
ಯಲಬುರ್ಗಾ ಪಟ್ಟಣದ ವಕೀಲರ ಸಂಘದಲ್ಲಿ ನಡೆದ ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆ ಪ್ರಯುಕ್ತ ಕಾನೂನು ಅರಿವು ಕಾರ್ಯಕ್ರಮಕ್ಕೆ ಹಿರಿಯ ಶ್ರೇಣಿ ನ್ಯಾಯಾಧೀಶ ರಂಗನಾಥ ಜೆ. ಚಾಲನೆ ನೀಡಿದರು
ಯಲಬುರ್ಗಾ: ‘ಜನಸಾಮಾನ್ಯರು ದೈನಂದಿನ ಜೀವನದಲ್ಲಿ ನೆಮ್ಮದಿ ಹಾಗೂ ಆತಂಕರಹಿತವಾದ ಬದುಕು ಕಟ್ಟಿಕೊಳ್ಳುವಲ್ಲಿ ಕಾನೂನಿನ ಜ್ಞಾನ ಅವಶ್ಯಕವಾಗಿದೆ. ವಿವಿಧ ವ್ಯವಹರಣೆಗಳು ಸುಗಮವಾಗಿ ನಿರ್ವಹಿಸುವ ಮಟ್ಟಿಗೆ ಕಾನೂನಿನ ಅರಿವು ಪಡೆದುಕೊಳ್ಳುವುದು ಮುಖ್ಯ’ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ರಂಗನಾಥ ಜೆ. ಹೇಳಿದರು.
ಪಟ್ಟಣದ ವಕೀಲರ ಸಂಘದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಜನಸಾಮಾನ್ಯರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದಲೇ 1987ರಲ್ಲಿ ಕಾನೂನು ಸೇವಾ ಪ್ರಾಧಿಕಾರ ರಚನೆ ಮಾಡಲಾಗಿತ್ತು. ಲೋಕ ಅದಾಲತ್ಗಳ ಮುಖಾಂತರ ರಾಜಿ, ಸಂಧಾನ ಮಾಡುವುದು, ತ್ವರಿತ ಮತ್ತು ನ್ಯಾಯಸಮ್ಮತ ನಿರ್ಣಯ ಕೈಗೊಳ್ಳಲು ರಾಜಿ ಸೂತ್ರ ಹೆಚ್ಚು ಪರಿಣಾಮಕಾರಿಯಾಗುವುದರಿಂದ ಈ ಪರಿಕಲ್ಪನೆಯ ಅನುಷ್ಠಾನಕ್ಕೆ ಸೇವಾ ಸಮಿತಿ ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸುಭಾಸ್ ಹೊಂಬಳ ಮಾತನಾಡಿ, ‘ತಾಲ್ಲೂಕಿನಲ್ಲಿ ಸುಮಾರು ವರ್ಷಗಳಿಂದಲೂ ಕಾನೂನು ಸೇವಾ ಸಮಿತಿ ಅಡಿಯಲ್ಲಿ ಸಾಕಷ್ಟು ಕಾನೂನು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಉಪನ್ಯಾಸ, ಜಾಥಾಗಳ ಮೂಲಕ ಕಾನೂನಿನ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಪರಿಣಾಮಕಾರಿಯಾದ ಕೆಲಸದ ಮೂಲಕ ಸಾರ್ಥಕ ಸೇವೆಯನ್ನು ಜನತೆಗೆ ಒದಗಿಸುತ್ತಿದೆ’ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯದರ್ಶಿ ಮಹಾಂತೇಶ ಟಿ, ‘ವಿವಿಧ ಗ್ರಾಮಗಳಿಗೆ ಕಾನೂನು ರಥ ಸಂಚಾರದ ಮೂಲಕ ವಿವಿಧ ಕಾನೂನಿನ ಬಗ್ಗೆ ಮಾಹಿತಿ ನೀಡಿದ ಪ್ರಾಧಿಕಾರದ ಸೇವೆ ಶ್ಲಾಘನೀಯ’ ಎಂದರು.
ಹೆಚ್ಚುವರಿ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ, ಮಾಜಿ ಅಧ್ಯಕ್ಷ ಎಸ್.ಎನ್.ಶ್ಯಾಗೋಟಿ, ಹಿರಿಯ ವಕೀಲರಾದ ಬಿ.ಎಂ.ಶಿರೂರ, ರವಿ ಹುಣಸಿಮರ, ಸಂಘದ ಕಾರ್ಯದರ್ಶಿ ಮಹಾಂತೇಶ ಈಟಿ, ಹಸನ್ಸಾಬ ನದಾಫ್, ಸಾವಿತ್ರಿ ಗೊಲ್ಲರ್, ಸಂಗಮೇಶ ವಾದಿ, ಎಸ್.ಎಸ್.ಇಂಗಳದಾಳ, ಎಚ್.ಎಚ್.ಹಿರೇಮನಿ ಸೇರಿ ಅನೇಕರು ಮಾತನಾಡಿದರು. ಎ.ಎಂ.ಪಾಟೀಲ ನಿರೂಪಿಸಿದರು. ಸಾಕಷ್ಟು ಸಂಖ್ಯೆಯಲ್ಲಿ ವಕೀಲರು ಹಾಗೂ ಕೋರ್ಟಿನ ಸಿಬ್ಬಂದಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.