ADVERTISEMENT

ಯಲಬುರ್ಗಾ | ಮಹಾರಾಷ್ಟ್ರ ವಿವಿ ಪದವಿ ಪಠ್ಯಕ್ಕೆ ಗಜಲ್‍ಗಳ ಆಯ್ಕೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2025, 3:36 IST
Last Updated 22 ಅಕ್ಟೋಬರ್ 2025, 3:36 IST
ಅನುಸೂಯ
ಅನುಸೂಯ   

ಯಲಬುರ್ಗಾ: ತಾಲ್ಲೂಕಿನ ಬೇವೂರ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿ ಅನುಸೂಯ ಜಹಗೀರದಾರ ಅವರ ಎರಡು ಗಜಲ್‍ಗಳು ನೆರೆ ರಾಜ್ಯ ಮಹಾರಾಷ್ಟ್ರದ ಎರಡು ವಿಶ್ವವಿದ್ಯಾಲಯಗಳ ಕನ್ನಡಭಾಷಾ ವಿಷಯಗಳ ಪಠ್ಯಕ್ಕೆ ಆಯ್ಕೆಯಾಗಿವೆ.

ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದ ಬಿ.ಎ. ಎರಡನೇ ವರ್ಷ ಹಾಗೂ ಪುಣ್ಯಶ್ಲೋಕ ಅಹಿಲ್ಯಾದೇವಿ ಹೋಳ್ಕರ್ ಸೊಲ್ಲಾಪುರ ವಿಶ್ವವಿದ್ಯಾಲಯದ ಬಿ.ಕಾಂ ಮೂರನೇ ವರ್ಷ ಹಾಗು ಬಿವಿಎ (ಬ್ಯಾಚುಲರ್ ಆಫ್ ವಿಜ್ಯುಯಲ್ ಆರ್ಟ್ಸ್) ನ ಮೂರನೇ ಸೆಮಿಸ್ಟರ್ ಒಟ್ಟು ಎರಡು ವಿಶ್ವವಿದ್ಯಾಲಯ ಮೂರು ಕೋರ್ಸ್‍ಗಳ ಅಭ್ಯಾಸಕ್ಕಾಗಿ 2025-26ನೇ ಸಾಲಿನಿಂದ ಪಠ್ಯವಾಗಿ ಆಯ್ಕೆಯಾಗಿವೆ. ಒಟ್ಟು 50 ಗಜಲ್ ರಚನೆಕಾರರ 100 ಗಜಲ್‍ಗಳನ್ನು ಪಠ್ಯಕ್ಕೆ ಪರಿಗಣಿಸಲಾಗಿದೆ ಎಂದು ಗಜಲ್ ಧಾರೆ ಪಠ್ಯಪುಸ್ತಕದ ಪ್ರಧಾನ ಸಂಪಾದಕರಾದ ಸಿದ್ಧರಾಮ ಹೊನ್ಕಲ್ ಹಾಗೂ ಶಿವಾಜಿ ವಿ.ವಿ. ಕನ್ನಡ ಅಭ್ಯಾಸ ಮಂಡಳಿ ಅಧ್ಯಕ್ಷ ಗುರುಸಿದ್ದಯ್ಯ ಸ್ವಾಮಿ ತಿಳಿಸಿದ್ದಾರೆ.

ಕಥೆ, ಕವನ, ಗಜಲ್‍ಗಳು ಸೇರಿ ಒಟ್ಟು 6 ಪುಸ್ತಕಗಳನ್ನು ಪ್ರಕಟಿಸಿರುವ ಅನುಸೂಯ ಅವರು, ಹಿಂದೂಸ್ಥಾನಿ ಸಂಗೀತದಲ್ಲಿಯೇ ಒಳ್ಳೆಯ ಸಾಧನೆ ಮಾಡಿದ್ದಾರೆ. ಕರ್ನಾಟಕ ಸರ್ಕಾರವು 2007ರಲ್ಲಿ ರಾಜ್ಯಮಟ್ಟದ ಉತ್ತಮ ವಿಶೇಷ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಿತ್ತು. ಇವರ ಗಜಲ್‍ಗಳು ನೆರೆ ರಾಜ್ಯದ ಪಠ್ಯವಾಗಿ ಆಯ್ಕೆಯಾಗಿದ್ದು, ಜಿಲ್ಲೆ ಹಾಗೂ ತಾಲ್ಲೂಕಿನ ಸಾಹಿತಿಗಳಿಗೂ ಹಾಗೂ ಸಾಹಿತ್ಯ ಪ್ರಿಯರಿಗೆ ಸಂತಸಕ್ಕೆ ಕಾರಣವಾಗಿದೆ ಎಂದು ಕೊಪ್ಪಳ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ವೀರಣ್ಣ ನಿಂಗೋಜಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.