ADVERTISEMENT

ಕನಕಗಿರಿ ಕ್ಷೇತ್ರದ ಶಾಸಕರಿದ್ದ ಕಾರು ಡಿಕ್ಕಿ; ವೃದ್ದೆ ಸಾವು

​ಪ್ರಜಾವಾಣಿ ವಾರ್ತೆ
Published 11 ಜನವರಿ 2023, 13:58 IST
Last Updated 11 ಜನವರಿ 2023, 13:58 IST
ಬಸವರಾಜ ದಢೇಸೂಗೂರು
ಬಸವರಾಜ ದಢೇಸೂಗೂರು   

ಕಾರಟಗಿ (ಕೊಪ್ಪಳ): ಜಿಲ್ಲೆಯ ಕನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ದಢೇಸೂಗೂರ ಇದ್ದ ಕಾರು ಡಿಕ್ಕಿ ಹೊಡೆದು ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ.

ಕಾರಟಗಿ ತಾಲ್ಲೂಕಿನ ಮೈಲಾಪುರ ತಿರುವು ಬಳಿ ಮಂಗಳವಾರ ಘಟನೆ ನಡೆದಿದ್ದು ಮರಿಯಮ್ಮ ಭೀಮರಾಯ ನಾಯಕ (55) ಮೃತಪಟ್ಟವರು.

‘ಚಳ್ಳೂರ ನಿವಾಸಿ ಮರಿಯಮ್ಮ ಮೈಲಾಪುರದ ಮಗಳ ಮನೆಗೆ ಬಂದು ವಾಪಸ್‌ ಹೋಗಲು ಬಸ್‌ಶೆಲ್ಟರ್‌ ಮುಂದೆ ನಿಂತಿದ್ದರು. ಕಾರು ಡಿಕ್ಕಿ ಹೊಡೆದ ರಭಸಕ್ಕೆ ವೃದ್ಧೆ ತೀವ್ರ ರಕ್ತಸ್ರಾವದಿಂದ ಮೂರ್ಛೆ ಹೋಗಿದ್ದರು. ಶಾಸಕರಿದ್ದ ಕಾರಿನಲ್ಲಿಯೇ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಗಂಗಾವತಿ ಆಸ್ಪತ್ರೆಗೆ ಕಳುಹಿಸಲಾಯಿತು. ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಳು’ ಎಂದು ಕಾರಟಗಿ ಪೊಲೀಸ್‌ ಠಾಣೆಯ ಇನ್‌ಸ್ಟೆಕ್ಟರ್‌ ಸಿದ್ರಾಮಯ್ಯ ಬಿ. ಎಂ. ತಿಳಿಸಿದರು. ಈ ಕುರಿತು ವೃದ್ಧೆಯ ಅಳಿಯ ಈರಣ್ಣ ಮೈಲಾಪುರ ದೂರು ನೀಡಿದ್ದು ಶಾಸಕರ ಕಾರಿನ ಸಂಖ್ಯೆಯನ್ನು ಮಾತ್ರ ಉಲ್ಲೇಖಿಸಿದ್ದಾರೆ.

ADVERTISEMENT

ಘಟನೆ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ದಢೇಸೂಗೂರು ‘ನಾಯಿ ಅಡ್ಡ ಬಂದು ಗಾಯಗೊಂಡಿದ್ದ ವೃದ್ಧೆಯನ್ನು ನನ್ನ ಕಾರಿನಲ್ಲಿಯೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವೃದ್ಧೆಯ ಸಾವು ನನ್ನ ಕಾರು ಅಪಘಾತದಿಂದ ಸಂಭವಿಸಿದ್ದಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.