ಕೊಪ್ಪಳ: ನೂತನ ಕೃಷಿ ಕಾಯ್ದೆಗಳನ್ನು ಮತ್ತು ವಿದ್ಯುಚ್ಛಕ್ತಿ (ತಿದ್ದುಪಡಿ) ಮಸೂದೆ 2020 ಅನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ(ಅಖಿಲ ಭಾರತ ಕೃಷಿ ಕೂಲಿಕಾರರ ಸಂಘಸಿಐಟಿಯು ಸಂಯೋಜಿತ) ಸದಸ್ಯರು ಮಂಗಳವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.
ದೇಶದ ವಿವಿಧ ರಾಜ್ಯಗಳ ಕೃಷಿಕರು ಕಳೆದ ಒಂದು ತಿಂಗಳಿಂದ ದೆಹಲಿ ಗಡಿಗಳಲ್ಲಿ ರಸ್ತೆಯ ಮೇಲೆ ಠಿಕಾಣಿ ಹೂಡಿ ಚಳಿ ಗಾಳಿಯನ್ನು ಲೆಕ್ಕಿಸದೆ ಸತ್ಯಾಗ್ರಹ ನಡೆಸುತ್ತಿದ್ದಾರೆ. ಸರ್ಕಾರ ರೈತರ ಕೂಗಿಗೆ ಕಿವಿ ಮುಚ್ಚಿಕೊಂಡಿರುವುದು ಖಂಡನೀಯ ಎಂದರು.
ಹೊಸ ಕೃಷಿ ಕಾಯ್ದೆಗಳು ರೈತರಿಗೆ ಸರ್ಕಾರದ ನೆರವು ಕಡಿತ ಮಾಡಲಿದೆ. ಗುತ್ತಿಗೆ ಕೃಷಿಗೆ ಪ್ರೋತ್ಸಾಹ ನೀಡಲಿವೆ. ರೈತರು ತಮ್ಮ ಭೂಮಿಯನ್ನು ಗುತ್ತಿಗೆಗೆ ನೀಡುವ ಬಲವಂತಕ್ಕೆ ಒಳಗಾಗುವರು. ಇದರಿಂದ ಕೃಷಿ ಕೂಲಿಕಾರರ ಮೇಲೆ ನೇರವಾದ ಪರಿಣಾಮ ಬೀರುವುದು. ಕೃಷಿಯಬಂಡವಾಳಶಾಹಿ ಕಂಪೆನಿಗಳಿಂದ ತೀವ್ರಗೊಂಡು ಯಾಂತ್ರೀಕರಣ ಹೆಚ್ಚಾಗುವುದು. ಇದರಿಂದ ಕೂಲಿಕಾರರು ಕೆಲಸ ಕಳೆದುಕೊಂಡು ಬೀದಿ ಪಾಲಾಗುವರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗುತ್ತಿಗೆ ಕೃಷಿಯಲ್ಲಿ ಹೆಚ್ಚು ಕೂಲಿಕಾರರು ಬೇಕಾಗುವ ಭತ್ತ ಮೊದಲಾದ ಬೆಳೆಗಳನ್ನು ಕೈಬಿಡಲಾಗುವುದು. ಗುತ್ತಿಗೆ ಕೃಷಿಯಿಂದ ಗೇಣಿದಾರ ರೈತರಿಗೆ ಬೇಸಾಯ ಮಾಡಲು ಭೂಮಿ ಸಿಗದಂತಾಗುವುದು. ರೈತರ ಫಸಲಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನು ಮೂಲಕ ಖಚಿತ ಪಡೆಸಲು ನಿಮ್ಮ ಸರ್ಕಾರ ಒಪ್ಪದಿರುವುದರಿಂದ ಕೃಷಿ ಕೂಲಿಕಾರರಿಗೂ ನ್ಯಾಯಸಮ್ಮತ ಕನಿಷ್ಠ ವೇತನ ಸಿಗದಂತಾಗುವುದು. ಗುತ್ತಿಗೆ ಕೃಷಿ ಪದ್ಧತಿಯಲ್ಲಿ ಆಹಾರ ಧಾನ್ಯಗಳಿಗಿಂತ ಹೆಚ್ಚಾಗಿ ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗುವುದು. ಇದರಿಂದಾಗಿ ದೇಶ ಆಹಾರದ ಕೊರತೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡರಾದಬಸವರಾಜ ಮರಕುಂಬಿ, ಸುಂಕಪ್ಪ ಗದಗ,ಹುಸೇನಪ್ಪ.ಕೆ. ರಮೇಶ ಬಡಿಗಿ ಅಂದಪ್ಪ ಬರದೂರ,ಬಾಳಪ್ಪ ಹುಲಿಹೈದರ, ಮರಿನಾಗಪ್ಪ ಡಗ್ಗಿ,ಖಾಸೀಮಸಾಬ್ ಸರದಾರ, ಹುಸೇನಸಾಬ್ ನದಾಫ್, ಹುಲಗಪ್ಪ ಗೋಕಾವಿ, ದುರಗೇಶ ತಂಬೂರಿ, ರೇಣುಕಮ್ಮ ಇಡಿಗಲ್, ಪಾರಮ್ಮ ಗದ್ದಿ, ಫಕೀರಮ್ಮ ಗೌರಿಪುರ, ರೇಣುಕಮ್ಮ ಭೀಮನೂರ, ಅಮೀನಾ ಬೇಗಂ, ಖಾಜಾಬನ್ನಿ ಕರಡಿ, ಶಶಿಕಲಾ ಇಟಗಿ, ಅಮರವ್ವ ಗದಗ, ರಾಮಣ್ಣ ದೊಡ್ಡಮನಿ, ಸತ್ಯಮ್ಮ ಗಬ್ಬೂರ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.