ಕನಕಗಿರಿ: ‘ತಾಲ್ಲೂಕಿನ ಬಂಕಾಪುರ ಗ್ರಾಮದಲ್ಲಿ ಕನಕಗಿರಿ ಪಾಳೆಗಾರ ಇಮ್ಮಡಿ ಉಡುಚಪ್ಪನಾಯಕನ ಕಾಲದ ಎರಡು ಶಾಸನಗಳು ಪತ್ತೆಯಾಗಿವೆ’ ಎಂದು ಸಂಶೋಧಕ ಶರಣಬಸಪ್ಪ ಕೋಲ್ಕಾರ್ ತಿಳಿಸಿದರು.
ಗ್ರಾಮದ ಉತ್ತರಕ್ಕೆ ಒಂದು ಶಾಸನ ಮತ್ತು ಆಗ್ನೇಯ ದಿಕ್ಕಿನಿಂದ ಎರಡು ಕಿ.ಮೀ ಅಂತರದಲ್ಲಿ ಬಂಡೆಯ ಮೇಲೆ ಬರೆದ ಮತ್ತೊಂದು ಶಾಸನ ಪತ್ತೆಯಾಗಿದೆ. ಮೊದಲ ಶಾಸನ 24 ಸಾಲುಗಳಲ್ಲಿ ಎರಡನೇ ಶಾಸನ ಆರು ಸಾಲುಗಳಲ್ಲಿ ಇದ್ದು, 17ನೇ ಶತಮಾನದ ಕನ್ನಡ ಲಿಪಿ ಮತ್ತು ಭಾಷೆಯಲ್ಲಿವೆ ಎಂದು ಅವರು ಮಾಹಿತಿ ನೀಡಿದರು.
ಮೊದಲ ಶಾಸನ ಚಾರಿತ್ರಿಕವಾಗಿ ಮಹತ್ವದಿಂದ ಕೂಡಿದೆ. ಕನಕಗಿರಿಯ ಅರಸರ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲುತ್ತದೆ ಇದು ಐದನೇ ದೊರೆ ಇಮ್ಮಡಿ ಉಡಚನಾಯಕನ ಪಟ್ಟದ ರಾಣಿ ಚಿಕ್ಕ ಲಕ್ಷ್ಮಮ್ಮನ ಮಗ ಲಕ್ಷ್ಮಪ್ಪ ನಾಯಕನು ಕನಕಗಿರಿ ವಿದ್ಯಾನಗರ ಮಾರ್ಗದಲ್ಲಿ ಬಂಕಾಪುರದ ಬಳಿ ದೇವಸ್ಥಾನ, ಬಾವಿ, ವನಗಳನ್ನು ನಿರ್ಮಿಸಿ ದೇವರ ಪೂಜೆಗಾಗಿ ಗದ್ದೆಯನ್ನು ದಾನವಾಗಿ ಸಮರ್ಪಿಸಿದ ಬಗ್ಗೆ ತಿಳಿಸುತ್ತದೆ ಎಂದು ಕೋಲ್ಕಾರ ಹೇಳಿದರು.
‘ಪ್ರಾಸಂಗಿಕವಾಗಿ ಶಾಸನದಲ್ಲಿ ಇಮ್ಮಡಿ ಉಡಚನಾಯಕನ ತಂದೆ ಕನಕಯ್ಯ ನಾಯಕ, ತಾತ ಕೆಲವಡಿ ಉಡಚ ನಾಯಕ ಎಂದು ತಿಳಿಸಿರುವುದರಿಂದ ಈ ಇಬ್ಬರು ಅರಸರ ಬಗ್ಗೆ ಮೊಟ್ಟ ಮೊದಲ ಶಾಸನ ಉಲ್ಲೇಖ ದೊರೆತಂತಾಗಿದೆ. ಇಮ್ಮಡಿ ಉಡಚನಾಯಕನಿಗೆ ಚಿನ್ನಮ್ಮ, ಅಚ್ಚಮ್ಮ, ಲಕ್ಷ್ಮಮ್ಮ ಎಂಬ ರಾಣಿಯರಿದ್ದುದು ಇತರ ಶಾಸನಗಳಿಂದ ತಿಳಿದುಬಂದಿತ್ತು. ಆದರೆ ಈ ಶಾಸನ ಲಕ್ಷ್ಮಮ್ಮನು ಪಟ್ಟದ ರಾಣಿ ಎಂದೂ ಆಕೆಗೆ ಲಕ್ಷ್ಮಪ್ಪ ನಾಯಕ ಎಂಬ ಮಗ ಇದ್ದ ಎಂಬುದು ಹೊಸ ಸಂಗತಿಯನ್ನು ತಿಳಿಸುತ್ತದೆ’ ಎಂದರು.
ಬಂಕಾಪುರದಲ್ಲಿ ಲಕ್ಷ್ಮಪ್ಪನಾಯಕನ ಪರವಾಗಿ ರಾಂಭೋಯಿ ತಿಮ್ಮಯ್ಯ ಎಂಬುವವನು ದೇವಾಲಯವನ್ನು ಕಟ್ಟಿಸಿದ್ದಾನೆ. ಇಂದಿಗೂ ಈ ದೇವಾಲಯಕ್ಕೆ ರಾಮ ತಿಮ್ಮಪ್ಪನ ಗುಡಿ (ವಿಷ್ಣು) ಎಂದೇ ಕರೆಯಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.
ಕನಕಗಿರಿ ನಾಯಕರ ಎಲ್ಲಾ ಶಿಲಾಶಾಸನಗಳ ಪೈಕಿ ಇದು ಮಾತ್ರ ಶಾಸನ ರಚನೆಯ ನಮಸ್ತುಂಗ ಎಂಬ ಶಿವಸ್ತುತಿಯ ಮಂಗಳಸ್ತೋತ್ರದಿಂದ ಶಾಪಾಶಯದವರೆಗಿನ ಎಲ್ಲಾ ಅಂಶಗಳನ್ನು ಅನುಸರಿಸಿ ರಚಿಸಿದ ಶಾಸನವಾಗಿದೆ. ಎರಡನೇ ಶಾಸನ ಇಮ್ಮಡಿ ಉಡಚನಾಯಕ ಬಂಕಾಪುರದ ಗೌಡ, ಶಾನುಭೋಗರಿಗೆ ಮನೆ, ಗದ್ದೆ ನೀಡಿದ ಬಗ್ಗೆ ತಿಳಿಸುತ್ತದೆ. ಈ ಶಾಸನಗಳ ಕುರಿತಾಗಿ ಹೆಚ್ಚಿನ ಅಧ್ಯಯನ ಕೈಗೊಳ್ಳಲಾಗುವುದು ಅವರು ಹೇಳಿದರು.
ಶಾಸನ ಶೋಧನೆಯಲ್ಲಿ ದುರ್ಗಾದಾಸ ಯಾದವ್, ಬಂಕಾಪುರದ ಸೋಮನಾಥ, ಪ್ರೊ.ಬಸವರಾಜ ಅಯೋಧ್ಯ, ಸುರೇಶಗೌಡ ಮತ್ತು ಹರನಾಯಕ ನೆರವು ನೀಡಿದ್ದಾರೆ ಎಂದು ಕೋಲ್ಕಾರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.