ADVERTISEMENT

ಕೊಪ್ಪಳ | ಸಿಎಂ ಆದೇಶ ಪಾಲಿಸದ ಜಿಲ್ಲಾಧಿಕಾರಿ: ಮುಂದುವರಿದ ಉಕ್ಕಿನ ಕಾರ್ಖಾನೆ ಕೆಲಸ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2025, 8:31 IST
Last Updated 5 ಮಾರ್ಚ್ 2025, 8:31 IST
   

ಕೊಪ್ಪಳ: ಜಿಲ್ಲಾ ಕೇಂದ್ರದ ಸಮೀಪದಲ್ಲಿ ಬಲ್ಡೋಟಾ ಕಂಪನಿ ಉಕ್ಕಿನ ಕಾರ್ಖಾನೆ ಸ್ಥಾಪನೆ ಮಾಡಲು ಮುಂದಾಗಿದ್ದಕ್ಕೆ ಜನ ವಿರೋಧ ಮುಂದುವರಿದಿದ್ದು, ಕೊಪ್ಪಳ ಜನಾಂದೋಲನ ಸಮಿತಿ ಸದಸ್ಯರು ಬುಧವಾರ ಕಾರ್ಖಾನೆ ಆವರಣದಲ್ಲಿಯೇ ಪ್ರತಿಭಟನೆ ನಡೆಸಿದರು.

ಬಸಾಪುರ ಕರೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದರು. ಮಂಗಳವಾರ ಜಿಲ್ಲೆಯ ಜನಪ್ರತಿನಿಧಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕಾರ್ಖಾನೆ ಆರಂಭವಾದರೆ ಆಗುವ ಅಪಾಯದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು. ಆಗ ಸಿದ್ದರಾಮಯ್ಯ ಕಾರ್ಖಾನೆ ಕೆಲಸ ಸ್ಥಗಿತ ಮಾಡಲು ಕ್ರಮ ಕೈಗೊಳ್ಳುವಂತೆ ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್ ಅವರಿಗೆ ಸೂಚಿಸಿದ್ದರು. ಆದರೆ ಕಾರ್ಖಾನೆ ಆವರಣದಲ್ಲಿ ಬುಧವಾರ ವಾಹನಗಳ ಸಾಗಾಟ, ಮಣ್ಣು ಸಮತಟ್ಟು ಮಾಡಿಕೊಳ್ಳುವ ಹಾಗೂ ಜೆಸಿಬಿಗಳ ಓಡಾಟ ನಡೆದಿತ್ತು.

ಇದರಿಂದ ಆಕ್ರೋಶಗೊಂಡ ಜನಾಂದೋಲನ ಸಮಿತಿ ಪ್ರಮುಖರಾದ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ನಜೀರಸಾಬ್ ಮೂಲಿಮನಿ, ಜಿ.ಎಸ್. ಗೋನಾಳ, ಜ್ಯೋತಿ ಗೊಂಡಬಾಳ, ಮಂಜುನಾಥ ಗೊಂಡಬಾಳ ಹಾಗೂ ಇತರರು ಜಿಲ್ಲಾಧಿಕಾರಿಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದರೂ ಆದೇಶ ಪಾಲಿಸಿಲ್ಲ. ಜಿಲ್ಲೆಯ ಜನರ ಆಶಯಕ್ಕೆ ಬೆಲೆ ಕೊಡದ ಜಿಲ್ಲಾಧಿಕಾರಿಯನ್ನು ಕೂಡಲೆ ವರ್ಗಾವಣೆಯ ಮಾಡಬೇಕು ಎಂದು ಆಗ್ರಹಿಸಿದರು.

ADVERTISEMENT

ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ ಜಿಲ್ಲಾಧಿಕಾರಿಗೆ ಖುದ್ದು ಮುಖ್ಯಮಂತ್ರಿ ಕಾರ್ಖಾನೆ ಕೆಲಸ ಸ್ಥಗಿತಗೊಳ್ಳುವಂತೆ ಸೂಚಿಸಿದರೂ ಆದೇಶ ಪಾಲಿಸಿಲ್ಲ.‌ ಬದಲಾಗಿ ಕಾರ್ಖಾನೆ ಕೆಲಸ ಚುರುಕು ಪಡೆದುಕೊಂಡಿದೆ. ಕೂಡಲೇ ಸರ್ಕಾರ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.

ಸಂಘಟನೆಯ ಮುಖಂಡರು ಕಾರ್ಖಾನೆ ಆವರಣದಲ್ಲಿ ಒಳಗಡೆ ಹೋಗುವಾಗ ಕಾರ್ಖಾನೆ ಸಿಬ್ಬಂದಿ‌ ಜೊತೆ ಮಾತಿನ ಚಕಮಕಿ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.