ಹಿರೇಬೆಣಕಲ್ (ಗಂಗಾವತಿ): ‘18 ವರ್ಷ ಮೇಲ್ಪಟ್ಟ ಗ್ರಾಮದ ಪ್ರತಿಯೊಬ್ಬರೂ ಕಡ್ಡಾಯವಾಗಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಡಿ.ಮೋಹನ್ ಮನವಿ ಮಾಡಿದರು.
ತಾಲ್ಲೂಕಿನ ಹಿರೇಬೆಣಕಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಸಾಮೂಹಿಕ ಕೋವಿಡ್ ಲಸಿಕಾ ವಿತರಣಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 18 ವರ್ಷ ಮೇಲ್ಪಟ್ಟ ಎಲ್ಲ ವಯೋಮಾನದವರಿಗೂ ಸರ್ಕಾರ ಉಚಿತವಾಗಿ ಲಸಿಕೆ ವಿತರಣೆ ಮಾಡುತ್ತಿದೆ. ಗ್ರಾಮದ ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು.
ಉದ್ಯೋಗ ಖಾತರಿ ಯೋಜನೆಯಡಿ ದುಡಿಯುವ ಕೂಲಿಕಾರರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳುವ ಮೂಲಕ ತಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಲಸಿಕೆಯಿಂದ ಯಾವುದೇ ಅಡ್ಡಪರಿಣಾಮ ಇಲ್ಲ. ಮುಂದಿನ ದಿನಗಳಲ್ಲಿ ಕೋವಿಡ್ 3ನೇ ಅಲೆ ವ್ಯಾಪಿಸುವ ಆತಂಕವಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ಕೆಲಸ ಮಾಡಬೇಕು ಎಂದರು.
ಇದೇ ವೇಳೆ ಗ್ರಾಮದ ಪ್ರತಿ ಮನೆ-ಮನೆಗೂ ತೆರಳಿ ಲಸಿಕಾ ಅಭಿಯಾನದ ಕುರಿತು ಜಾಗೃತಿ ಮೂಡಿಸಿ, ನರೇಗಾ ಯೋಜನೆಯಡಿ ದುಡಿಯುತ್ತಿರುವ ಎಲ್ಲ ಕೂಲಿಕಾರರಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸುವಂತೆ ಕಾಯಕಬಂಧುಗಳಿಗೆ ತಿಳಿಸಲಾಯಿತು.
ವೈದ್ಯೆ ಡಾ.ಅಜುಂ ತಾಜ್, ತಾಲ್ಲೂಕು ಹಿರಿಯ ನೀರಿಕ್ಷಾಣಾಧಿಕಾರಿ ವಿಜಯ್ ಪ್ರಸಾದ್, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಆಶಾ ಬೇಗಂ, ಗ್ರಾ.ಪಂ ಸದಸ್ಯರಾದ ವಿರೇಶ್ ಅಂಗಡಿ, ಶಿವಣ್ಣ, ಶಾಮೀದ್ ಬೀ, ಯಮನೂರಪ್ಪ, ಬಸಮ್ಮ, ತಾ.ಪಂ ಸಿಬ್ಬಂದಿಗಳಾದ ಶಿವಮೂರ್ತಿ, ತನ್ವೀರ್, ವೀಣಾ, ಶಿವಕುಮಾರ್ ಕೆ, ಅರೋಗ್ಯ ಇಲಾಖೆ ಸಿಬ್ಬಂದಿಗಳಾದ ಅನುಶ್ರೀ, ಗೀತಾ, ಹೇಮಾವತಿ, ವೆಂಕಟೇಶ್, ಶೃತಿ, ವಿಶಾಲ ಹಾಗೂ ಕರಿಯಪ್ಪ ಅವರುಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.