ADVERTISEMENT

ಗಂಗಾವತಿ: ಸರ್ಕಾರದಿಂದ ಗಾಯದ ಮೇಲೆ ಬರೆ -ಕಾಂಗ್ರೆಸ್ ವಕ್ತಾರ ಪ್ರಕಾಶ್ ರಾಠೋಡ ಆರೋಪ

​ಪ್ರಜಾವಾಣಿ ವಾರ್ತೆ
Published 14 ಜೂನ್ 2021, 6:08 IST
Last Updated 14 ಜೂನ್ 2021, 6:08 IST
ಗಂಗಾವತಿ ತಾಲ್ಲೂಕಿನ ಮರಳಿಯಲ್ಲಿನ ಪೆಟ್ರೋಲ್ ಬಂಕ್ ಎದುರು ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದರು
ಗಂಗಾವತಿ ತಾಲ್ಲೂಕಿನ ಮರಳಿಯಲ್ಲಿನ ಪೆಟ್ರೋಲ್ ಬಂಕ್ ಎದುರು ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದರು   

ಗಂಗಾವತಿ: ‘ದೇಶದಲ್ಲಿ ಬಡ ಕುಟುಂಬಗಳ ಸಂಖ್ಯೆ ಜಾಸ್ತಿ ಇದೆ. ಆದರೂ ಪ್ರಧಾನಿ ನರೇಂದ್ರ ಮೋದಿ ಹೆಚ್ಚು ತೆರಿಗೆ ವಸೂಲಿ ಮಾಡುತ್ತಿದ್ದಾರೆ’ ಎಂದು ಕೆಪಿಸಿಸಿ ಜಿಲ್ಲಾ ವಕ್ತಾರ ಪ್ರಕಾಶ್ ರಾಠೋಡ ಹೇಳಿದರು.

ಅಗತ್ಯವಸ್ತು, ಸಿಲಿಂಡರ್, ಪೆಟ್ರೋಲ್, ಡೀಸೆಲ್‍ಗಳ ಮೇಲೆ ಅಧಿಕ ತೆರಿಗೆ ಹಾಕಲಾಗುತ್ತಿದೆ. ಇದರಿಂದಾಗಿ ಎಲ್ಲ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಕೋವಿಡ್ ವೇಳೆಯಲ್ಲಿ ಬಡಜನರು ಕಷ್ಟ ಪಡುತ್ತಿದ್ದರು ಸಹ ಬೆಲೆ ಏರಿಕೆ ಮಾತ್ರ ನಿಲ್ಲುತ್ತಿಲ್ಲ. ಅಧಿಕ ತೆರಿಗೆ ವಸೂಲಿ ಮಾಡುವ ಮೂಲಕ ನರೇಂದ್ರ ಮೋದಿಯವರು ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿರುವ ವೇಳೆಯಲ್ಲಿ ಜನರನ್ನು ಸೋಂಕಿನಿಂದ ರಕ್ಷಣೆ ಮಾಡಲಾಗದೆ ಮೋದಿಯವರು ಕೈಚೆಲ್ಲಿ ಕುಳಿತುಕೊಂಡಿದ್ದಾರೆ. ಅದಕ್ಕಾಗಿಯೇ ಲಕ್ಷಾಂತರ ಜನರು ಕೋವಿಡ್‍ನಿಂದ ಮೃತಪಟ್ಟಿದ್ದಾರೆ. ಸೋಂಕು ಕಾಣಿಸಿಕೊಳ್ಳುತ್ತಿದಂತೆ ಲಸಿಕೆ ಹಾಕಲಾಗುತ್ತಿದೆ. ಲಸಿಕೆಯಲ್ಲೂ ಕೂಡ ನರೇಂದ್ರ ಮೋದಿಯವರು ಭ್ರಷ್ಟಚಾರ ಮಾಡಿದ್ದಾರೆ. ಕೇವಲ ₹10 ರೂಪಾಯಿ ಲಸಿಕೆಯನ್ನು ₹ 100 ನೀಡಿ, ಖರೀದಿ ಮಾಡಿದ್ದಾರೆ ಎಂದು ಆರೋಪಿಸಿದರು.

ADVERTISEMENT

ನಮ್ಮ ದೇಶದಲ್ಲಿಯೇ ಜನರಿಗೆ ಲಸಿಕೆ ಸಿಗದೆ ಪರದಾಡುತ್ತಿದ್ದಾರೆ. ಆದರೆ ಹೊರ ದೇಶಗಳಿಗೆ ಲಸಿಕೆಗಳನ್ನು ರಫ್ತು ಮಾಡಲಾಗುತ್ತಿದೆ. ಇನ್ನೂ ರಾಜ್ಯದಲ್ಲಿ ಯಡಿಯೂರಪ್ಪ ಅವರು ಪುತ್ರ ವ್ಯಾಮೋಹದಿಂದ ಕೇವಲ ಮಗನ ಮಾತಿಗೆ ಮಣೆ ಹಾಕುತ್ತಿದ್ದಾರೆ. ರಾಜ್ಯದಲ್ಲಿರುವ ಬಿಜೆಪಿ ಪಕ್ಷದವರು ರಾಜ್ಯದ ಅಭಿವೃದ್ಧಿಯ ಕುರಿತು ಚಿಂತೆ ಮಾಡದೆ ಅಧಿಕಾರದ ಆಸೆಗಾಗಿ ಆಡಳಿತ ನಡೆಸುತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್‌ನ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ ಮಾತನಾಡಿ,‘ಬಿಜೆಪಿ ಪಕ್ಷದ ಶಾಸಕರು ಅಭಿವೃದ್ಧಿ ಕಾರ್ಯಗಳಲ್ಲಿ ಗುಣಮಟ್ಟದ ಕಡೆಗೆ ಗಮನ ಹರಿಸದೆ ಕೇವಲ ಕಮಿಷನ್ ಕಡೆಗೆ ಗಮನ ಹರಿಸುತ್ತಿದ್ದಾರೆ. ಇನ್ನೂ ಕನಕಗಿರಿ ಕ್ಷೇತ್ರದಲ್ಲಿ ಮರಳು ಮಾಫಿಯಾ, ಮಟ್ಕಾ, ಜೂಜಾಟ ಹೆಚ್ಚಾಗಿ ನಡೆಯುತ್ತಿದೆ. ಅದಕ್ಕೆ ಶಾಸಕರೇ ಬೆಂಗಾವಲಾಗಿ ನಿಂತುಕೊಂಡಿದ್ದಾರೆ. ಪೊಲೀಸ್ ಠಾಣೆಗಳು ಬಿಜೆಪಿ ಪಕ್ಷದ ಕಚೇರಿಗಳಾಗಿವೆ. ಇನ್ನೂ ತಹಶೀಲ್ದಾರ್ ಕೂಡ ಶಾಸಕರ ಮಾತಿಗೆ ಮಣೆ ಹಾಕಿ, ಕನಕಗಿರಿ ಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಬೆಂಬಲ ನೀಡುತ್ತಿದ್ದಾರೆ’ ಎಂದು ಆರೋಪ ಮಾಡಿದರು. ಕಾಂಗ್ರೆಸ್ ಕಾರ್ಯಕರ್ತರಾದ ರೆಡ್ಡಿ ಶ್ರೀನಿವಾಸ್, ಅಮರೇಶ ಗೋನಾಳ, ಪ್ರಭಾಕರ, ವಿಶ್ವನಾಥ, ಮಹಮ್ಮದ್ ರಫೀ, ಸತ್ಯನಾರಾಯಣ, ಶ್ರೀಕಾಂತ್, ಮೌಲಾ, ಮಲ್ಲನಗೌಡ, ಸತೀಶ್, ಓಂಕಾರೆಪ್ಪ, ಮೈಹಿಬೂಬ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.