ಗಂಗಾವತಿ (ಕೊಪ್ಪಳ ಜಿಲ್ಲೆ): ಗಂಗಾವತಿ ತಾಲ್ಲೂಕಿನ ವಿರೂಪಾಪುರಗಡ್ಡೆಯ ರೆಸಾರ್ಟ್ನಲ್ಲಿ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದ ಇಬ್ಬರು ಅಪರಾಧಿಗಳಿಗೆ ಗಂಗಾವತಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸಷನ್ಸ್ ನ್ಯಾಯಾಲಯವು 20 ವರ್ಷ ಜೈಲು ಮತ್ತು ಅಪರಾಧಿಗಳಿಬ್ಬರೂ ತಲಾ ₹3 ಲಕ್ಷ ಪರಿಹಾರ ನೀಡುವಂತೆ ಸೋಮವಾರ ತೀರ್ಪು ನೀಡಿದೆ.
ಪ್ರಕರಣವೇನು?
ಅತ್ಯಾಚಾರಕ್ಕೆ ಒಳಗಾಗಿದ್ದ ಮಹಿಳೆ ಸೇರಿ ಉತ್ತರ ಪ್ರದೇಶದ ಫಾರೂಕಾಬಾದ್ನ ರೋಹಿತ್ ಮಂಗಲಿಕ, ರಾಜಸ್ಥಾನದ ಕದ್ರಾ ಗ್ರಾಮದ ರಾಜಕುಮಾರ್ ಸೈನಿ ಎಂಬುವವರು ಪ್ರವಾಸಕ್ಕೆಂದು ವಿರೂಪಾಪುರಗಡ್ಡೆ ಗ್ರಾಮಕ್ಕೆ ಬಂದಿದ್ದರು. ಅವರೆಲ್ಲರೂ ಸಾಫ್ಟ್ವೇರ್ ಎಂಜಿನಿಯರ್ಗಳಾಗಿ ಹೈದರಾಬಾದ್ನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಪ್ರವಾಸದ ಭಾಗವಾಗಿ 2015ರ ಆಗಸ್ಟ್ನಲ್ಲಿ ಹೇಮಾ ರೆಸಾರ್ಟ್ನಲ್ಲಿ ತಂಗಿದ್ದರು.
ಅಂದು ಸಂಜೆ ಇಬ್ಬರು ಆರೋಪಿಗಳು ಸಾಫ್ಟ್ ಡ್ರಿಂಕ್ಸ್ನಲ್ಲಿ ಮಹಿಳೆಗೆ ತಿಳಿಯದಂತೆ ನಶೆ ಬರುವ ಮದ್ಯ ಬೆರೆಯಿಸಿ ಕುಡಿಸಿ, ಅತ್ಯಾಚಾರ ಮಾಡಿದ್ದರು. ಈ ಕುರಿತು ಮಹಿಳೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅಂದಿನ ಸಿಪಿಐ ಪ್ರಭಾಕರ ಧರ್ಮಟ್ಟಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ ಅವರು ಆರೋಪಿಗಳನ್ನು ತಪ್ಪಿತಸ್ಥರೆಂದು ತೀರ್ಪು ನೀಡಿದ್ದಾರೆ. ದಂಡದ ಮೊತ್ತವನ್ನು ಮಹಿಳೆಗೆ ಪರಿಹಾರವಾಗಿ ಮೂರು ತಿಂಗಳೊಳಗೆ ನೀಡಬೇಕು ಎಂದಿದ್ದಾರೆ. ಪರಿಹಾರ ನೀಡಿದದ್ದಲ್ಲಿ ಹೆಚ್ಚುವರಿಯಾಗಿ 5 ವರ್ಷ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸರ್ಕಾರಿ ಅಭಿಯೋಜಕಿ ನಾಗಲಕ್ಷ್ಮಿ ಎಸ್. ವಾದ ಮಂಡಿಸಿದ್ದರು. ಗ್ರಾಮೀಣ ಪೊಲೀಸ್ ಠಾಣೆ ಸಿಬ್ಬಂದಿ ವೆಂಕಟೇಶ ಮತ್ತು ಬಸವರಾಜ ಎಂಬುವವರು ಪ್ರಕರಣದ ವಿಚಾರದ ಸಮಯದಲ್ಲಿ ಸಾಕ್ಷಿಗಳನ್ನು ಸಮಯಕ್ಕೆ ಹಾಜರುಪಡಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.