ಕೊಪ್ಪಳದ ಮುದ್ದಾಬಳ್ಳಿಯಲ್ಲಿ ಬುಧವಾರ ಸಭೆ ನಡೆಸಿದ ಅಧಿಕಾರಿಗಳು
ಕೊಪ್ಪಳ: ತಾಲ್ಲೂಕಿನ ಮುದ್ದಾಬಳ್ಳಿ ಗ್ರಾಮದಲ್ಲಿ ದಲಿತರು ಕ್ಷೌರ ಮಾಡುವಂತೆ ಕೇಳಿದ್ದರಿಂದ ಅಂಗಡಿಗಳನ್ನೇ ಬಂದ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಗ್ರಾಮದಲ್ಲಿ ಸಭೆ ನಡೆದಿದ್ದು, ಈ ರೀತಿಯ ಘಟನೆಗಳು ಮರುಕಳಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಬುಧವಾರದ ಸಂಚಿಕೆಯಲ್ಲಿ ‘ದಲಿತರು ಕ್ಷೌರ ಕೇಳಿದ್ದಕ್ಕೆ ಅಂಗಡಿಯೇ ಬಂದ್’ ಎಂಬ ತಲೆಬರಹದಲ್ಲಿ ವರದಿ ಪ್ರಕಟವಾಗಿತ್ತು. ‘ಪ್ರಜಾವಾಣಿ’ ವರದಿ ಉಲ್ಲೇಖಿಸಿ ಗ್ರಾಮದಲ್ಲಿ ಸಭೆ ನಡೆಸಿರುವ ಅಧಿಕಾರಿಗಳು ಮುದ್ದಾಬಳ್ಳಿಯ ಕ್ಷೌರಿಕರಿಗೆ ‘ಸಾರ್ವಜನಿಕ ಸ್ಥಳಗಳಾದ ದೇವಾಲಯ, ಹೋಟೆಲ್ ಹಾಗೂ ಕ್ಷೌರದ ಅಂಗಡಿಗಳಲ್ಲಿ ಎಲ್ಲರಿಗೂ ಮುಕ್ತವಾಗಿ ಅವಕಾಶವಿರಬೇಕು. ದಲಿತರು ಎನ್ನುವ ಕಾರಣಕ್ಕೆ ನಿರಾಕರಣೆ ಮಾಡಿದರೆ ಕ್ರಮ ಜರುಗಿಸಲಾಗುವುದು’ ಎಂದು ಅಧಿಕಾರಿಗಳು ತಿಳಿವಳಿಕೆ ಮೂಡಿಸಿದರು. ಬಳಿಕ ಗ್ರಾಮಸ್ಥರ ಸಮ್ಮುಖದಲ್ಲಿಯೇ ಅಧಿಕಾರಿಗಳು ದಲಿತ ವ್ಯಕ್ತಿಯೊಬ್ಬರಿಗೆ ಅದೇ ಗ್ರಾಮದ ಕ್ಷೌರಿಕರಿಂದ ಕ್ಷೌರ ಮಾಡಿಸಿದರು.
‘ಅಸ್ಪೃಶ್ಯತೆ ಆಚರಣೆಗೆ ಎಲ್ಲಿಯೂ ಅವಕಾಶ ಇರುವುದಿಲ್ಲ. ಇದನ್ನು ಇಲಾಖೆ ಒಪ್ಪುವುದೂ ಇಲ್ಲ. ಒಂದು ವೇಳೆ ಇದೇ ರೀತಿಯ ಘಟನೆ ಮರುಕಳಿಸಿದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಅಜ್ಜಪ್ಪ ಸೊಗಲದ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.