ADVERTISEMENT

ಕನಕಗಿರಿ: ಲಕ್ಷ್ಮೀದೇವಿ ರಥೋತ್ಸವ, ತೇರು ಎಳೆದ ಮಹಿಳೆಯರು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2023, 14:07 IST
Last Updated 16 ಫೆಬ್ರುವರಿ 2023, 14:07 IST
ಕನಕಗಿರಿ ಸಮೀಪದ ವಡಕಿ ಗ್ರಾಮದ ಲಕ್ಷ್ಮೀದೇವಿಯ ರಥೋತ್ಸವ ಗುರುವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಕನಕಗಿರಿ ಸಮೀಪದ ವಡಕಿ ಗ್ರಾಮದ ಲಕ್ಷ್ಮೀದೇವಿಯ ರಥೋತ್ಸವ ಗುರುವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.   

ಕನಕಗಿರಿ (ಕೊಪ್ಪಳ ಜಿಲ್ಲೆ): ಜಿಲ್ಲೆಯ ಕನಕಗಿರಿ ಸಮೀಪದ ವಡಕಿ ಗ್ರಾಮದ ಲಕ್ಷ್ಮೀದೇವಿಯ ರಥೋತ್ಸವ ಗುರುವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಮಹಿಳೆಯರೇ ಇಲ್ಲಿ ತೇರು ಎಳೆಯುವುದು ಇಲ್ಲಿನ ವಿಶೇಷ.

ಬೆಳಿಗ್ಗೆ ದೇಗುಲದಲ್ಲಿ ಕುಂಕುಮಾರ್ಚನೆ, ಅಭಿಷೇಕ, ಎಲೆ ಚಟ್ಟಿ ಕಟ್ಟುವುದು, ಗಂಡಾರುತಿ ಇತರೆ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ, ಭಕ್ತಿಯಿಂದ ನಡೆದವು.

ಅನ್ನ ಬಲಿ ನೀಡುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ವಡಕಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಮಹಿಳೆಯರು ರಥವನ್ನು ದೇವಸ್ಥಾನದಿಂದ ಪಾದಗಟ್ಟೆವರೆಗೆ ಮರಳಿ ದೇವಸ್ಥಾನದ ತನಕ ಎಳೆದು ಸಂಭ್ರಮಿಸಿದರು. ಈ ಸಮಯದಲ್ಲಿ ಯುವಕರು ಕೇಕೆ ಹಾಕಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

ADVERTISEMENT

ಕನಕಗಿರಿ, ನವಲಿ, ಚಿರ್ಚನಗುಡ್ಡ, ಚಿರ್ಚನಗುಡ್ಡ ತಾಂಡ, ಆಕಳಕುಂಪಿ, ಡಂಕನಕಲ್, ಕಾರಟಗಿ, ಕಾಟಾಪುರ, ಕಲಕೇರಿ, ಹಟ್ಟಿ ಸೇರಿದಂತೆ ಅನೇಕ ಗ್ರಾಮಗಳ ಭಕ್ತರು ಭಾಗವಹಿಸಿದ್ದರು. ಹೂ, ಉತ್ತುತ್ತಿ, ಬಾಳೆ ಹಣ್ಣು ತೇರಿನ ಕಡೆಗೆ ಎಸೆದು ಧನ್ಯತೆ ಮೆರೆದರು. ಬಾಜಾ ಭಜಂತ್ರಿ, ಲಕ್ಷ್ಮೀದೇವಿಯ ಸ್ಮರಣೆ ರಥೋತ್ಸವಕ್ಕೆ ಕಳೆ ತಂದಿತು. ಪ್ರತಿ ವರ್ಷವೂ ಗ್ರಾಮದಲ್ಲಿ ಎರಡು ರಥಗಳನ್ನು ಎಳೆಯುವುದು ಇಲ್ಲಿನ ಸಂಪ್ರದಾಯವಾಗಿದೆ, ಬುಧವಾರ ಗಂಡಸರು, ಗುರುವಾರ ಮಹಿಳೆಯರು ರಥ ಎಳೆಯುವುದು ಇಲ್ಲಿನ ಪದ್ಧತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.