ADVERTISEMENT

ಒತ್ತಡದ ಜೀವನದಿಂದ ಮಧುಮೇಹ: ಡಾ.ಮಹೇಶ

ವಿಶ್ವ ಮಧುಮೇಹ ‘ಜಾಗೃತಿ ದಿನ’ ಜಾಥಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2020, 16:42 IST
Last Updated 14 ನವೆಂಬರ್ 2020, 16:42 IST
ವಿಶ್ವಮಧುಮೇಹ ದಿನದ ಅಂಗವಾಗಿ ಕೊಪ್ಪಳದ ಕೇಂದ್ರ ಬಸ್‌ ನಿಲ್ದಾಣದ ಎದುರು ಜಾಗೃತಿ ಜಾಥಾದಲ್ಲಿ ಆಶಾ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು
ವಿಶ್ವಮಧುಮೇಹ ದಿನದ ಅಂಗವಾಗಿ ಕೊಪ್ಪಳದ ಕೇಂದ್ರ ಬಸ್‌ ನಿಲ್ದಾಣದ ಎದುರು ಜಾಗೃತಿ ಜಾಥಾದಲ್ಲಿ ಆಶಾ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು   

ಕೊಪ್ಪಳ: ‘ಒತ್ತಡದ ಜೀವನ ಹಾಗೂ ಅವೈಜ್ಞಾನಿಕ ಆಹಾರ ಪದ್ಧತಿ ಮಧುಮೇಹಕ್ಕೆ ಕಾರಣ’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮಹೇಶ.ಎಂ.ಜಿ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಘಟಕ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ಶುಕ್ರವಾರ ನಡೆದ ‘ವಿಶ್ವ ಮಧುಮೇಹ ದಿನಾಚರಣೆ’ ಕಾರ್ಯಕ್ರಮದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಶುಶ್ರೂಷಕರು ಮಧುಮೇಹದ ಆರೈಕೆಯಲ್ಲಿ ಬದಲಾವಣೆ ತರಬಲ್ಲರು’ ಎಂಬುವುದು ಈ ವರ್ಷದ ಘೋಷಣೆ. ವಿಶ್ವದಲ್ಲಿ ಚೀನಾ ದೇಶದ ನಂತರ ಭಾರತದಲ್ಲಿ ಹೆಚ್ಚಿನ ಮಧುಮೇಹ ರೋಗಿಗಳು ಇದ್ದಾರೆ. ದೇಶಕ್ಕೆ ಮಧುಮೇಹಗಳ ರಾಜಧಾನಿ ಎಂಬ ಕುಖ್ಯಾತಿ ಇದೆ’ ಎಂದರು.

ADVERTISEMENT

ಪ್ರತಿಯೊಬ್ಬರೂ ಆಹಾರ ಪದ್ದತಿ, ಜೀವನ ಶೈಲಿ, ವಾರದಲ್ಲಿ ಕನಿಷ್ಠ 5 ದಿನ ವ್ಯಾಯಾಮ ಮಾಡುವುದರೊಂದಿಗೆ ಈ ರೋಗವನ್ನು ಹತೋಟಿಗೆ ತರಬಹುದು. ಸರ್ಕಾರ ಮಧುಮೇಹ ರೋಗವನ್ನು ಹತೋಟಿಗೆ ತರಲು ಎನ್.ಪಿ.ಸಿ.ಡಿ.ಸಿ.ಎಸ್ ಕಾರ್ಯಕ್ರಮದ ಅಡಿ ಜಿಲ್ಲಾಸ್ಪತ್ರೆ, ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎನ್.ಸಿ.ಡಿ ವೈದ್ಯರು ಹಾಗೂ ಶುಶ್ರೂಷಕಿಯರು ಮತ್ತು ಎನ್.ಸಿ.ಡಿ ಸಿಬ್ಬಂದಿ ಹಾಗೂ ಹಳ್ಳಿಗಳಲ್ಲಿ ಎಂ.ಎಲ್.ಎಚ್‌.ಪಿಯವರು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಮಧುಮೇಹ ತಪಾಸಣೆ ಮಾಡಿ ಚಿಕಿತ್ಸೆ ನೀಡುವ ಕಾರ್ಯಕ್ರಮ ಜಾರಿಗೆ ತಂದಿದೆ ಎಂದರು.

ಜಾಥಾಕ್ಕೆ ಚಾಲನೆ: ನಗರದಹಳೆ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಜಾಥಾಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಲಿಂಗರಾಜು ಟಿ. ಚಾಲನೆ ನೀಡಿದರು.

ಕೇಂದ್ರ ಬಸ್ ನಿಲ್ದಾಣ, ಕಾರ್ಮಿಕರ ವೃತ್ತ, ಡಾ.ಸಿಂಪಿಲಿಂಗಣ್ಣ ರಸ್ತೆ, ನಗರ ಪೊಲೀಸ್ ಠಾಣೆ, ದಿವಟರ್ ರಸ್ತೆ ಮುಖಾಂತರ ಜಾಥಾ ಸಾಗಿತು.

ಜಿಲ್ಲಾ ಆರ್.ಸಿ.ಎಚ್‌ ಅಧಿಕಾರಿ ಡಾ.ಜಂಬಯ್ಯ.ಬಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಇರ್ಫಾನ್ ಅಂಜುಂ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಮಾಂಜನೇಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.