
ಕೊಪ್ಪಳ: ಇಲ್ಲಿ ನಡೆಯುತ್ತಿರುವ ಬಲ್ಡೋಟ ಕಾರ್ಖಾನೆ ತೊಲಗಿಸಿ ಧರಣಿ 112 ದಿನ ಪೂರ್ಣಗೊಳಿಸಿದೆ.
ಹೋರಾಟವನ್ನು ಬೆಂಬಲಿಸಿದ ರಾಜ್ಯ ಕಟ್ಟಡ ಕಾರ್ಮಿಕರ ಕೇಂದ್ರ ಸಂಘ ಕೆಎಸ್ಸಿಡಬ್ಲ್ಯುಸಿಯುದ ರಾಜ್ಯ ಉಪಾಧ್ಯಕ್ಷ ಶಂಕರ ಕಟ್ಟಿಸಂಗಾವಿ ಮಾತನಾಡಿ, ‘ದೊಡ್ಡ ಮಟ್ಟದಲ್ಲಿ ವಿಸ್ತರಣೆ ಬಯಸಿದ ಬಲ್ಡೋಟ ಕಾರ್ಖಾನೆಯು, 2011ರಿಂದ ತಾನು ಮಾಡಿರುವ ಮಾಲಿನ್ಯದ ಕುರಿತು ಬಾಯಿ ಬಿಡುವುದಿಲ್ಲ. ಕೊಪ್ಪಳದ ಜನ ಈಗಾಗಲೇ ವಿಷಾನಿಲ ಉಸಿರಾಡುತ್ತಿದ್ದಾರೆ. ಇಲ್ಲಿ ಕಾಣುವ ಗಿಡಮರಗಳು ಹೊಗೆಯಿಂದ ಕಪ್ಪಾಗಿ ಹೋಗಿವೆ. ಇನ್ನು ದೂಳು ಮನುಷ್ಯರ ದೇಹದೊಳಗೆ ಎಷ್ಟು ಮೆತ್ತಿರಬಹುದು’ ಎಂದು ಹೇಳಿದರು.
‘ಕಾರ್ಖಾನೆ ಮಾಲಿನ್ಯ ಕಾರಣದಿಂದ ರೀಯಲ್ ಎಸ್ಟೇಟ್ ಉದ್ಯಮ ನೆಲಕಚ್ಚಿದೆ. ಕಟ್ಟಡ, ಸಮುಚ್ಚಯ ನಿರ್ಮಾಣ ಕಾರ್ಯ ನಿಂತುಹೋಗಿದೆ. ಈ ಕ್ಷೇತ್ರದ ಕಟ್ಟಡ ಕಾರ್ಮಿಕರು ಕೆಲಸವಿಲ್ಲದೆ ಕುಟುಂಬ ನಡೆಸಲು ಒದ್ದಾಡುತ್ತಿದ್ದಾರೆ’ ಎಂದು ಹೇಳಿದರು.
ರಾಜ್ಯ ಕಾರ್ಯದರ್ಶಿ ಲಲಿತಾ ಎಸ್. ಮಾತನಾಡಿ, ‘ಸರ್ಕಾರ ಕಣ್ಣು ಮುಚ್ಚಿ ಕೂತು ಕಾರ್ಖಾನೆಯನ್ನು ಆಟವಾಡಲು ಬಿಟ್ಟಂತಿದೆ. ಜನರು ಸುಮ್ಮನಿದ್ದರೆ ಜೀವ ಹೋದರೂ ಸರ್ಕಾರಗಳು ಗಮನಿಸುತ್ತಿಲ್ಲ. ಹೀಗಿರುವಾಗ ಬೃಹತ್ ಹೋರಾಟ ರೂಪಿಸಿದರೆ ಮಾತ್ರ ಈ ಕಾರ್ಖಾನೆ ಓಡಿಸಬಹುದು’ ಎಂದರು.
ಧರಣಿ ನೇತೃತ್ವವಹಿಸಿದ್ದ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ‘ಕೊಪ್ಪಳ ಭಾಗ್ಯನಗರ ಬಂದ್ ಹೋರಾಟ ಯಶಸ್ವಿಯಾಗುವಂತೆ ಪ್ರತಿಯೊಬ್ಬ ನಾಗರಿಕರು ನೋಡಿಕೊಳ್ಳಬೇಕು’ ಎಂದು ವಿನಂತಿಸಿದರು.
ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕ ಮಹಾದೇವಪ್ಪ ಎಸ್.ಮಾವಿನಮಡು, ಜಂಟಿ ವೇದಿಕೆ ಸಂಚಾಲಕ ಮಲ್ಲಿಕಾರ್ಜುನ ಬಿ.ಗೋನಾಳ, ಡಿ.ಎಂ.ಬಡಿಗೇರ, ಶಂಭುಲಿಂಗಪ್ಪ ಹರಗೇರಿ, ಎಸ್.ಬಿ.ರಾಜೂರು, ಶರಣು ಶೆಟ್ಟರ, ಶರಣು ಪಾಟೀಲ, ಸುಭಾನ್ ಸಾಬ್ ನೀರಲಗಿ, ವೆಂಕಟೇಶ ದೊಡ್ಡಮನಿ, ಹುಸೇನಸಾಬ್ ನದಾಫ್, ಬಿ.ಆರ್. ಹೊಂಬಾಳಿಮಠ, ನಾಗರಾಜ ಕುಷ್ಟಗಿ, ಯಮನೂರಪ್ಪ ಹಾಲಳ್ಳಿ ಬಸಾಪುರ, ಶಿವಪ್ಪ ಬನಪ್ಪನವರ, ನಟರಾಜ ಸವಡಿ, ಬಸವರಾಜಪ್ಪ ಶೆಟ್ಟರ, ಬಸವರಾಜ ಅಂಗಡಿ, ಶಿವಪ್ಪ ಜಲ್ಲಿ, ಮಖ್ಬುಲ್ ರಾಯಚೂರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.