
ಹನುಮಮಾಲಾ ವಿಸರ್ಜನೆ ನಿಮಿತ್ತ ಅಂಜನಾದ್ರಿ ಬಳಿ ಶನಿವಾರ ಸಂಚಾರ ದಟ್ಟಣೆ ತಪ್ಪಿಸಲು ಹಳೆಯ ರಸ್ತೆ ರಚನೆ ಮಾಡಲಾಯಿತು
ಗಂಗಾವತಿ: ಹನುಮಮಾಲಾ ವಿಸರ್ಜನೆ ನಿಮಿತ್ತ ಅಂಜನಾದ್ರಿ ಬಳಿ ಸಿದ್ದತೆ ಭರದಿಂದ ಸಾಗಿದ್ದು, ಶನಿವಾರ ಅಂಜನಾದ್ರಿ ಬಳಿ ವಾಹನ ಸಂಚಾರಕ್ಕೆ ಪರ್ಯಾಯ ರಸ್ತೆ ರಚನೆ ಕಾರ್ಯ ನಡೆಯಿತು.
ಅಂಜನಾದ್ರಿ ಬೆಟ್ಟಕ್ಕೆ ಶನಿವಾರ, ಭಾನುವಾರ ಸೇರಿ ಹಬ್ಬ-ಹರಿದಿನಗಳಲ್ಲಿ ಸಾವಿರಾರು ಜನ ಕಾರು, ಬೈಕ್, ಆಟೋ, ಬಸ್ಗಳಲ್ಲಿ ಆಗಮಿಸುತ್ತಾರೆ. ಅನೇಕರು ವಾಹನಗಳನ್ನು ರಸ್ತೆ ಬದಿ ನಿಲ್ಲಿಸುವುದರಿಂದ ಸಂಚಾರ ದಟ್ಟಣೆ ಹಾಗೂ ಸುಗಮ ಸಂಚಾರಕ್ಕೆ ಪರದಾಡಬೇಕಾಗುತ್ತದೆ.
ಸದ್ಯ ಹನುಮಮಾಲಾ ವಿಸರ್ಜನೆಗೆ 1.50 ಲಕ್ಷ ಭಕ್ತರು ಬರುವ ನಿರೀಕ್ಷೆಯಿದ್ದು, ವಾಹನ ಸಂಚಾರ ದಟ್ಟಣೆ ತಪ್ಪಿಸಲು, ಜಿಲ್ಲಾಧಿಕಾರಿಗಳು ಮಧ್ವಾನದ ಹಳೆಯ ರಸ್ತೆ ಮಾರ್ಗ ರಚಿಸಲು ತಾಲ್ಲೂಕು ಆಡಳಿತಕ್ಕೆ ಸೂಚನೆ ನೀಡಿದ್ದಾರೆ.
ಕಾರು, ಬೈಕ್ ಸೇರಿ ಇತರೆ ವಾಹನಗಳು ಗಂಗಾವತಿಗೆ ತೆರಳಲು ಹನುಮನಹಳ್ಳಿ ಗ್ರಾಮದ ಹೊರಭಾಗದಲ್ಲಿನ ಮಧ್ವಾನ ರಸ್ತೆ (ಹಳೆಯರಸ್ತೆ) ಮೂಲಕ ಪಂಪಾಸರೋವರಕ್ಕೆ ತೆರಳುವ ಮಣ್ಣಿನ ರಸ್ತೆಗೆ, ಜೆಸಿಬಿ ಮೂಲಕ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ.
ಜೆಸಿಬಿ ಬೆಳಿಗ್ಗೆಯಿಂದ ಹಳೆ ರಸ್ತೆಗೆ ಬಾಚಿಕೊಂಡ ಗಿಡಗಳನ್ನು ತೆರವುಗೊಳಿಸಿ, ಮಣ್ಣಿನ ರಸ್ತೆ ರಚನೆ ಮಾಡಲಾಗಿದೆ. ಇದರ ಮೂಲಕವೇ ವಾಹನಗಳು ಸಂಚಾರ ಮಾಡಲಿವೆ. ಇದರಿಂದ ಸುಗಮ ಸಂಚಾರಕ್ಕೆ ಅನುವು ಆಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.