
ವಂಚನೆ
ಕನಕಗಿರಿ: ಚಿನ್ನದ ಆಸೆಗೆ ಬಿದ್ದು ಒಂದು ಎಕರೆ ಹೊಲ ಹಾಗೂ ನಿವೇಶನ ಕಳೆದುಕೊಂಡಿರುವ ಘಟನೆ ಸಮೀಪದ ವಿಠಲಾಪುರ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದೆ. ಗಂಗಾವತಿಯ ಸುರೇಶ ಯಲ್ಲಪ್ಪ ಕನಕಗಿರಿ ವಂಚನೆಗೊಳಗಾದವರು. ಅವರು ತಮ್ಮ ಒಂದು ಎಕರೆ ಹೊಲ ಹಾಗೂ ನಿವೇಶನವನ್ನು ಮಾರಿ ₹48 ಲಕ್ಷ ಕಳೆದುಕೊಂಡಿದ್ದಾರೆ.
ಕೊಪ್ಪಳದ ಮೋಚಿಗೇರ ಓಣಿಯ ರವಿ ಬಂಗಾಳಿಮರದ ಅವರಿಗೆ ಮೂರ್ನಾಲ್ಕು ವರ್ಷಗಳ ಹಿಂದೆ ಗಂಗಾವತಿಯ ಸುರೇಶ ಯಲ್ಲಪ್ಪ ಕನಕಗಿರಿ ಎಂಬುವವರು ವಿಠಲಾಪುರದ ಐವರನ್ನು ಪರಿಚಯಿಸಿದ್ದರು. ಎರಡು ವರ್ಷಗಳ ಹಿಂದೆ ರವಿ ಅವರ ಮನೆಗೆ ಬಂದಿದ್ದ ಆರೋಪಿಗಳು, ‘ನಮ್ಮ ಮನೆಯಲ್ಲಿ ಬಂಗಾರದ ನಿಧಿ ಸಿಕ್ಕಿದೆ ಎಂದು ಹೇಳಿ ತಮ್ಮ ಮನೆಗೆ ಕರೆದುಕೊಂಡು ಹೋಗಿ, ಬಂಗಾರದ ನಾಣ್ಯ ತೋರಿಸಿ ಈ ವಿಷಯವನ್ನು ಯಾರಿಗೂ ಹೇಳಬೇಡಿ’ ಎಂದು ಹೇಳಿದ್ದರು.
ಇದನ್ನು ನಂಬಿದ ರವಿ, ಕಡಿಮೆ ಬೆಲೆಗೆ ಬಂಗಾರ ಸಿಗುತ್ತದೆ ಎಂದು ಆಸೆಗೆ ಬಿದ್ದು, ತಮ್ಮ ಒಂದು ಎಕರೆ ಹೊಲ ಹಾಗೂ ಒಂದು ನಿವೇಶನ ಮಾರಾಟ ಮಾಡಿದ್ದಾರೆ. ಅದರಿಂದ ಬಂದ ₹ 48 ಲಕ್ಷ ಹಣವನ್ನು ಅಳಿಯ ರಮೇಶನ ಮೂಲಕ ನಗದು ಲೋಕೇಶನಿಗೆ ನೀಡಿದ್ದಾರೆ. ಲೋಕೇಶನು ಬಂಗಾರ ಇದೆ ಎಂದು ನಂಬಿಸಿ, ಬಟ್ಟೆಯಿಂದ ಕಟ್ಟಿರುವ ಭಾರವಾದ ಗಂಟೊಂದನ್ನು ನೀಡಿದ್ದಾನೆ. ಇದನ್ನು 21 ದಿನಗಳವರಗೆ ಇಟ್ಟು, ನಂತರ ಪೂಜೆ ಮಾಡಿ ಗಂಟು ಬಿಚ್ಚಬೇಕು. ಇಲ್ಲದಿದ್ದರೆ ಬಂಗಾರವು ಬೂದಿಯಾಗುತ್ತದೆ ಎಂದು ಹೇಳಿದ್ದಾರೆ. 21 ದಿನಗಳ ನಂತರ ತೆಗೆದು ನೋಡಿದರೆ ಅದರಲ್ಲಿ ಖೊಟ್ಟಿ ನಾಣ್ಯ ಹಾಗೂ ಕಲ್ಲು ಇದ್ದವು. ಇದನ್ನು ಕಂಡ ರವಿಗೆ, ತಾನು ಮೋಸ ಹೋಗಿರುವುದು ಖಚಿತವಾಗಿದೆ.
ಈ ಬಗ್ಗೆ ಪೊಲೀಸರಿಗೆ ದೂರು ನೀಡುತ್ತೇವೆ ಎಂದು ತಿಳಿಸಿದಾಗ ಹಣದ ಭದ್ರತೆಗಾಗಿ ಶಾಂತಮ್ಮನ ಹೆಸರಿನಲ್ಲಿರುವ ಎರಡು ಎಕರೆ ಹೊಲ ಹಾಗೂ ₹ 25 ಲಕ್ಷ ನಗದು ಹಣ ನೀಡಿ, ಉಳಿದ ₹ 23 ಲಕ್ಷ ಕೊಡಿ, ಅಂತಾ ಕೇಳಿದರೆ ಜಾತಿ ನಿಂದನೆ ಮಾಡಿ, ರಮೇಶ ಕಳ್ಳಿಮನಿ ಹಾಗೂ ರಮೇಶ ಹುಲ್ಲೂರು ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ರವಿ ಅವರು ದೂರು ನೀಡಿದ್ದು, ಈ ಪ್ರಕಾರ ವಿಠಲಾಪುರ ಗ್ರಾಮದ ಶಂಕರಗೌಡ ಆದಾಪುರ, ಶಾಂತಮ್ಮ ಆದಾಪುರ, ಹನುಮಂತಗೌಡ, ಸಣ್ಣ ವಿರೂಪಾಕ್ಷಗೌಡ ಹಾಗೂ ದೊಡ್ಡ ವಿರೂಪಾಕ್ಷಗೌಡರ ವಿರುದ್ದ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.