ADVERTISEMENT

ಹಸಿರು ಬೆಳೆಗೆ ಹಳದಿ ರೋಗ ಕಾಟ

​ಪ್ರಜಾವಾಣಿ ವಾರ್ತೆ
Published 4 ಜುಲೈ 2021, 7:04 IST
Last Updated 4 ಜುಲೈ 2021, 7:04 IST
ಹನುಮಸಾಗರ ಸಮೀಪದ ಹೂಲಗೇರಿ ಭಾಗದಲ್ಲಿ ಹುಲುಸಾಗಿ ಬೆಳೆದ ಹೆಸರು ಬೆಳೆ
ಹನುಮಸಾಗರ ಸಮೀಪದ ಹೂಲಗೇರಿ ಭಾಗದಲ್ಲಿ ಹುಲುಸಾಗಿ ಬೆಳೆದ ಹೆಸರು ಬೆಳೆ   

ಹನುಮಸಾಗರ: ಮಳೆಯ ಕೊರತೆಯ ನಡುವೆ ಬಾಡುತ್ತಿದ್ದ ಹಾಗೂ ಹಳದಿ ರೋಗಕ್ಕೆ ಬಲಿಯಾಗುತ್ತಿದ್ದ ಹೆಸರು ಬೆಳೆಗೆ ಈಚೆಗೆ ಸುರಿದ ಮಳೆ ಬೆಳೆಗೆ ಜೀವಕಳೆ ತಂದಿದೆ.

ಸದ್ಯ ಹೂಲಗೇರಿ, ಹನುಮನಾಳ, ಬೆನಕನಾಳ, ಅಡವಿಭಾವಿ ಭಾಗಗಳಲ್ಲಿ ಹೆಸರು ಬೆಳೆ ಉತ್ತಮವಾಗಿರುವುದು ಕಂಡು ಬರುತ್ತಿದೆ. ಹನುಮನಾಳ ಭಾಗದ ಕೆಲವೆಡೆ ಹಳದಿ ರೋಗ ಬಂದಿರುವುದು ಕಂಡು ಬಂದಿದೆ. ಈ ರೋಗ ಬೆಳೆಯಿಂದ ಬೆಳೆಗೆ ಅತಿ ಶೀಘ್ರವಾಗಿ ಹಬ್ಬುವ ಕಾರಣವಾಗಿ ರೈತರು ಮುಂಜಾಗೃತ ಕ್ರಮ ಕೈಕೊಳ್ಳಬೇಕು ಎಂದು ಎಂದು ಕೃಷಿ ಇಲಾಖೆಯ ಅಧಿಕಾರಿಗಳು ರೈತರಿಗೆ ಸಲಹೆ ನೀಡಿದ್ದಾರೆ.

ಬೆಳೆಗೆ ಬೆಳೆಗೆ ರೋಗ ಬರುವ ಮುನ್ನವೇ ನಿಯಂತ್ರಣ ಕ್ರಮಗಳನ್ನು ಕೈಗೊಂಡರೆ ಮಾತ್ರ ಬೆಳೆ ರೈತರಿಗೆ ದಕ್ಕುತ್ತದೆ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪ್ರಕಾಶ ತಾರಿವಾಳ ಹೇಳಿದರು.

ADVERTISEMENT

ಒಂದು ವಾರದ ಹಿಂದೆ ಮಳೆ ಕೊರತೆ ಹಾಗೂ ಮೋಡ ಮುಸುಕಿದ ವಾತಾವರಣದ ಕಾರಣದಿಂದಾಗಿ ಹೆಸರು ಬೆಳೆಗೆ ಹಳದಿ ನಂಜಾಣು ರೋಗ ಹರಡಿರುವುದು ಕಂಡು ಬಂದಿದೆ. ಒಂದು ಬಾರಿ ಹಳದಿ ರೋಗ ಕಾಣಿಸಿಕೊಂಡರೆ ನಿಯಂತ್ರಣ ಮಾಡುವುದು ಕಷ್ಟವಾಗುವುದರಿಂದ ರೈತರು ಈಗಲೆ ಪ್ರತಿ ಲೀಟರ್ ನೀರಿಗೆ 0.25 ಮಿ.ಲೀ. ಇಮಿಡಾಕ್ಲೋಪ್ರಿಡ್ ಸಿಂಪಡಿಸಬೇಕು. ರೋಗಕ್ಕೆ ತುತ್ತಾದ ಸಸಿಗಳನ್ನು ಪ್ರಾರಂಭಿಕ ಹಂತದಲ್ಲಿ ಗುರುತಿಸಿ ಕಿತ್ತು ನೆಲದಲ್ಲಿ ಹೂಳಬೇಕು ಇಲ್ಲವೆ ಸುಟ್ಟು ಹಾಕಬೇಕು. ಕ್ರಿಮಿನಾಶಕವನ್ನು ಬೆಳೆಗೆ ಸಿಂಪಡಿಸುವುದಕ್ಕಿಂತ ಮೊದಲು ಬದುವಿಗೆ ಸಿಂಪಡಿಸಿದರೆ ಅಲ್ಲಿ ವಾಸಮಾಡಿರುವ ಜಿಗಿಹುಳು ನಿಯಂತ್ರಣಕ್ಕೆ ಬರುತ್ತವೆ ಎಂದು ಸಲಹೆ ನೀಡಿದರು.

ಬಿತ್ತನೆ ಸಮಯದಲ್ಲಿಯೇ ಟ್ರೈಕೋಡರ್ಮ್ ಪುಡಿಯಿಂದ ಬೀಜೋಪಚಾರ ಮಾಡಿ ಬಿತ್ತಿದರೆ ಹಾಗೂ ಬದುವುಗಳನ್ನು ಸ್ವಚ್ಛವಾಗಿಟ್ಟುಕೊಂಡಿದ್ದರೆ ನಂಜಾಣು ರೋಗದ ಭೀತಿ ಕಂಡುಬರುವುದಿಲ್ಲ ಎಂದು ಹೇಳಿದರು.

ಈ ಬಾರಿ ಹೆಸರು ಬಿತ್ತನೆ ಅವಧಿ ಮುಗಿಯುವ ಹಂತದಲ್ಲಿಯೂ ಬಿತ್ತನೆಯಾಗಿದ್ದರೂ ಮಧ್ಯದಲ್ಲಿ ಬಂದ ಮಳೆ ಹೆಸರು ಬೆಳೆ ಹುಲುಸಾಗಿ ಬೆಳೆಯಲು ಅವಕಾಶ ಮಾಡಿಕೊಟ್ಟಿದೆ. ನಾಲ್ಕು ವರ್ಷಗಳಿಂದ ಹೆಸರು ಬೆಳೆ ಬಿತ್ತನೆಗಷ್ಟೆ ರೈತರು ಸೀಮಿತರಾಗಿದ್ದರು. ಅಲ್ಲದೆ ಸದ್ಯ ಹೂವು, ಹೀಚು ಬಿಡುವ ಈ ಹಂತದಲ್ಲೂ ಅಲ್ಪ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಹೆಸರು ಬೆಳೆ ರೈತರ ಕೈಹಿಡಿಯುವ ಲಕ್ಷಣಗಳು ಕಾಣುತ್ತಿವೆ. ಹಿಂದಿನ ವರ್ಷ ಇದೇ ರೀತಿ ಉತ್ತಮ ಆಸೆ ತೋರಿಸಿದ್ದ ಮಳೆ, ಹೆಸರು ಹೂವು ಬಿಡುವ ಈ ಹಂತದಲ್ಲಿ ಕೈಕೊಟ್ಟಿದ್ದರಿಂದ ಬೆಳೆ ಬಾಡಿ ಹಳದಿ ರೋಗಕ್ಕೆ ಬಲಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.