ADVERTISEMENT

ಚರಂಡಿ ಸ್ವಚ್ಛತೆ, ವಿದ್ಯುತ್‌ ಸೌಲಭ್ಯಕ್ಕೆ ಆಗ್ರಹ

ಕೊಪ್ಪಳ ನಗರಸಭೆ ವಿಶೇಷ ಸಾಮಾನ್ಯ ಸಭೆ; ಗವಿಸಿದ್ದೇಶ್ವರ ಜಾತ್ರೆ ಯಶಸ್ವಿಗೊಳಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2022, 13:27 IST
Last Updated 25 ನವೆಂಬರ್ 2022, 13:27 IST
ಕೊಪ್ಪಳದಲ್ಲಿ ಶುಕ್ರವಾರ ನಡೆದ ನಗರಸಭೆ ವಿಶೇಷ ಸಾಮಾನ್ಯ ಸಭೆಯಲ್ಲಿ ಐದನೇ ವಾರ್ಡ್‌ ಸದಸ್ಯೆ ವಿದ್ಯಾ ಹೆಸರೂರ ಮಾತನಾಡಿದರು
ಕೊಪ್ಪಳದಲ್ಲಿ ಶುಕ್ರವಾರ ನಡೆದ ನಗರಸಭೆ ವಿಶೇಷ ಸಾಮಾನ್ಯ ಸಭೆಯಲ್ಲಿ ಐದನೇ ವಾರ್ಡ್‌ ಸದಸ್ಯೆ ವಿದ್ಯಾ ಹೆಸರೂರ ಮಾತನಾಡಿದರು   

ಕೊಪ್ಪಳ: ಇಲ್ಲಿನ ಸುಪ್ರಸಿದ್ಧ ಗವಿಸಿದ್ದೇಶ್ವರ ಜಾತ್ರೆಯ ಮಹಾರಥೋತ್ಸವಕ್ಕೆ ರಾಜ್ಯ ಹಾಗೂ ಹೊರರಾಜ್ಯಗಳಿಂದ ಲಕ್ಷಾಂತರ ಜನ ಭಕ್ತರು ಬರಲಿದ್ದು, ಅವರಿಗೆ ತೊಂದರೆಯಾಗದ ರೀತಿಯಲ್ಲಿ ಸೌಕರ್ಯಗಳನ್ನು ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನಗರಸಭೆ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು.

ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ಅಧ್ಯಕ್ಷೆ ಶಿವಗಂಗಾ ಭೂಮಕ್ಕನವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಎಲ್ಲಾ ವಾರ್ಡ್‌ಗಳ ಸದಸ್ಯರು ಈ ಬೇಡಿಕೆ ಇಟ್ಟರು.

ಜಾತ್ರೆಯ ಸಮಯದಲ್ಲಿ ಹೆಚ್ಚುವರಿ ಸ್ವಚ್ಛತಾ ಸಿಬ್ಬಂದಿ ನೇಮಿಸಿಕೊಳ್ಳಬೇಕು. ಬೇರೆ ಇಲಾಖೆಗಳಿಂದಲೂ ಎರವಲು ಪಡೆಯಬೇಕು ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ಮೊದಲ ವಾರ್ಡ್‌ ಸದಸ್ಯೆ ಜರೀನಾಬೇಗಂ ಅರಗಂಜಿ ‘ನನ್ನ ವಾರ್ಡ್‌ ವ್ಯಾಪ್ತಿಯಲ್ಲಿ ಆರು ತಿಂಗಳಿನಿಂದ ಚರಂಡಿ ಸ್ವಚ್ಛಗೊಳಿಸಿಲ್ಲ. ನಾನೇ ಚರಂಡಿ ಸ್ವಚ್ಛ ಮಾಡಬೇಕಾ’ ಎಂದು ಖಾರವಾಗಿ ಪ್ರಶ್ನಿಸಿದರು.

ADVERTISEMENT

10ನೇ ವಾರ್ಡ್‌ ಸದಸ್ಯ ಮಹೇಂದ್ರ ಚೋಪ್ರಾ ‘ಜಾತ್ರೆಗೆ ಬರುವ ವ್ಯಾಪಾರಿಗಳಿಂದ ಹಣ ಕಟ್ಟಿಸಿಕೊಳ್ಳಲಾಗುತ್ತದೆ. ಅವರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಕೆಲಸವಾಗಬೇಕು. ಗವಿಸಿದ್ದೇಶ್ವರ ಮಠಕ್ಕೆ ಹೋಗುವ ರಸ್ತೆ ಮಾತ್ರವಲ್ಲ; ಜಾತ್ರೆಗೆ ಬೇರೆ ಊರುಗಳಿಂದಲೂ ಜನ ಸಂಬಂಧಿಕರ ಮನೆಗಳಿಗೆ ಬರುತ್ತಾರೆ. ಎಲ್ಲಾ ವಾರ್ಡ್‌ಗಳ ಬಡಾವಣೆಗಳನ್ನು ಸ್ವಚ್ಛಗೊಳಿಸಬೇಕು. ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಬೇಕು’ ಎಂದರು.

28ನೇ ವಾರ್ಡ್‌ ಸದಸ್ಯ ಮುತ್ತುರಾಜ ಕುಷ್ಟಗಿ ‘ನಗರೋತ್ಥಾನ ಯೋಜನೆಯಡಿ ಸಿದ್ದೇಶ್ವರ ನಗರಕ್ಕೆ ವಿದ್ಯುತ್‌ ಸೌಲಭ್ಯ ಕಲ್ಪಿಸುವ ಕೆಲಸವನ್ನಾದರೂ ಮಾಡಿ. ಅಲ್ಲಿನ ಬಹಳಷ್ಟು ಮನೆಗಳಿಗೆ ಈಗಲೂ ವಿದ್ಯುತ್‌ ಇಲ್ಲ’ ಎಂದು ಆಗ್ರಹಿಸಿದರು.

ನಗರಸಭೆ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಐದನೇ ವಾರ್ಡ್‌ ಸದಸ್ಯೆ ವಿದ್ಯಾ ಹೆಸರೂರ ‘ಸದಸ್ಯರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಸಭೆ ಕೇವಲ ಕಾಟಾಚಾರಕ್ಕೆ ಆಗಿದೆ. ಜನರಿಂದ ಆರಿಸಿ ಬಂದ ಸದಸ್ಯರಿಗೆ ಮರ್ಯಾದೆಯೇ ಇಲ್ಲದಂತಾಗಿದೆ. ಜನರ ಸಮಸ್ಯೆಗಳನ್ನು ಹೇಳಿದರೆ ಅಧಿಕಾರಿಗಳು ಬೇಗನೆ ಪರಿಹರಿಸುವುದಿಲ್ಲ’ ಎಂದರು.

ಉಪಾಧ್ಯಕ್ಷೆ ಆಯೆಷಾ ಬೇಗಂ, ಸ್ಥಾಯಿಸಮಿತಿ ಅಧ್ಯಕ್ಷೆ ಯಲ್ಲಮ್ಮ ಗಿಣಿಗೇರಿ, ಎಇಇ ಮಧುರಾ ವೇದಿಕೆ ಮೇಲಿದ್ದರು.

ಆರ್ಥಿಕ ನೆರವು ಕೊಡಿಸಲು ನಿರ್ಧಾರ

ಕೊಪ್ಪಳ: ದನ ತಿವಿದಿದ್ದರಿಂದ ಇತ್ತೀಚೆಗೆ ಮೃತಪಟ್ಟ 30ನೇ ವಾರ್ಡ್‌ ವ್ಯಾಪ್ತಿಯ ರಮೀಜಾ ಬೇಗಂ ಅವರ ಕುಟುಂಬದ ಸದಸ್ಯರಿಗೆ ಸರ್ಕಾರದಿಂದ ಆರ್ಥಿಕ ನೆರವು ಕೊಡಿಸಬೇಕು ಎನ್ನುವ ವಿಷಯ ಮೊದಲು ಚರ್ಚೆಯಾಯಿತು. ಇದಕ್ಕೆ ಎಲ್ಲ ಸದಸ್ಯರು ಸಹಮತ ವ್ಯಕ್ತಪಡಿಸಿದರು.

ಮೃತ ಮಹಿಳೆಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಅವರ ಬದುಕಿಗೆ ನೆರವಾಗಬೇಕು. ಪತಿಗೆ ನಗರಸಭೆಯಲ್ಲಿಯೇ ಉದ್ಯೋಗ ನೀಡಬೇಕು, ನಿವೇಶನ ಹಾಗೂ ಮನೆ ಕಟ್ಟಿಕೊಡಬೇಕು ಎಂದು ಸದಸ್ಯರು ಆಗ್ರಹಿಸಿದರು. ಇದಕ್ಕೆ ನಗರಸಭೆ ಅಧ್ಯಕ್ಷೆ ಶಿವಗಂಗಾ ಭೂಮಕ್ಕನವರ್, ಸ್ಥಾಯಿ ಸಮಿತಿ ಸದಸ್ಯರು ಮತ್ತು ಆಯುಕ್ತ ಎಚ್‌.ಎನ್‌. ಭುಜಕ್ಕನವರ ಅವರು ಒಪ್ಪಿದರು.

ಸಭೆಯಲ್ಲಿ ಚರ್ಚೆಯಾದ ಪ್ರಮುಖ ವಿಷಯಗಳು

* ನಗರಸಭೆ ಆಯುಕ್ತರು ತಮ್ಮ ಕಚೇರಿಗಿಂತ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೆಚ್ಚು ಸಮಯ ಇರುತ್ತಾರೆ ಎನ್ನುವ ದೂರು ಸಾಮಾನ್ಯವಾಗಿದೆ. ಆದ್ದರಿಂದ ಆಯಕ್ತರು ನಗರಸಭೆಯಲ್ಲಿಯೇ ಹೆಚ್ಚು ಹೊತ್ತು ಇರಬೇಕು: ಸದಸ್ಯ ಮುತ್ತುರಾಜ ಕುಷ್ಟಗಿ ಆಗ್ರಹ.

* ಸಾಮಾಜಿಕ ತಾಣದಲ್ಲಿ ನನ್ನ ಹೆಸರಿನಲ್ಲಿ ವೈಯಕ್ತಿಕ ಖಾತೆಗಳಿವೆ. ನನಗೆ ಬೇಕಾದದ್ದನ್ನು ಬರೆದುಕೊಳ್ಳುತ್ತೇನೆ. ಅದನ್ನು ಕೇಳಲು ನೀವು ಯಾರು: 16ನೇ ವಾರ್ಡ್‌ ಸದಸ್ಯ ಸೋಮಣ್ಣ ಹಳ್ಳಿ ಪ್ರಶ್ನೆ.

* ಅಶೋಕ ವೃತ್ತ ರಕ್ಷಣೆಗೆ ಹೊಸ ಮಾದರಿಯ ವಿನ್ಯಾಸ ರೂಪಿಸಲಾಗಿದೆ. 15ನೇ ಹಣಕಾಸು ಯೋಜನೆಯ ಉಳಿತಾಯದ ಹಣದಲ್ಲಿ ಈ ಕಾರ್ಯ ಮಾಡಲು ನಗರಸಭೆ ನಿರ್ಧಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.