ಕೊಪ್ಪಳ: ರಷ್ಯಾ ಪಕ್ಕದ ದೇಶ ಉಕ್ರೇನ್ ಮೇಲೆ ದಾಳಿ ತೀವ್ರಗೊಳಿಸಿದ್ದು, ಸಾವಿರಾರು ಭಾರತೀಯರು ಸೇರಿದಂತೆ ಜಿಲ್ಲೆಯ ಒಬ್ಬ ವಿದ್ಯಾರ್ಥಿ ಸಿಲುಕಿಕೊಂಡಿರುವುದು ಆತಂಕ ಮೂಡಿಸಿದೆ.
ಉಕ್ರೇನ್ ದೇಶದ ವಿನ್ಎಂಯು ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ಮೂರನೇ ವರ್ಷದಲ್ಲಿ ಓದುತ್ತಿರುವ ಯಲಬುರ್ಗಾ ತಾಲ್ಲೂಕಿನ ಕಲ್ಲೂರು ಗ್ರಾಮದ ಎಸ್.ಕೆ.ಸೊಪ್ಪಿಮಠ ಉಕ್ರೇನ್ನಲ್ಲಿ ಸಿಲುಕಿಕೊಂಡಿದ್ದು, ಕುಟುಂದವರಲ್ಲಿ ಆತಂಕ ಮೂಡಿಸಿದೆ.
ರಷ್ಯಾಪಡೆಗಳು ಮುನ್ನುಗ್ಗುತ್ತಿದ್ದು, ಸದ್ಯ ವಾಸವಾಗಿರುವ ವಸತಿ ನಿಲಯದಲ್ಲಿ ಸುರಕ್ಷಿತರಾಗಿದ್ದಾರೆ. ಭಾರತಕ್ಕೆ ಬರಲು ಫೆ.28ರಂದು ವಿಮಾನದ ಟಿಕೆಟ್ ಬುಕ್ ಆಗಿತ್ತು. ಈಗ ಯುದ್ಧ ಭೀತಿಯಿಂದ ಏರ್ ಇಂಡಿಯಾ ವಿಮಾನವನ್ನು ವಾಪಸ್ ಕಳುಹಿಸಲಾಗಿದೆ. ಮಾರ್ಚ್ 8ರ ನಂತರ ಸ್ವದೇಶಕ್ಕೆ ಕಳುಹಿಸಿಕೊಡುವುದಾಗಿ ಹೇಳಿದ್ದಾರೆ ಎಂದು ಸೊಪ್ಪಿಮಠ ತಿಳಿಸಿದ್ದಾರೆ.
’ಸದ್ಯಕ್ಕೆ ಯಾವುದೇ ಅಪಾಯವಿಲ್ಲ. ಯುದ್ಧದ ಸ್ಥಿತಿ ಹೀಗೆ ಮುಂದುವರೆದರೆ ಊಟಕ್ಕೂ ಪರದಾಡುವಂತೆ ಆಗುತ್ತದೆ. ಈ ಸಂದರ್ಭದಲ್ಲಿ ತಾಯಿ ನಾಡು ನೆನಪಿಗೆ ಬರುತ್ತದೆ. ಕೆಲವು ಸ್ಫೋಟದ ಶಬ್ಧಗಳು ಕೇಳಿ ಬರುತ್ತಿದೆ. ದೇಶದಲ್ಲಿ ತುರ್ತು ಪರಿಸ್ಥಿತಿ ಇದ್ದು, ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಸತತ ಸಂಪರ್ಕದಲ್ಲಿದ್ದಾರೆ' ಎಂದು ತಿಳಿಸಿದ್ದಾರೆ.
ರಸ್ತೆಗಳು ಜನ ನಿಭಿಡವಾಗಿದ್ದು, ಸುರಕ್ಷತೆಗಾಗಿ ಜನರು ಅಡುಗುತಾಣಗಳತ್ತ ಹೋಗುತ್ತಿದ್ದಾರೆ. ಹೆಚ್ಚಿನ ಅಪಾಯ ಸಂಭವಿಸಿದರೆ ಬಂಕರ್ಗಳಲ್ಲಿ ಆಶ್ರಯಕ್ಕೆ ಜನರನ್ನು ಕಳುಹಿಸುವ ವ್ಯವಸ್ಥೆ ನಡೆದಿದೆ. ಅಲ್ಲಿನ ಪರಿಸ್ಥಿತಿ ತೀವ್ರವಾಗಿ ಹದಗೆಡುತ್ತಿದ್ದು, ಬೇಗ ಭಾರತಕ್ಕೆ ಬಂದರೆ ಸಾಕು ಎನ್ನುವ ಸ್ಥಿತಿ ಇದೆ ಎಂದು ಹೇಳುತ್ತಾರೆ.
ಸಂಸದ ಸಂಗಣ್ಣ ಕರಡಿ ವಿದೇಶಾಂಗ ಸಚಿವ ಎಸ್.ಜಯಶಂಕರ್ ಅವರಿಗೆ ಪತ್ರ ಬರೆದು, ಸಂಗಮೇಶ ಸೊಪ್ಪಿಮಠ ಉಕ್ರೇನ್ನ Vinnytisia Nation Pirgov Memorieal Medical College ಎಂಬಿಬಿಎಸ್ ಮೂರನೇ ವರ್ಷದಲ್ಲಿ ಓದುತ್ತಿದ್ದು, ಅವರನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತರಬೇಕು ಎಂದು ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.