದರು.
ಅದು ಶಿಶುವೊ ಅಥವಾ ಭ್ರೂಣವೊ ಎನ್ನುವುದು ಖಚಿತವಾಗಿ ಗೊತ್ತಾಗಬೇಕಾಗಿದೆ. ಕೊಳವೆಯಲ್ಲಿ ನೋಡಿದಾಗ ಶಿಶುವಿನ ತಲೆ ಮೇಲೆ ಬಂದಿತ್ತು. ಕೈಗಳು ಬೆಳವಣಿಗೆ ಸ್ಥಿತಿಯಲ್ಲಿದ್ದವು. ದೇಹದ ಕೆಲ ಭಾಗಗಳು ಮಾತ್ರ ಹೊರಗಡೆ ಕಂಡಿದ್ದು, ಅವುಗಳನ್ನು ಫ್ರೀಜರ್ನಲ್ಲಿ ಸಂಗ್ರಹಿಸಿಡಲಾಗಿದೆ ಎಂದು ಗೊತ್ತಾಗಿದೆ.
‘ಘಟನೆ ನಡೆದಿರುವುದು ನಿಜ. ಈ ಕುರಿತು ಜಿಲ್ಲಾಸ್ಪತ್ರೆಯವರಾಗಲಿ, ಮಕ್ಕಳ ರಕ್ಷಣಾ ಘಟಕದವರಾಗಲಿ ದೂರು ನೀಡಿಲ್ಲ. ದೂರು ನೀಡುವುದಾಗಿ ಆಸ್ಪತ್ರೆಯವರು ತಿಳಿಸಿದ್ದಾರೆ. ಮಗು ಬೆಳವಣಿಗೆ ಹಂತದಲ್ಲಿದ್ದ ಕಾರಣ ಗಂಡೊ ಅಥವಾ ಹೆಣ್ಣೊ ಎನ್ನುವುದು ಕೂಡ ಖಚಿತವಾಗಿ ತಿಳಿದುಬಂದಿಲ್ಲ. ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ’ ಎಂದು ಪೊಲೀಸರೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಈ ಕುರಿತು ಪ್ರತಿಕ್ರಿಯಿಸಿದ ಕೊಪ್ಪಳ ಕಿಮ್ಸ್ ವೈದ್ಯಕೀಯ ಅಧೀಕ್ಷಕ ವೇಣುಗೋಪಾಲ್ ಕೆ. ‘ಶಿಶು ಪತ್ತೆಯಾಗಿರುವ ಜಿಲ್ಲಾಸ್ಪತ್ರೆಯ ರ್ಯಾಪಿಡ್ ವಾರ್ಡ್ ಶೌಚಾಲಯಕ್ಕೂ ಹೆರಿಗೆ ವಿಭಾಗಕ್ಕೂ ದೂರವಿದೆ. ಆದರೂ ಅಲ್ಲಿ ಶಿಶು ಅಲ್ಲಿ ಹೇಗೆ ಪತ್ತೆಯಾಯಿತು. ಯಾರು ಬಿಟ್ಟು ಹೋಗಿದ್ದಾರೆ ಎನ್ನುವುದು ಗೊತ್ತಾಗುತ್ತಿಲ್ಲ. ಈ ಕುರಿತು ಪೊಲೀಸರಿಗೆ ದೂರು ನೀಡಲಾಗುವುದು’ ಎಂದು ತಿಳಿಸಿದರು.
undefined undefined
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.