
ಮುನಿರಾಬಾದ್: ಸಮೀಪದ ಬಿಳೆಬಾವಿ ಗ್ರಾಮದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಜಾನಪದ ಗೀತೆ ಹಾಗೂ ಬೀದಿ ನಾಟಕ ಪ್ರದರ್ಶನ ಈಚೆಗೆ ನಡೆಯಿತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾರ್ಗಿಲ್ ಮಲ್ಲಯ್ಯ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘ ಅಳವಂಡಿ ಅವರ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಸದಸ್ಯರಾದ ಲಿಂಗರಾಜ ಬೆಳೆಬಾವಿ, ವೆಂಕಟೇಶ ಚನ್ನ ದಾಸರ ಉದ್ಘಾಟಿಸಿದರು.
ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ ಕಳಸಾಪುರ ಮಾತನಾಡಿ, ‘ಗ್ರಾಮೀಣ ಪ್ರದೇಶದ ಜನತೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು, ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಸಹಕರಿಸಿ. ಉತ್ತಮ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಿ’ ಎಂದರು.
ಜಾನಪದ ಕಲಾತಂಡದಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿ ಸ್ನೇಹ ಕ್ಲಿನಿಕ್, ಗರ್ಭಿಣಿ ಆರೈಕೆ ಮತ್ತು ಹೆರಿಗೆ, ತಾಯಿ ಮಗುವಿನ ರಕ್ಷಣೆ, ಕುಟುಂಬ ಕಲ್ಯಾಣ ನಿಯಂತ್ರಣ ಕಾರ್ಯಕ್ರಮ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ, ಕ್ಷಯರೋಗ ಮತ್ತು ಕುಷ್ಠರೋಗ ನಿರ್ಮೂಲನೆ, ಆರೋಗ್ಯ ಸೇವೆಗಳ ಕುರಿತು ಜಾನಪದ ಗೀತೆ ಮತ್ತು ಬೀದಿ ನಾಟಕ ಪ್ರದರ್ಶನ ನಡೆಯಿತು.
ಕಲಾತಂಡದ ವೀರೇಶ ಹಾಲಗುಂಡಿ, ಸಿದ್ದಲಿಂಗಯ್ಯ ಗೊರ್ಲೆಕೊಪ್ಪ, ವಿರೂಪಾಕ್ಷಪ್ಪ ಯಡಿಯಾಪುರ, ಕೆ.ನಾಗರಾಜ, ಮಹಾದೇವಪ್ಪ, ವಸಂತ್ ಉಳ್ಳಾಗಡ್ಡಿ, ಸಿದ್ದಲಿಂಗಮ್ಮ ಹಾಲಗುಂಡಿ, ಶಿವಲಿಂಗಮ್ಮ, ಆರೋಗ್ಯ ನಿರೀಕ್ಷಕಿ ರಜಿಯಾಬೇಗಂ, ಅಂಗನವಾಡಿ ಕಾರ್ಯಕರ್ತೆ ಅಂಬಮ್ಮ, ಆಶಾ ಕಾರ್ಯಕರ್ತೆ ಉಮಾದೇವಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.