ADVERTISEMENT

Kanakagiri Garudotsava | ಕನಕಗಿರಿ: ದೀವಟಗಿ ಬೆಳಕಿನಲ್ಲಿ ಗರುಡೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2025, 6:12 IST
Last Updated 20 ಮಾರ್ಚ್ 2025, 6:12 IST
<div class="paragraphs"><p>ಗರುಡೋತ್ಸವ</p></div>

ಗರುಡೋತ್ಸವ

   

ಕನಕಗಿರಿ (ಕೊಪ್ಪಳ ಜಿಲ್ಲೆ): ರಾಜ್ಯದಲ್ಲಿಯೇ ತೀರ ವಿಶಿಷ್ಟತೆಯಿಂದ ಕೂಡಿರುವ ಗರುಡೋತ್ಸವ (ಕಲ್ಯಾಣೋತ್ಸವ) ಕಾರ್ಯಕ್ರಮ ಗುರುವಾರ ನಸುಕಿನ ಜಾವ ಇಲ್ಲಿ ವಿಜೃಂಭಣೆಯಿಂದ ನಡೆಯಿತು.

ಇಲ್ಲಿನ ಕನಕಾಚಲಪತಿ ಮಹಾ ರಥೋತ್ಸವದ ಹಿಂದಿನ ದಿನ ನಡೆಯುವ ಈ ಉತ್ಸವದ ವೀಕ್ಷಣೆಗೆ ರಾಜಬೀದಿಯಲ್ಲಿ ಜನಸಾಗರವೇ ಹರಿದು ಬಂದಿತ್ತು. ದೇವಸ್ಥಾನದ ಪ್ರಾಂಗಣ, ಆವರಣ, ಮನೆ, ಮಾಳಿಗೆ ಹಾಗೂ ರಾಜಬೀದಿಯ ಎರಡೂ ಬದಿಯಲ್ಲಿ ನಿಂತು ಗರುಡೋತ್ಸವದ ಮೆರವಣಿಗೆಯ ಸಂಭ್ರಮವನ್ನು ಭಕ್ತರು ಕಣ್ಣು ತುಂಬಿಕೊಂಡರು.

ADVERTISEMENT

ದೀವಟಗಿ, ಪಂಜಿನ ಬೆಳಕಿನಲ್ಲಿ ಕಂಗೊಳಿಸಿದ ಉತ್ಸವ ಗತ ವೈಭವವನ್ನು ಮೆಲುಕು ಹಾಕುವಂತೆ ಮಾಡಿತಲ್ಲದೇ ಜನಮನ ಸೂರೆಗೊಂಡಿತು. ಕನಕಾಚಲಪತಿ ಹಾಗೂ ಲಕ್ಷ್ಮೀ ಕಲ್ಯಾಣೋತ್ಸವ (ವಿವಾಹ) ನಸುಕಿನ ಜಾವ ನಡೆಯಿತು.

ಅರ್ಚಕರು ವೇದ, ಆಗಮ ಪಂಡಿತರ ವೇದ, ಮಂತ್ರ, ಘೋಷಣೆಗಳು ಮೊಳಗಿದವು‌ ಯುವಕರು, ಯುವತಿಯರು, ಮಕ್ಕಳು ಹೊಸ ಬಟ್ಟೆ ಧರಿಸಿ ಬಹು ಉತ್ಸಾಹದಿಂದ ಭಾಗವಹಿಸಿದ್ದರು. ಗರುಡೋತ್ಸವದ ಮುಂದೆ ಭಕ್ತರ ಕೈಯಲ್ಲಿದ್ದ ದೀವಟಗಿಯಲ್ಲಿ ಕರ್ಪೂರ, ಕೊಬ್ಬರಿ ತುಂಡುಗಳನ್ನು ಹಾಕಿ ದಹಿಸಿದರು.

ಸೂರ್ಯೋದಯಕ್ಕಿಂತ ಮುಂಚೆ ಹಳದಿ ಬಣ್ಣದ ಗರುಡ ವಾಹನದ ಮೇಲೆ ಲಕ್ಷ್ಮೀ, ನರಸಿಂಹ ದೇವರ ಮೆರವಣಿಗೆಯಲ್ಲಿ ನೆರೆದ ಸಾವಿರಾರು ಭಕ್ತರು ಗೋವಿಂದ, ಗೋವಿಂದ ಎನ್ನುತ್ತಾ ದೇವರ ಸ್ಮರಣೆ ಮಾಡಿ ಮುಂದಕ್ಕೆ ಸಾಗಿದರು.

ಕನಕಾಚಲಪತಿ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ರಾಜಬೀದಿ ಮೂಲಕ ಎದುರ ಹನುಮಪ್ಪ ದೇವಸ್ಥಾನ ತಲುಪಿ ಮತ್ತೆ ದೇವಸ್ಥಾನದ ವರೆಗೆ ನಡೆಯಿತು. ಭಕ್ತರು ಬೃಹತ್ ಪ್ರಮಾಣದ ಹೂವಿನ ಹಾರ ಹಾಕಿ ಧನ್ಯತೆ ಮರೆದರು.

ಮಹಿಳೆಯರಿಂದ ಕೋಲಾಟ, ಭಾಜಾ ಭಜಂತ್ರಿ, ತಾಷ ಮೇಳ ಹಾಗೂ ವಿವಿಧ ವಾದ್ಯಗಳ ಗರುಡೋತ್ಸವಕ್ಕೆ ಮೆರುಗು ತಂದವು. ಉದ್ಯಮಿ ಸತೀಶ ಸೂರ್ಯಬಾಬು ಅವರು ಮೆರವಣಿಗೆಗೆ ಬೆಳಕಿನ ವ್ಯವಸ್ಥೆ ಮಾಡಿಸಿದ್ದರು. ದೇಗುಲದಲ್ಲಿ ಗರುಡನ ಬುತ್ತಿ (ಪ್ರಸಾದ) ವಿತರಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಮಾಜಿ ಶಾಸಕರಾದ ಪ್ರತಾಪಗೌಡ ಪಾಟೀಲ, ಬಸವರಾಜ ದಢೇಸೂಗೂರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಹನುಮೇಶ ನಾಯಕ, ವಿದ್ಯಾವತಿ ತಂಗಡಗಿ, ವೀರೇಶ ಸಮಗಂಡಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ತಹಶೀಲ್ದಾರ್ ವಿಶ್ವನಾಥ ಮುರುಡಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಹುಸೇನಬೀ ಚಳ್ಳಮರದ, ಉಪಾಧ್ಯಕ್ಷ ಕಂಠಿರಂಗ ನಾಯಕ, ಕೃಷಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಿ. ಕನಕಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ ಕಲ್ಲಬಾಗಿಲಮಠ, ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ನಾಯಕ, ವಕ್ತಾರ ಶರಣಬಸಪ್ಪ ಭತ್ತದ, ಬಿಜೆಪಿ ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ, ಮಾಜಿ ಅಧ್ಯಕ್ಷ ಮಹಾಂತೇಶ ಸಜ್ಜನ್, ಅಧಿಕಾರಿಗಳು, ಹೈದರಾಬಾದ್, ಧಾರವಾಡ, ಹಾವೇರಿ, ರಾಯಚೂರು, ವಿಜಯನಗರ, ಕೊಪ್ಪಳ, ಹುಬ್ಬಳ್ಳಿ, ಬಳ್ಳಾರಿ, ದಾವಣಗೆರೆ, ಬೆಳಗಾವಿ, ಕಲಬುರಗಿ, ವಿಜಯಪುರ, ಬಾಗಲಕೋಟೆ ಇತರೆ ಜಿಲ್ಲೆಗಳ ಭಕ್ತರು ಭಾಗವಹಿಸಿದ್ದರು.

ರಾಜಬೀದಿಯಲ್ಲಿ ಭಕ್ತರು ಉಪಾಹಾರ ವ್ಯವಸ್ಥೆ ಮಾಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.