ಗಂಗಾವತಿ: ನಗರ ಪೊಲೀಸ್ ಠಾಣೆಯಲ್ಲಿ 2008-2009 ನೇ ಸಾಲಿನಲ್ಲಿ ದಾಖಲಾದ ವಿವಿಧ ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಮೂಲತಃ ಆಂಧ್ರಪ್ರದೇಶದ ನೆಲ್ಲೂರಿನ ಕಪ್ಪರಾಲಾ ತಿಪ್ಪ ಗ್ರಾಮದ ಸಿ.ಎಚ್.ಬಾಬು ಬಂಧಿತ ಆರೋಪಿ.
ಆರೋಪಿ ಸುಮಾರು ನಾಲ್ಕೈದು ಪ್ರಕರಣದಲ್ಲಿ ಒಟ್ಟು ₹4 ಲಕ್ಷ 5 ಸಾವಿರ ಮೌಲ್ಯದಷ್ಟು ಕಳ್ಳತನ ಹಾಗೂ ಸುಲಿಗೆ ಮಾಡಿದ್ದ ಎನ್ನಲಾಗಿದೆ. 2009 ರಲ್ಲಿ ನಗರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಆದರೆ, ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಆರೋಪಿ ತಲೆಮರೆಸಿಕೊಂಡಿದ್ದರು.
ಎಲ್.ಪಿಸಿ ಪ್ರಕರಣಗಳ ಪತ್ತೆ ಕುರಿತು ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ನೇತೃತ್ವದಲ್ಲಿ ನಗರಠಾಣಾ ಪಿಐ ವೆಂಕಟಸ್ವಾಮಿ, ಸಿಬ್ಬಂದಿ ನರಸಪ್ಪ, ವಿಜಯಕುಮಾರ್, ಪ್ರಕಾಶ ಬೆಂಕಿ ಇವರನ್ನೊಳಗೊಂಡ ತಂಡವನ್ನು ರಚನೆ ಮಾಡಿ ಪ್ರಕರಣಗಳ ಕಡತ ಪರಿಶೀಲಿಸಿ, 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.