ಕೊಪ್ಪಳ: ಜಿಲ್ಲೆಯ ಕುಕನೂರು ತಾಲ್ಲೂಕಿನ ಭಾನಾಪುರ ಬಳಿ ಶನಿವಾರ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಐದೂ ಜನ ಒಂದೇ ಕುಟುಂಬದವರು. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 7 ವರ್ಷದ ಪುಟ್ಟರಾಜು ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಸ್ಕಾರ್ಪಿಯೊ ವಾಹನದಲ್ಲಿದ್ದ ಒಟ್ಟು ಒಂಬತ್ತು ಜನರ ಪೈಕಿ ಐದು ಜನ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪಲ್ಲವಿ (28), ಪುಟ್ಟರಾಜು (7), ಚಾಲಕ ಹರ್ಷವರ್ಧನ (35) ಹಾಗೂ ಭೂಮಿಕಾ (5) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
‘ಪುಟ್ಟರಾಜು ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿರುವ ಕಾರಣ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಜಿಲ್ಲಾಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಮೃತದೇಹ ಹೊರೆತೆಗೆಯಲು ಸಾಹಸ: ವಾಹನದಲ್ಲಿ ಸಿಲುಕಿದ್ದ ಐದು ಜನರ ಮೃತ ದೇಹಗಳನ್ನು ಹೊರ ತೆಗೆಯಲು ಪೊಲೀಸರು ಹರಸಾಹಸ ಮಾಡಿದರು.
ಕೆಲವರ ಕೈ ಹಾಗೂ ಕಾಲುಗಳು ವಾಹನಗಳ ಒಳಗೆ ಸಿಲುಕಿದ್ದವು. ಸುಮಾರು ಒಂದು ತಾಸು ಕಾರ್ಯಾಚರಣೆ ನಡೆಸಿದ ಬಳಿಕ ಮೃತದೇಹಗಳನ್ನು ಹೊರತಗೆಯಲಾಯಿತು. ಬಳಿಕ ಕುಕನೂರು ತಾಲ್ಲೂಕು ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದ್ದು, ಅಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ.
ಆಗಿದ್ದೇನು: ಕೊಪ್ಪಳದಲ್ಲಿ ಸದ್ಯ ಪೊಲೀಸ್ ಇಲಾಖೆಯ ಡಿಎಆರ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶರಣಪ್ಪ ಕೊಪ್ಪದ ಅವರ ಮೊಮ್ಮಗಳ (ಮಗನ ಮಗಳು) ಜನ್ಮದಿನದ ಕಾರ್ಯಕ್ರಮ ನಗರದ ಹೋಟೆಲ್ವೊಂದರಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ವ ಗ್ರಾಮ ಕುಕನೂರು ತಾಲ್ಲೂಕಿನ ಬಿನ್ನಾಳ ಗ್ರಾಮಕ್ಕೆ ವಾಪಸ್ ಹೋಗುವಾಗ ಅವಘಡ ಸಂಭವಿಸಿದೆ. ಘಟನೆ ಹೇಗಾಗಿದೆ ಎನ್ನುವುದರ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ಅಪಘಾತದಲ್ಲಿ ಕುಕನೂರು ತಾಲ್ಲೂಕಿನ ಬಿನ್ನಾಳ ಗ್ರಾಮದ ಗಿರಿಜವ್ವ ಕೊಪ್ಪದ (48), ದೇವಪ್ಪ ಕೊಪ್ಪದ (54), ಪಾರವ್ವ ಬೀರಪ್ಪ ಹಲಗೇರಿ (27), ಶಾಂತವ್ವ ಹನಮಂತಪ್ಪ ಗುಡ್ಲಾನೂರ (34) ಹಾಗೂ ಕಸ್ತೂರೆವ್ವ ನಾಗನಗೌಡ (20) ಮೃತಪಟ್ಟಿದ್ದಾರೆ.
ಪುಟ್ಟರಾಜ ಹಲಗೇರಿ (8), ಭೂಮಿಕಾ ಹಲಗೇರಿ (5), ಪಲ್ಲವಿ ಕರಿಗಾರ (20), ಬಸವರಾಜ ಹಲಗೇರಿ ಹಾಗೂ ಚಾಲಕ ಹರ್ಷವರ್ಧನ ಚನ್ನಳ್ಳಿ ಗಾಯಗೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.