ಹನುಮಸಾಗರ: ತೊಗರಿ ಬೆಳೆಗೆ ಮಳೆ ಕಂಟಕವಾಗಿ ಪರಿಣಮಿಸಿದೆ. ಕೊಯ್ಲಿಗೆ ಬಂದಿರುವ ತೊಗರಿ ಕಾಯಿಯಲ್ಲಿಯ ಬೀಜಗಳು ಮೊಳಕೆಯೊಡೆಯುತ್ತಿವೆ. ಇದರಿಂದ ರೈತರಿಗೆ ನಷ್ಟ ಉಂಟಾಗಿದೆ.
ಸಾವಿರಾರು ರೂಪಾಯಿ ಖರ್ಚು ಮಾಡಿ ತೊಗರಿ ಬೆಳೆದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಮೋಡ ಕವಿದ ವಾತಾವರಣದ ಕಾರಣಕ್ಕೆ ಹೆಚ್ಚು ಕ್ರಿಮಿನಾಶಕ ಸಿಂಪಡಿಸಲಾಗಿತ್ತು ಎಂದು ರೈತರು ನೋವು ತೋಡಿಕೊಂಡರು.
‘ಹತ್ತಾರು ಬಾರಿ ಕ್ರಿಮಿನಾಶಕ ಸಿಂಪಡಣೆ, ಕಳೆ, ಬೀಜ, ಗೊಬ್ಬರ ಎಂದು ಎಕರೆಗೆ ಹತ್ತಾರು ಸಾವಿರ ರೂಪಾಯಿ ಖರ್ಚು ಮಾಡಿದ್ದೇವೆ. ಅಕಾಲಿಕ ಮಳೆಯಿಂದ ನಷ್ಟ ಉಂಟಾಗಿದೆ. ಈಗ ಖರ್ಚೂ ಸಿಗುವುದೂ ಅನುಮಾನ. ಸಾಲ ಮೈಮೆಲೆ ಬಂದಿದೆ’ ಎಂದು ರೈತರಾದ ರಮೇಶ ಬಡಿಗೇರ, ಶಿವಪ್ಪ ಕಬ್ಬರಗಿ ಹಾಗೂ ಹನುಮಂತ ಗೌಡ್ರ ಅಸಹಾಯಕತೆ ವ್ಯಕ್ತಪಡಿಸಿದರು.
ಇನ್ನು ಕೆಲವು ಕಡೆ ಹೊಲಗಳಲ್ಲಿ ನೀರು ನಿಂತು ತೊಗರಿ ಬೆಳೆ ಹಾಳಾಗಿದೆ. ಸ್ವಲ್ಪ ತಡವಾಗಿ ಬಿತ್ತನೆಯಾಗಿರುವ ತೊಗರಿಯ ಹೂವು, ಮೊಗ್ಗು, ಕಾಯಿ ಉದುರಿ ಹೋಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.