
ಕಾರಟಗಿ: ಪಟ್ಟಣದಲ್ಲಿ ವ್ಯಾಪಾರವನ್ನೇ ನೆಚ್ಚಿಕೊಂಡು ಆಗಮಿಸಿರುವ ರಾಜಸ್ತಾನ, ಗುಜರಾತ್ ಮೂಲದ ವ್ಯಾಪಾರಿಗಳಿಂದ ಸಂಭ್ರಮದ ಬಣ್ಣದಾಟ ಮಂಗಳವಾರ ನಡೆಯಿತು.
ಪಟ್ಟಣದಲ್ಲಿ ಯುಗಾದಿ ಕರಿಯ ದಿನ ಓಕಳಿ ಆಚರಿಸುವರು. ಆದರೆ ರಾಜಸ್ಥಾನ, ಗುಜರಾತ್ ಮೂಲದವರು ಹೋಳಿ ಹುಣ್ಣಿಮೆಯ ದಿನ ಬಣ್ಣದೋಕುಳಿ ಸಡಗರದಲ್ಲಿ ತೊಡಗುವ ವಾಡಿಕೆ ಇದೆ.
ತಮ್ಮೆಲ್ಲಾ ವ್ಯಾಪಾರ ವಹಿವಾಟು ಬಂದ್ ಮಾಡಿದ್ದ ರಾಜಸ್ಥಾನ, ಗುಜರಾತ್ ಮೂಲದವರು ತಮ್ಮವರ ನಿವಾಸಗಳಿಗೆ ತೆರಳಿ ಪರಸ್ಪರ ಬಣ್ಣ ಎರಚಿದರು. ಆತ್ಮೀಯರನ್ನು ತಮ್ಮ ಗುಂಪಿನೊಂದಿಗೆ ಸೇರಿಸಿಕೊಂಡರು. ಇವರ ಕುಟುಂಬದ ಮಹಿಳೆಯರು ನೆರೆಹೊರೆಯವರಿಗೆ ಬಣ್ಣ ಎರಚಿ ಸಂಭ್ರಮಿಸಿದರು.
ಬುಧವಾರ ರಾತ್ರಿ ಭವಾನಿ ಸಾ ಮಿಲ್ ಆವರಣದಲ್ಲಿ ಜಮಾವಣೆಗೊಂದಿದ್ದ ರಾಜಸ್ಥಾನ, ಗುಜರಾಥ್ ಮೂಲದವರು ಕಾಮದಹನ ಮಾಡಿ, ಸಂಗೀತ, ನೃತ್ಯ ಪ್ರದರ್ಶಿಸಿ ಸಂಭ್ರಮಿಸಿದರು.
ಬಣ್ಣದಾಟ ಮುಗಿದ ಬಳಿಕ ಎಲ್ವಿಟಿ ತಪೋವನದಲ್ಲಿ ಸಂಗೀತ, ನೃತ್ಯದ ಕಾರ್ಯಕ್ರಮ ನಡೆದು ಬಳಿಕ ಸಾಮೂಹಿಕ ಭೋಜನಕೂಟ ನಡೆಯಿತು. ಇವರೊಂದಿಗೆ ಸ್ಥಳೀಯ ಆತ್ಮೀಯರೂ ಪಾಲ್ಗೊಂಡಿದ್ದರು.
ಪ್ರಮುಖರಾದ ಪ್ರವೀಣ ರಾಜಪುರೋಹಿತ, ಸಾವಲರಾಮ್ ಪಟೇಲ್, ಸರ್ವಣ ಕುಮಾರ ನಗರ, ಕಿಶೋರ ಭಂಡಾರಿ, ಚೇಲಸಿಂಗ್ ರಾಜಪುರೋಹಿತ, ಲಕ್ಷ್ಮಣ ಪಟೇಲ್, ಪ್ರವೀಣ ದೇವಾಸಿ, ಲಕ್ಮಾರಾಮ್ ಪಟೇಲ್, ಜಗದೀಶ ಪಟೇಲ್, ವಿಠ್ಠಲ್ ಪಟೇಲ್ ಸೇರಿದಂತೆ ರಾಜಸ್ಥಾನ ಮತ್ತು ಗುಜರಾತ್ ಸಮಾಜದ ನಾಗರಿಕರು, ಮಹಿಳೆಯರು ಹಾಗೂ ಮಕ್ಕಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.