
ಗಂಗಾವತಿ: ಇಲ್ಲಿನ ಶರಣಬಸವೇಶ್ವರ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗುರುವಾರ ನಾದಯೋಗಿ ಸಂಗೀತ ಹಾಗೂ ಸಾಂಸ್ಕೃತಿಕ ಸಂಸ್ಥೆ(ರಿ) ವತಿಯಿಂದ ‘ನಾದಯೋಗಿ ಜನಪದ ಸಂಗೀತ ಸಂಭ್ರಮ’ ಕಾರ್ಯಕ್ರಮ ಜರುಗಿತು.
ಕೊಪ್ಪಳ ಜಿಲ್ಲಾ ಜನಪದ ಅಕಾಡೆಮಿಯ ಸದಸ್ಯ ಚಂದ್ರಶೇಖರ ಲಿಂಗದಳ್ಳಿ ಅವರು ಹಾರ್ಮೋನಿಯಂ ನುಡಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿ, ‘ಈ ಆಧುನಿಕ ಜಗತ್ತಿನಲ್ಲಿ ಸಂಗೀತದ ಜೊತೆಗೆ ಮೂಲ ಜನಪದ ನಶಿಸಿ ಹೋಗುತ್ತಿದೆ. ಯುವ ಜನತೆ ಅಶ್ಲೀಲ ಜನಪದ ಹಾಡುಗಳಿಗೆ ಮಾರುಹೋಗದೇ ಶಾಸ್ತ್ರಬದ್ದವಾದ ಸಂಗೀತ ಕಲಿಕೆಗೆ ಆದ್ಯತೆ ನೀಡಬೇಕು’ ಎಂದರು.
‘ಗಂಗಾವತಿ ನಗರದಲ್ಲಿ ಸಂಗೀತಾ ಶರಣಪ್ಪ ಅವರು ಸಂಗೀತ ಶಾಲೆ ಆರಂಭಿಸಿ, ಮಕ್ಕಳಿಗೆ ಸುಸಂಸ್ಕೃತದ ಸಂಗೀತ ಹೇಳಿಕೊಡುತ್ತಿದ್ದಾರೆ. ಪಾಲಕರು ತಮ್ಮ ಮಕ್ಕಳಿಗೆ ಸಂಗೀತ ಕಲಿಕೆಗೆ ಪ್ರೋತ್ಸಾಹಿಸಿ, ಸಂಗೀತ ಉಳಿಕೆಗೆ ಆದ್ಯತೆ ನೀಡಬೇಕು’ ಎಂದರು.
ನಗರಸಭೆ ಮಾಜಿ ಸದಸ್ಯೆ ಪಾರ್ವತಮ್ಮ ದುರ್ಗೇಶ ದೊಡ್ಡಮನಿ ಮಾತನಾಡಿ, ‘ಇತ್ತೀಚೆಗೆ ನಿಜವಾದ ಸಂಗೀತ ಕಲಾವಿದರಿಗೆ ಬೆಲೆ ಇಲ್ಲದಂತಾಗಿದೆ. ಮೊದಲಿನ ಸಂಗೀತಕ್ಕೂ, ಈಗಿನ ಸಂಗೀತಕ್ಕೂ ತುಂಬ ವ್ಯತ್ಯಾಸವಿದೆ. ಹಳ್ಳಿಯ ಸೊಗಡು, ರೈತರ ಭಾವನೆ, ಪ್ರೀತಿ, ವಿಶ್ವಾಸ ಕುರಿತು ಸಾಹಿತ್ಯ ರಚನೆಯಾಗುತ್ತಿತ್ತು. ಇಂದಿನ ಸಾಹಿತ್ಯ ಕೇಳಿದರೆ ಮನಸ್ಸಿಗೆ ಬಹಳ ಬೇಸರವಾಗುತ್ತದೆ’ ಎಂದರು.
ಗಾಯಕ ಹನುಮಂತಪ್ಪ, ಶಿವಣ್ಣ ನೀಲಕಮಲ್, ಸಿದ್ದಪ್ಪ ಅಧಿಕಾರಿ, ಪಕೀರಪ್ಪ ಅರಿಕೇರಿ, ಮಂಜುನಾಥ ಕನಕಗಿರಿ, ನವೀನಕುಮಾರ, ಮಲ್ಲಪ್ಪ ಹಿರೇನಂದಿಹಾಳ, ಅಮೀದ್ ಮುಲ್ಲಾ, ಯಮನೂರ ಹತ್ತಿಮರದ, ಬಸವರಾಜ ಹಡಪದ, ರಾಮಚಂದ್ರಪ್ಪ ಉಪ್ಪಾರ, ಮಾರುತಿ ಬಿನ್ನಾಳ ದೊಡ್ಡಮನಿ, ಪುಟ್ಟರಾಜ ಕೊಪ್ಪಳ, ಮಲ್ಲೇಶಪ್ಪ ವಡ್ಡಟ್ಟಿ, ಅಲ್ಲಾಭಕ್ಷ ಭೀಮನೂರ, ನರಸಿಂಹ ದರೋಜಿ, ಸಂಗೀತ ಶರಣಪ್ಪ, ಗವೀಶ ನರೇಗಲ್, ಬಸವರಾಜ ಅರಸಿನಕೇರಿ, ಸೃಷ್ಟಿ, ನಯನ, ಚಾಂದಿನಿ, ಕೈಲಾಶ, ಧನ್ಯಶ್ರೀ ಸೇರಿ ಕಲಾವಿದರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.