ADVERTISEMENT

ವಿಪರೀತ ಚಳಿ : ಕಡಲೆ ಬೆಳೆ ಉತ್ತಮ ಫಸಲು

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 5:24 IST
Last Updated 26 ಡಿಸೆಂಬರ್ 2025, 5:24 IST
ಉತ್ತಮ ಫಸಲಿನ ಕಡಲೆ ಬೆಳೆ
ಉತ್ತಮ ಫಸಲಿನ ಕಡಲೆ ಬೆಳೆ   

ಕುಕನೂರು: ಬಿತ್ತನೆ ಅವಧಿಯಲ್ಲಿ ಮಳೆ ಹಾಗೂ ಬಿತ್ತನೆಯ ನಂತರ ಚೆನ್ನಾಗಿ ಚಳಿ ಬಿದ್ದಿದ್ದರಿಂದ ಈ ಬಾರಿ ಕಡಲೆ ಬೆಳೆ ಉತ್ತಮವಾಗಿದೆ. ವಾತಾವರಣ ಬೆಳೆಗೆ ಪೂರಕವಾಗಿದ್ದು, ರಾತ್ರಿ ಚಳಿ ಹಾಗೂ ಹಗಲು ಬಿಸಿಲಿರುವುದರಿಂದ ರೋಗ ಹಾಗೂ ಕೀಟಗಳ ಹಾವಳಿ ಕಡಿಮೆ.

ಬನ್ನಿಕೊಪ್ಪ, ತಳಕಲ್, ಬಿನ್ನಾಳ, ಯರೆಹಂಚಿನಾಳ, ಚಿಕ್ಕೆನಕೊಪ್ಪ ಭಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಡಲೆ ಬಿತ್ತನೆ ಮಾಡಲಾಗಿದೆ. ಮೊದಲು ಬಿತ್ತನೆಯಾದ ಬೆಳೆ ಈಗ ತಾಳು ಕಟ್ಟುವ ಹಂತದಲ್ಲಿದ್ದರೆ, ನಂತರದಲ್ಲಿ ಬಿತ್ತನೆ ಮಾಡಿದ ಬೆಳೆ ಆರೋಗ್ಯಕರವಾಗಿದೆ.

‘ಬೆಳೆ ನೋಡಿಕೊಂಡು ಸುಮ್ಮನಿರದೆ ಬೆಳೆಯಲ್ಲಿ ಏನಾದರೂ ಬದಲಾವಣೆ ಕಂಡುಬಂದರೆ ರೈತರು ಕೂಡಲೇ ಉಪಶಮನ ಕ್ರಮ ಕೈಕೊಳ್ಳಬೇಕು ಎಂದು ತಾಲ್ಲೂಕ ಸಹಾಯಕ ಕೃಷಿ ಅಧಿಕಾರಿ ಪ್ರಮೋದ್ ತಿಳಿಸಿದರು.

ADVERTISEMENT

ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಸುರಿದ ಮಳೆಗೆ ಹಿಂಗಾರು ಬಿತ್ತನೆಯಾದ ಕಡಲೆ, ಗೋಧಿ, ಕುಸಬಿ ಸೇರಿದಂತೆ ಕೆಲವು ಬೆಳೆಗಳು ಉತ್ತಮವಾಗಿವೆ. ಈ ಭಾಗದಲ್ಲಿ ಸುಮಾರು 1,200 ಹೆಕ್ಟೇರ್‌ನಲ್ಲಿ ಕಡಲೆ ಬಿತ್ತನೆ ಮಾಡಲಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಸುಮಾರು ಶೇ 30 ರಷ್ಟು ಕಡಲೆ ಬಿತ್ತನೆ ವಿಸ್ತೀರ್ಣ ಹೆಚ್ಚಾಗಿದೆ.

ಕಡಲೆ ಬೆಳೆ ಹೂವಾಡುವ ಪ್ರಾರಂಭಿಕ ಹಂತದಲ್ಲಿ ಶೇ.2ರಷ್ಟು ಯೂರಿಯಾ ದ್ರಾವಣ ಸಿಂಪಡಣೆ ಮಾಡಿ (ಅಂದರೆ ಪ್ರತಿ ಲೀಟರ್ ನೀರಿಗೆ 20 ಗ್ರಾಂ ಯೂರಿಯಾ ಬೆರಸಿ) ಪ್ರತಿ ಎಕರೆಗೆ 150 ರಿಂದ 300 ಲೀಟರ್ ನೀರು ಸಿಂಪಡಣೆ ಅವಶ್ಯ. ಲಘು ಪೋಷಕಾಂಶಗಳಾದ ಇಡಿಟಿಎ ರೂಪದ ಶೇ.0.5 ಸತುವಿನ ಸಲ್ಫೇಟ್ ಮತ್ತು ಶೇ.0.5 ಕಬ್ಬಿಣದ ಸಲ್ಫೇಟ್, ಶೇ 0.2 ಬೋರಾಕ್ಸ್ ಹಾಗೂ ಶೇ 0.1 ಅಮೋನಿಯಂ ಮಾಲಿಬ್ಡೇಟ್‍ನ ಮಿಶ್ರಣವನ್ನು ಹೂವಾಡುವ ಹಂತದಲ್ಲಿ ಹತ್ತು ದಿನಗಳ ಅಂತರದಲ್ಲಿ ಎರಡು ಬಾರಿ ಸಿಂಪಡಣಾ ವಿಧಾನವನ್ನು ಅನೇಕ ರೈತರು ಮಾಡಿದ್ದರಿಂದ ಉತ್ತಮ ಬೆಳೆ ಬಂದಿದೆ ಎನ್ನತ್ತಾರೆ ಕೃಷಿ ಅಧಿಕಾರಿ ಪ್ರಮೋದ್.

ಕಡಲೆ ಬಿತ್ತಿದ 35 ದಿನಗಳ ನಂತರ 20 ಪಿಪಿಎಂ ನ್ಯಾಫ್ಯಾಲಿಕ್ ಆಸಿಟಿಕ್ ಅಸಿಡ್ ಸಿಂಪಡಿಸಬೇಕು. ಹಾಗೂ 1.0 ಮಿಲೀ ನೈಟ್ರೋಬೆಂಜೀನ್ ಸಸ್ಯವರ್ಧಕಗಳನ್ನು ಸಿಂಪಡಣೆ ಮಾಡುವುದರಿಂದ ಹೂವು ಉದುರುವುದು ಕಡಿಮೆಯಾಗಿ, ಕಾಯಿಗಳ ಸಂಖೈ ಹೆಚ್ಚುವುದಲ್ಲದೆ, ಗುಣಮಟ್ಟದ ಫಸಲು ಬರುವುದು. ಅಲ್ಲದೆ ಬೆಳೆಯ ಕುಡಿ ಚಿವುಟುವುದು ಅವಶ್ಯವಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.