ಇಟಗಿ (ಕುಕನೂರು): ‘ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶದ ಜನರಿಗೆ ನಿರಂತರವಾಗಿ ಕೆಲಸ ನೀಡುವ ಸಲುವಾಗಿ ದುಡಿಯೋಣ ಬಾ ಅಭಿಯಾನ ಆರಂಭಿಸಲಾಗಿದೆ. ಸದುಪಯೋಗ ಪಡೆಯಬೇಕು’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಗವಿಸಿದ್ದನಗೌಡ ಮುದ್ದಾಬಳ್ಳಿ ಹೇಳಿದರು.
ತಾಲ್ಲೂಕಿನ ಇಟಗಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ನಡೆದ ‘ದುಡಿಯೋಣ ಬಾ’ ಅಭಿಯಾನದಲ್ಲಿ ಅವರು ಮಾತನಾಡಿದರು.
ಗ್ರಾಮದ ಎಲ್ಲ ಅರ್ಹ ಕೂಲಿಕಾರರು ನರೇಗಾ ಯೋಜನೆಯಡಿಯಲ್ಲಿ 150 ದಿನಗಳು ಕೆಲಸ ಪಡೆಯಬೇಕು. 18 ವರ್ಷ ಮೇಲ್ಪಟ್ಟವರು ಮತ್ತು ಇತರ ರೋಗಗಳಿಂದ ಬಳಲುತ್ತಿರುವವರು ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆಯಬೇಕು’ ಎಂದರು.
ಪ್ರತಿ ಮನೆಯಲ್ಲಿ ಬಚ್ಚಲು ಗುಂಡಿ ನಿರ್ಮಿಸಲು ಪಂಚಾಯಿತಿಯಲ್ಲಿ ಯೋಜನೆ ಇದೆ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಯೋಜನೆಯಿಂದ ಹೊರಗುಳಿದ ದುರ್ಬಲ ಕುಟುಂಬಗಳನ್ನು ಸಕ್ರಿಯವಾಗಿ ಭಾಗವಹಿಸುವಂತೆ ಮಾಡುವುದು ಇದರ ಉದ್ದೇಶ. ಮುಂದಿನ ದಿನಗಳಲ್ಲಿ ಉದ್ಯೋಗ ಖಾತ್ರಿಯ ಕೂಲಿ ಹಣ ಹೆಚ್ಚಾಗಲಿದೆ ಎಂದು ತಿಳಿಸಿದರು.
ಉಪಾಧ್ಯಕ್ಷೆ ಕಲಾವತಿ ಅಂದಪ್ಪ ಕಳ್ಳಿ, ಸದಸ್ಯರಾದ ಪ್ರಭುರಾಜ ಹಳ್ಳಿ, ಲಕ್ಷ್ಮಣ್ ಮ್ಯಾಗೇರಿ, ದೇವಪ್ಪ ಹರಿಜನ, ನಿರ್ಮಲಾ ಮಹೇಶ ಹಿರೇಮನಿ, ಈರಮ್ಮ ನೀಲಪ್ಪ ಹಡಪದ ಹಾಗೂ ಬಸವರಾಜೇಶ್ವರಿ ಶಾಂತಯ್ಯ ಕಂತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.