ADVERTISEMENT

ಕೊಪ್ಪಳ| ಎರಡು ವರ್ಷಗಳಲ್ಲಿ ವನವಾಸ ಅಂತ್ಯ: ನಿಖಿಲ್‌ ಕುಮಾರಸ್ವಾಮಿ

ಜನರೊಂದಿಗೆ ಜನತಾದಳ ಕಾರ್ಯಕರ್ತರ ಸಮಾವೇಶ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 6:28 IST
Last Updated 2 ಮಾರ್ಚ್ 2026, 6:28 IST
ಕೊಪ್ಪಳದಲ್ಲಿ ಭಾನುವಾರ ನಡೆದ ಜನರೊಂದಿಗೆ ಜನತಾದಳ ಕಾರ್ಯಕರ್ತರ ಸಮಾವೇಶದ ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಡೆದ ಮೆರವಣಿಗೆಯಲ್ಲಿ ಸಾಗಿಬಂದ ಜೆಡಿಎಸ್ ನಾಯಕರು
ಕೊಪ್ಪಳದಲ್ಲಿ ಭಾನುವಾರ ನಡೆದ ಜನರೊಂದಿಗೆ ಜನತಾದಳ ಕಾರ್ಯಕರ್ತರ ಸಮಾವೇಶದ ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಡೆದ ಮೆರವಣಿಗೆಯಲ್ಲಿ ಸಾಗಿಬಂದ ಜೆಡಿಎಸ್ ನಾಯಕರು   

ಕೊಪ್ಪಳ: ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಿ.ವಿ. ಚಂದ್ರಶೇಖರ್‌ ಶಾಸಕರಾಗಬೇಕು ಎಂದು ಸಾಕಷ್ಟು ಕಾರ್ಯಕರ್ತರು ಆಸೆ ಪಡುತ್ತಿದ್ದಾರೆ. ಇದಕ್ಕಾಗಿ ಚಂದ್ರಶೇಖರ್‌, ಅವರ ಕುಟುಂಬದವರು ಹಾಗೂ ಕಾರ್ಯಕರ್ತರು ಇಷ್ಟು ವರ್ಷಗಳ ಕಾಲ ವನವಾಸ ಅನುಭವಿಸಿದ್ದು, ಅದು ಮುಂದಿನ ಎರಡು ವರ್ಷಗಳಲ್ಲಿ ಅಂತ್ಯವಾಗಲಿದೆ’ ಎಂದು ಜೆಡಿಎಸ್‌ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭರವಸೆ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಜೆಡಿಎಸ್‌ ಹಮ್ಮಿಕೊಂಡಿದ್ದ ಜನರೊಂದಿಗೆ ಜನತಾದಳ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ‘ಜೆಡಿಎಸ್‌ ಬೆಳ್ಳಿಹಬ್ಬ ಆಚರಿಸುತ್ತಿದ್ದು, ಈ ಅವಧಿಯಲ್ಲಿ ನಮ್ಮ ಪಕ್ಷದಲ್ಲಿದ್ದವರು ಶಾಸಕರು, ಸಚಿವರು, ಉಪಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿ ಆಗಿದ್ದಾರೆ. ಅದಕ್ಕೆಲ್ಲ ಕಾರ್ಯಕರ್ತರ ಶ್ರಮ ಕಾರಣ. ನಮ್ಮ ಪಕ್ಷ ಯಾವುದೇ ಜಾತಿ, ಧರ್ಮಗಳಿಗೆ ಅಂಟಿಕೊಂಡಿಲ್ಲ. ಸಿವಿಸಿ ಮುಂದೆ ಶಾಸಕರಾಗಲು ನಾನೇ ಬಂದು ಬೆಂಬಲ ಕೊಡುವೆ’ ಎಂದು ಹೇಳಿದರು.

‘ಕೊಪ್ಪಳ ಜಿಲ್ಲೆಯ ಜನಪ್ರತಿನಿಧಿಗಳಿಗೆ ಜನರ ನೋವಿನ ಬಗ್ಗೆ ಕಾಳಜಿಯಿಲ್ಲ. ಕೇಂದ್ರ ಸಚಿವರಾದ ನಮ್ಮ ತಂದೆ ಎಚ್‌.ಡಿ. ಕುಮಾರಸ್ವಾಮಿ ಅವರ ಹೆಸರನ್ನು ಮುಂದಿಟ್ಟು ಜಿಲ್ಲೆಯ ಕೈಗಾರಿಕೆಗಳ ವಿಷಯದಲ್ಲಿ ಜನರ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ. ಆದರೆ ರಾಜ್ಯ ಸರ್ಕಾರ ರೈತರ ಬದುಕನ್ನು ಬೀದಿಗೆ ತಂದು ನಿಲ್ಲಿಸಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದೆ. ಚರಂಡಿ ಸ್ವಚ್ಛಗೊಳಿಸಲು, ನೀರು ಒದಗಿಸಲು ರಾಜ್ಯ ಸರ್ಕಾರ ಅನುದಾನ ಕೊಡುತ್ತಿಲ್ಲ ಎಂದು ಕಾಂಗ್ರೆಸ್‌ ಶಾಸಕರೇ ಹೇಳಿಕೊಂಡಿದ್ದಾರೆ. ಇದು ರಾಜ್ಯ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

ಪಕ್ಷದ ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ್ರು, ತಾಲ್ಲೂಕು ಗೌರವಾಧ್ಯಕ್ಷ ಈಶಪ್ಪ ಮಾದನೂರ, ಜಿಲ್ಲಾ ಗೌರವಾಧ್ಯಕ್ಷ ದೇವಪ್ಪ ಕಟ್ಟಿಮನಿ, ಜಿಲ್ಲಾ ಸಂಸ್ಕೃತಿ ವಿಭಾಗದ ಅಧ್ಯಕ್ಷ ಮಂಜುನಾಥ್ ಸೊರಟೂರ, ರಾಜ್ಯ ಮುಖಂಡ ಶರಣಪ್ಪ ಕುಂಬಾರ, ನಗರ ಘಟಕದ ಅಧ್ಯಕ್ಷ ಸೋಮನಗೌಡ ಹೊಗರನಾಳ, ಪಕ್ಷದ ಪ್ರಮುಖರಾದ ರಾಜು ನಾಯಕ, ಮೂರ್ತೆಪ್ಪಗೌಡ, ಕರಿಯಪ್ಪ ಹಾಲವರ್ತಿ, ರಮೇಶ ಡಂಬ್ರಳ್ಳಿ, ಬಸವರಾಜ, ಮೃತ್ಯುಂಜಯ ಬಾದಾಮಿ, ರಶ್ಮಿ ಚಳಗೇರಿ, ರತ್ನಮ್ಮ ಹಿರೇಮಠ, ಪಕ್ಷದ ವಿಜಯನಗರ ಜಿಲ್ಲಾಧ್ಯಕ್ಷ ಶಿವಶಂಕರ್‌ ಮುನಿರಾಜು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನ
ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಕಿತ್ತು ಹಾಕಿದರೆ ಮಾತ್ರ ಜಿಲ್ಲೆಯಲ್ಲಿ ಜನರ ಬದುಕು ದುರ್ಬರಗೊಳಿಸಿದ ಕಾರ್ಖಾನೆಗಳನ್ನು ತೆಗೆದು ಹಾಕಲು ಸಾಧ್ಯ. ಕೊಪ್ಪಳದ ಶಾಸಕ ಸಂಸದರು ಕಾರ್ಖಾನೆಯಲ್ಲಿ ಮುಳುಗಿ ಹೋಗಿದ್ದಾರೆ.
ವೆಂಕಟರಾವ್‌ ನಾಡಗೌಡ ಮಾಜಿ ಸಚಿವ
ಕೊಪ್ಪಳ ಜನರ ಕನಸು ಸಿವಿಸಿ ಮುಂದಿನ ಶಾಸಕರಾಗಬೇಕು ಎನ್ನುವುದಾಗಿದೆ. ಅವರು ಶಾಸಕರಾದರೆ ಮಾತ್ರ ಕ್ಷೇತ್ರದ ಜನರ ಆಸೆಗಳು ಈಡೇರುತ್ತವೆ.
ನೇಮಿರಾಜ ನಾಯ್ಕ ಶಾಸಕ
ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಕೊನೆಯಲ್ಲಿ ಜೆಡಿಎಸ್‌ನಿಂದ ಟಿಕೆಟ್‌ ಸಿಕ್ಕರೂ 45 ಸಾವಿರ ಮತಗಳನ್ನು ಸಿವಿಸಿ ಪಡೆದಿದ್ದಾರೆ. ಜೆಡಿಎಸ್‌ ಬಿಜೆಪಿ ಜೊತೆ ಮೈತ್ರಿಯಿದ್ದರೂ ನಮ್ಮ ಪಕ್ಷ ಹಾಗೂ ಚಂದ್ರಶೇಖರ್‌ ಅಲ್ಪಸಂಖ್ಯಾತರಿಗೆ ಎಂದೂ ಅನ್ಯಾಯ ಮಾಡಿಲ್ಲ.
ಸುರೇಶ ಭೂಮರಡ್ಡಿ ಜೆಡಿಎಸ್‌ ಜಿಲ್ಲಾಧ್ಯಕ್ಷ

ಕಣ್ಣು ಕಿವಿ ಇಲ್ಲದ ರಾಜ್ಯ ಸರ್ಕಾರ: ಸಿವಿಸಿ

ಕೊಪ್ಪಳ: ಶಾಸಕನಾಗಬೇಕು ಎನ್ನುವ ಆಸೆಯಿಂದ ಹಲವು ಬಾರಿ ಪ್ರಯತ್ನಿಸಿದರೂ ಯಶಸ್ಸು ಸಿಕ್ಕಿಲ್ಲ. ಇದಕ್ಕಾಗಿ 12 ವರ್ಷಗಳಿಂದ ವನವಾಸ ಅನುಭವಿಸಿದ್ದೇನೆ. ಇನ್ನೆರೆಡು ವರ್ಷಗಳಲ್ಲಿ ವನವಾಸ ಅಂತ್ಯವಾಗಲಿದೆ. ಕಣ್ಣು ಕಿವಿ ಇಲ್ಲದ ಸತ್ತು ಹೋಗಿರುವ ರಾಜ್ಯ ಸರ್ಕಾರವನ್ನು ಕಿತ್ತು ಹಾಕಬೇಕು ಎಂದು ಜೆಡಿಎಸ್‌ ರಾಜ್ಯ ಕೋರ್‌ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್‌ ಆಗ್ರಹಿಸಿದರು. ‘ಇಷ್ಟು ವರ್ಷಗಳಿಂದ ನನ್ನಲ್ಲಿ ಅಧಿಕಾರವಿಲ್ಲದಿದ್ದರೂ ಜನರ ಸಂಪೂರ್ಣ ಬೆಂಬಲವಿದೆ. ಪಕ್ಷ ಜಿಲ್ಲೆಯಲ್ಲಿ ಹೆಮ್ಮೆರವಾಗಿ ಬೆಳೆಯುತ್ತಿದೆ. ಮಿಸ್ಡ್‌ ಕಾಲ್‌ ನೀಡುವ ಮೂಲಕ ಪಕ್ಷದ ಸದಸ್ಯತ್ವ ಅಭಿಯಾನ ಮಾಡಬೇಕು’ ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.