ADVERTISEMENT

ಕೊಪ್ಪಳ| ಸಿಎಂ ಬಳಿ ಸರ್ವ ಪಕ್ಷಗಳ ನಿಯೋಗ: ಸಂಗಣ್ಣ 

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 6:28 IST
Last Updated 2 ಮಾರ್ಚ್ 2026, 6:28 IST
<div class="paragraphs"><p>ಕೊಪ್ಪಳದಲ್ಲಿ ಭಾನುವಾರ ನಡೆದ ಧರಣಿಯಲ್ಲಿ ಮಾಜಿ ಸಂಸದ ಸಂಗಣ್ಣ ಕರಡಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು</p></div>

ಕೊಪ್ಪಳದಲ್ಲಿ ಭಾನುವಾರ ನಡೆದ ಧರಣಿಯಲ್ಲಿ ಮಾಜಿ ಸಂಸದ ಸಂಗಣ್ಣ ಕರಡಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು

   

ಕೊಪ್ಪಳ: ‘ಪರಿಸರಕ್ಕೆ ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಹೋರಾಟ ನಡೆಯುತ್ತಿದ್ದು, ಬಾಧೆಗೊಳಗಾದ ಜನರ ಕಷ್ಟ ಹೇಳತೀರದು. ತಂತ್ರಜ್ಞರ ವರದಿ ಹೇಳಿದ್ದನ್ನು ಜಾರಿ ಮಾಡಿ ಎಂದು ಕೇಳೋಣ. ಹಿಂದಿನ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಸಮಯ ಈಗ ಬಂದಿದೆ. ಮುಖ್ಯಮಂತ್ರಿ ಬಳಿ ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗೋಣ’ ಎಂದು ಮಾಜಿ ಸಂಸದ ಸಂಗಣ್ಣ ಕರಡಿ ಹೇಳಿದರು.

ಭಾನುವಾರ 122ನೇ ದಿನದ ಧರಣಿಯಲ್ಲಿ ಮಾತನಾಡಿದ ಅವರು ‘ಜನಜಾಗೃತಿ ಆಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಬಂದ್ ಹೋರಾಟದಲ್ಲಿ ಮಹಿಳೆಯರು ತೋರಿಸಿದ ಆವೇಶ ಸಾತ್ವಿಕವಾಗಿತ್ತು. ಅವರ ನೋವಿಗೆ ಪಕ್ಷಾತೀತವಾಗಿ ಮಿಡಿದು ನಾವೆಲ್ಲ ಮುಂದೆ ನಿಂತು ಸರ್ಕಾರದ ಮನವೊಲಿಸಿ ಬಲ್ಡೋಟ ತೊಲಗಿಸೋಣ. ಜನರು ಎದ್ದು ನಿಂತರೆ ಎಂತಹ ದೊಡ್ಡ ಸಮಸ್ಯೆಯಾದರೂ ಪರಿಹಾರ ಸಿಗುತ್ತದೆ’ ಎಂದರು.

ADVERTISEMENT

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಗುರುಮೂರ್ತಿಸ್ವಾಮಿ ಅಳವಂಡಿ ಮಾತನಾಡಿ ‘ಇದು ನಮ್ಮ ರಾಜಕಾರಣಿಗಳಿಗೆ ದೊಡ್ಡ ವಿಷಯವಲ್ಲ. ಇಷ್ಟು ಸಮಸ್ಯೆ ಎದುರಿಸಿ ಕಾರ್ಖಾನೆ ಮಾಲೀಕರನ್ನು ಬೆಳೆಸಿ, ನಮ್ಮ ಜನರು ರೋಗಬಾಧೆ, ಜೀವ ಸಂಕಟ ಯಾಕೆ ತೆಗೆದುಕೊಳ್ಳಬೇಕು’ ಎಂದು ಪ್ರಶ್ನಿಸಿದರು.

ಜಿಲ್ಲಾ ಬಚಾವೊ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ಜಂಟಿ ಕ್ರಿಯಾ ವೇದಿಕೆ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ ‘ಹೋರಾಟಕ್ಕೆ ಜನರು ಮತ್ತಷ್ಟು ದೊಡ್ಡ ಸಂಖ್ಯೆಯಲ್ಲಿ ಮುಂದೆ ಬರಬೇಕು. ಈ ಹೋರಾಟ ಗೆಲುವು ಅಂದರೆ ನಮ್ಮ ಜೀವದ ಉಳಿವು’ ಎಂದರು.

ಧರಣಿಗೆ ಇಪ್ಪತ್ತು ವರ್ಷ ಬಲ್ಡೋಟ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಹೋರಾಡಿದ ಸೂರ್ಯರೆಡ್ಡಿ, ವಕೀಲ ರಾಜು ಬಾಕಳೆ ಹೋರಾಟ ಅನುಭವ ಹಂಚಿಕೊಂಡರು.

ಸಾಹಿತಿ ವಿರೂಪಾಕ್ಷಪ್ಪ ಕೋರಗಲ್, ಸಾಹಿತಿ ಎಚ್.ಎಸ್. ಪಾಟೀಲ್, ಎಸ್. ನಾರಾಯಣರೆಡ್ಡಿ, ಕೃಷ್ಣ ಬೇವಿನಕಟ್ಟಿ, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಭಾಗ್ಯನಗರದ ಗ್ಯಾನೇಶ ಹ್ಯಾಟಿ ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.