ಕೊಪ್ಪಳ: ರಾಜ್ಯದ ಹಲವು ಕಡೆ ಮೇಲಿಂದ ಮೇಲೆ ಮಳೆಯಾಗುತ್ತಿರುವ ಕಾರಣ ಬೆಲೆ ಏರಿಕೆ ಬಿಸಿ ತರಕಾರಿಗಳಿಗೂ ತಟ್ಟಿದೆ.
ನಗರದ ಚಿಲ್ಲರೆ ಮಾರುಕಟ್ಟೆಯಲ್ಲಿ ಶನಿವಾರ ಬದನೆಕಾಯಿ, ಹೀರೆಕಾಯಿ, ಬೀನ್ಸ್ ಹಾಗೂ ಕ್ಯಾರೆಟ್ ಬೆಲೆ ವಿಪರೀತ ಏರಿಕೆಯಾಗಿತ್ತು.
ಜಿಲ್ಲೆಯ ಚಿಲವಾಡಗಿ, ಹಿರೇಸಿಂಧೋಗಿ ಸೇರಿದಂತೆ ವಿವಿಧ ಕಡೆ ಬೆಳೆಯುವ ಬದನೆಕಾಯಿ ಹಾಗೂ ಹಿರೇಕಾಯಿ ಬೆಲೆ ಪ್ರತಿ ಕೆ.ಜಿ.ಗೆ ₹20ರಿಂದ 30ಕ್ಕೆ ಹೆಚ್ಚಳವಾಗಿದೆ. ಮೂರ್ನಾಲ್ಕು ದಿನಗಳ ಹಿಂದೆ ಒಂದು ಕೆ.ಜಿ.ಗೆ ₹30ರಿಂದ ₹40 ಇದ್ದ ಬದನೆಕಾಯಿ ವಾರಾಂತ್ಯದಲ್ಲಿ ₹60ರಿಂದ ₹80ಕ್ಕೆ ಏರಿಕೆಯಾಗಿತ್ತು. ಹಿರೇಕಾಯಿಯೂ ಇದೇ ಬೆಲೆಯಲ್ಲಿತ್ತು.
ಒಂದು ತಿಂಗಳ ಹಿಂದೆ ವಿಪರೀತ ಬೆಲೆ ಏರಿಕೆಯಾಗಿದ್ದ ಟೊಮೊಟೊ ಬೆಲೆ ಈಗ ಪೂರ್ಣವಾಗಿ ಕುಸಿದಿದೆ. ಪ್ರತಿ ಕೆ.ಜಿ.ಗೆ ₹10ಕ್ಕೆ ಮಾರಾಟವಾಗುತ್ತಿದೆ.
ಜಿಲ್ಲೆಗೆ ಬೆಳಗಾವಿ ಭಾಗದಿಂದ ಬರುವ ಕ್ಯಾರೆಟ್ ಪ್ರತಿ ಕೆ.ಜಿ.ಗೆ ₹80ರಿಂದ ₹90 ಆಗಿದೆ. ಮೊದಲು ₹60 ಇತ್ತು. ಪ್ರತಿ ಕೆ.ಜಿ.ಗೆ ₹40 ಇದ್ದ ಬೀನ್ಸ್ ಬೆಲೆ ₹80ಕ್ಕೆ ಹೆಚ್ಚಳವಾಗಿತ್ತು.
ಈ ಕುರಿತು ಪ್ರಜಾವಾಣಿ ಜೊತೆ ಮಾತನಾಡಿದ ಇಲ್ಲಿನ ಜೆ.ಪಿ. ಮಾರುಕಟ್ಟೆಯ ತರಕಾರಿ ವ್ಯಾಪಾರಿ ಪರಶುರಾಮ ಮೊರಾಳ ‘ಉಳ್ಳಾಗಡ್ಡಿ, ಹಸಿಮೆಣಸಿನಕಾಯಿ ಬೆಲೆ ಸ್ಥಿರವಾಗಿದೆ. ಉಳಿದ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದೆ. ಹೊರ ಜಿಲ್ಲೆಯಿಂದ ಮಾರುಕಟ್ಟೆಗೆ ತರಕಾರಿ ಹೆಚ್ಚು ಬರುತ್ತಿಲ್ಲ. ಮಳೆಯಾಗಿರುವ ಕಾರಣ ಸಾಕಷ್ಟು ಫಸಲು ಕೊಳೆತಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.