ADVERTISEMENT

ಬಯಲಾಟದಲ್ಲಿ ಹನುಮಂತಪ್ಪ ಸಾಧನೆ

ಜುನಸಾಬ ವಡ್ಡಟ್ಟಿ
Published 20 ಮಾರ್ಚ್ 2022, 5:49 IST
Last Updated 20 ಮಾರ್ಚ್ 2022, 5:49 IST
ಹನುಮಂತಪ್ಪ ಎಲಿಗಾರ
ಹನುಮಂತಪ್ಪ ಎಲಿಗಾರ   

ಅಳವಂಡಿ: ಈಚಿನ ದಿನಗಳಲ್ಲಿ ಟಿ.ವಿ ಮೊಬೈಲ್ ಬಂದ ಬಳಿಕ ನಾಟಕ, ಬಯಲಾಟ, ಜಾನಪದ ಕಲೆ, ಗಿಗಿಪದ, ಭಜನೆ, ತೊಗಲು ಗೊಂಬೆಯಾಟದಂತಹ ಸಾಂಪ್ರದಾಯಿಕ ಕಲೆಗಳು ಮರೆಯಾಗುತ್ತಿವೆ.

ಇದರ ಮಧ್ಯೆ ಅಳವಂಡಿ ಗ್ರಾಮದ ಬಯಲಾಟ, ಜಾನಪದ ಕಲಾವಿದ ಹನುಮಂತಪ್ಪ ತಿಪ್ಪಣ್ಣ ಎಲಿಗಾರ ಅವರು ತಮ್ಮ ಕೂಲಿ ಕೆಲಸದ ನಡುವೆಯೂ ಕಲೆಗೆ ಸಮಯ ಮೀಸಲಿರಿಸಿದ್ದಾರೆ. ಈ ಮೂಲಕ ಗ್ರಾಮದ ನೆಚ್ಚಿನ ಮಾಸ್ತರ್ ಆಗಿದ್ದಾರೆ .

ಸುಮಾರು 45 ವರ್ಷಗಳಿಂದ ಬಯಲಾಟಗಳ ನಿರ್ದೇಶನ ಮಾಡುತ್ತಿದ್ದಾರೆ. ಅವರ ಕಲಾ ಸೇವೆ ಗುರುತಿಸಿ ಕರ್ನಾಟಕ ಬಯಲಾಟ ಅಕಾಡೆಮಿಯು ಸಣ್ಣಾಟ ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಿ ಗೌರವಿಸಿದೆ.

ADVERTISEMENT

ಬಾಲ್ಯದಿಂದ ರಂಗಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದು, 400ಕ್ಕೂ ಅಧಿಕ ಬಯಲಾಟಗಳನ್ನು ನಿರ್ದೇಶಿಸಿದ್ದಾರೆ. 63ರ ಇಳಿ ವಯಸ್ಸಿನಲ್ಲಿಯೂ ಕಲಾ ಸೇವೆ ಮುಂದುವರೆಸಿದ್ದಾರೆ. ನಿರ್ದೇಶನದ ಜತೆಗೆ ಅನೇಕ ಮೂಡಲಪಾಯದ ಭಕ್ತಿ ಹಾಗೂ ಪೌರಾಣಿಕ ಕಥೆ ಆಧಾರಿಸಿ 10 ಬಯಲಾಟದ ಕೃತಿಗಳನ್ನು ರಚಿಸಿದ್ದಾರೆ.

‘ವೆಂಕಟೇಶ್ವರ ಮಹಾತ್ಮೆ ಅರ್ಥಾತ್ ಪದ್ಮವತಿ ಕಲ್ಯಾಣ’, ‘ದಶಕಂಠ ರಾವಣ ದಿಗ್ವಿಜಯ ಅರ್ಥಾತ್ ಇಂದ್ರನ ಗರ್ವಭಂಗ’, ‘ಸೀತಾ ಕಲ್ಯಾಣ ಅರ್ಥಾತ್ ರಾಮ ಪರಶುರಾಮರ ಕಾಳಗ’, ಶ್ರೀ ಆದಿಶಕ್ತಿ ದುರ್ಗಾದೇವಿ ಮಹಾತ್ಮೆ ಅರ್ಥಾತ್ ಕಲಿಯುಗದ ರೇಣುಕಾ ಯಲ್ಲಮ್ಮ’, ‘ಸೀತಾ ಪರಿತ್ಯಾಗ‘, ‘ಲವ ಕುಶರ ಕಾಳಗ’, ‘ಶ್ರೀ ಬನಶಂಕರಿ ಮಹಾತ್ಮೆ’, ‘ದುರ್ಗ ದುರ್ಮಾರ್ಗ ರಕ್ಕಸರ ವಧೆ’, ‘ಸೀತಾಪಹರಣ ಲಂಕಾದಹನ’ ಬಯಲಾಟದ ಕೃತಿಗಳನ್ನು ಬರೆದಿದ್ದಾರೆ.

ಕರ್ನಾಟಕ ಬಯಲಾಟ ಅಕಾಡೆಮಿ ವತಿಯಿಂದ 2020-21ನೇ ಸಾಲಿನ ಗೌರವ ಹಾಗೂ ಸಣ್ಣಾಟ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ. ಬೆಳಗಾವಿಯಲ್ಲಿ ಸಾಂಸ್ಕೃತಿಕ ಮಾಣಿಕ್ಯ ರತ್ನ, ಕೊಪ್ಪಳ ಜಿಲ್ಲಾ ಉತ್ಸವದಲ್ಲಿ ರಂಗಭೂಮಿ ಉತ್ತಮ ಕಲಾವಿದ ಪುರಸ್ಕಾರ, ಸಂಘ ಸಂಸ್ಥೆಗಳಿಂದ ಸನ್ಮಾನ, ಯಲಬುರ್ಗಾದಲ್ಲಿ ರಂಗಭೂಮಿ ಕಂಚಿನ ಕಂಠ ಕಲಾವಿದ ಗೌರವ, ಕೊಪ್ಪಳ ಹಿರಿಯ ನಾಗರಿಕ ವೇದಿಕೆಯಿಂದ ಉತ್ತಮ ಕಲಾವಿದ ಗೌರವ ದೊರೆತಿವೆ. ಯಲಬುರ್ಗಾ ಯುವಜನ ಮೇಳದಲ್ಲಿ ನಿರ್ಣಯಕರಾಗಿದ್ದರು. ಕರ್ನಾಟಕ ಜಾನಪದ ಹಾಗೂ ಯಕ್ಷಗಾನ ಅಕಾಡೆಮಿಯಿಂದ ನಡೆದ ಕೊಪ್ಪಳ ಜಿಲ್ಲಾ ಬಯಲಾಟ ಸ್ಪರ್ಧೆಯಲ್ಲಿ ಹಿನ್ನೆಲೆ ಸಂಗೀತದಲ್ಲಿ ಪ್ರಥಮ ಸ್ಥಾನ ಗಳಿಸಿದ್ದರು.

*ಇದುವರೆಗೂ 400ಕ್ಕೂ ಹೆಚ್ಚು ಬಯಲಾಟ ನಿರ್ದೇಶನ ಮಾಡಿದ್ದೇನೆ. ಭಕ್ತಿ, ಪೌರಾಣಿಕ ಕಥೆ ಆಧಾರಿಸಿ 10 ಬಯಲಾಟದ ಕೃತಿ ರಚಿಸಿ, ನಿರ್ದೇಶಿಸಿದ್ದೇನೆ

-ಹನುಮಂತಪ್ಪ ಎಲಿಗಾರ, ಬಯಲಾಟ ಕಲಾವಿದ

*ಹಲವು ಮೂಡಲಪಾಯದ ಕಥೆ ರಚಿಸಿ ನಿರ್ದೇಶನ ಮಾಡಿದ ಹನುಮಂತಪ್ಪ ಮಾಸ್ತರ್ ಇಳಿ ವಯಸ್ಸಿನಲ್ಲಿ ತಮ್ಮ ಕಲಾಸೇವೆಯನ್ನು ಮುಂದುವರೆಸಿದ್ದಾರೆ

-ವಸಂತರಡ್ಡಿ ಗದ್ದಿಕೇರಿ, ಗ್ರಾಮದ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.