ಯಲಬುರ್ಗಾ: ನ್ಯಾಯಮೂರ್ತಿ ನಾಗಮೋಹನ ದಾಸ್ ಅವರ ಒಳಮೀಸಲಾತಿ ವರದಿಯು ವೈಜ್ಞಾನಿಕವಾಗಿದ್ದು, ಯಥಾವತ್ತಾಗಿ ಜಾರಿಗೊಳಿಸಲು ಸರ್ಕಾರ ಮುಂದಾಗಬೇಕು. ಅಧಿವೇಶನದಲ್ಲಿ ಜಾರಿಗೆ ಒತ್ತಾಯಿಸಬೇಕು ಎಂದು ಪಟ್ಟಣದ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಪದಾಧಿಕಾರಿಗಳು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರಿಗೆ ಮನವಿ ಮಾಡಿದರು.
ಪಟ್ಟಣದ ಶಾಸಕರ ಕಚೇರಿಯಲ್ಲಿ ರಾಯರಡ್ಡಿ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡ ಹೋರಾಟ ಸಮಿತಿ ಮುಖಂಡರು,‘ ಸುಮಾರು ವರ್ಷಗಳ ಬೇಡಿಕೆಯಂತೆ ಸಮಿತಿ ಉತ್ತಮ ಸಲಹೆಗಳನ್ನು ನೀಡಿದೆ. ಮಾದಿಗ ಸಮಾಜಕ್ಕೆ ಶೇ 6ರಷ್ಟು ಮೀಸಲಾತಿಗೆ ಶಿಫಾರಸು ಮಾಡಿದ್ದು ಸ್ವಾಗತಾರ್ಹವಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಮಾಡದೇ ಜಾರಿಗೆ ಮುಂದಾಗಬೇಕಾಗಿದೆ’ ಎಂದು ಮನವಿಯಲ್ಲಿ ಕೋರಿದ್ದಾರೆ.
ಬೆಂಬಲ: ಮನವಿಗೆ ಪ್ರಕ್ರಿಯಿಸಿದ ರಾಯರಡ್ಡಿ ಅವರು,‘ನಿಮ್ಮ ಬೇಡಿಕೆಗೆ ಸಂಪೂರ್ಣವಾದ ಬೆಂಬಲವಿದೆ. ನಾಗಮೋಹನ ದಾಸ್ ಅವರು ಸರಿಯಾದ ವರದಿ ನೀಡಿದ್ದಾರೆ. ಸಣ್ಣಪುಟ್ಟ ಬದಲಾವಣೆ ಮಾಡಿ ಶೀಘ್ರದಲ್ಲಿಯೇ ಜಾರಿಗೆ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಮುಖ್ಯವಾಗಿ ಮಾದಿಗ ಸಮಾಜದವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಿಕೊಡುವಲ್ಲಿ ಸರ್ಕಾರ ಹಾಗೂ ವೈಯಕ್ತಿಯವಾಗಿ ತಾವೂ ಒತ್ತಾಯಿಸುತ್ತೇವೆ’ ಎಂದು ಹೇಳಿದರು.
ಮುಖಂಡರಾದ ಈರಪ್ಪ ಕುಡಗುಂಟಿ, ಶಿವಾನಂದ ಬಣಕಾರ, ಮಲೆಯಪ್ಪ ರಾಜೂರ, ಚಂದ್ರಪ್ಪ ದೊಡ್ಮನಿ, ಹೇಮಣ್ಣ ಪೂಜಾರ, ಸುರೇಶ ನಡೂಲಮನಿ, ಬಸವರಾಜ ಮ್ಯಾಗೇರಿ ಕಲ್ಲೂರ ಸೇರಿ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.