
ಗಂಗಾವತಿ: ‘ಕನ್ನಡ ಕಾವ್ಯ ಯಾವ ದಿಕ್ಕಿನಡೆಗೆ ಹೋಗಬೇಕು ಎಂದು ಕವಿ ಪದೇ ಪದೇ ಕೇಳಿಕೊಂಡು, ಹುಡುಕಾಟದ ಪಾಲುದಾರ ಆಗಬೇಕು. ಈ ಬಗ್ಗೆ ಎಚ್ಚರಿಕೆ ಜೊತೆಗೆ ಪ್ರಜ್ಞೆಯ ಜಾಗೃತಿ ಮೂಡಿಸಬೇಕು’ ಎಂದು ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಡಾ.ಮುಮ್ತಾಜ್ ಬೇಗಂ ಅಭಿಪ್ರಾಯಪಟ್ಟರು.
ನಗರದ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಓದು ಹೊತ್ತಿಗೆ ಅಭಿಯಾನ ಕಾರ್ಯಕ್ರಮದಲ್ಲಿ ಜಯಶ್ರೀ ಹಕ್ಕಂಡಿಯವರ ಮಿಣುಕು ದೀಪಗಳು ಹಾಗೂ ಉಲಿದಷ್ಟೇ ದನಿ ಪುಸ್ತಕಗಳ ಕುರಿತು ಅವಲೋಕನ ಮಾಡಿ ಅವರು ಮಾತನಾಡಿದರು.
‘ಮನುಷ್ಯನ ಆಕ್ರಂದನದ ಪರಿಣಾಮಗಳೇನು? ವಿಚಿತ್ರವಾದ ಹುಡುಕಾಟ, ನಿಗೂಢ, ಆಲಿಸುವಿಕೆ, ಕಾಯುವಿಕೆ, ಮಾಗುವ ಗುಣ ಏನನ್ನು ಸೂಚಿಸುತ್ತವೆ ಎನ್ನುವ ಅಂಶಗಳನ್ನು ಸೂಕ್ಷ್ಮವಾಗಿ ಗ್ರಹಿಸಬೇಕು. ಹೆಣ್ಣಿಗೆ ಕಾವ್ಯ ಒಂದು ಸ್ವಾಯತ್ತ ಜಗತ್ತನ್ನು ನಿರ್ಭಿಡೆಯಾಗಿ ಕಟ್ಟಿಕೊಳ್ಳಲು ಇರುವ ಮಾರ್ಗವಾಗಿದೆ. ಮಹಿಳೆಯರು ಬರೆಯುತ್ತಿರುವ ವರ್ತಮಾನದ ಕವಿತೆಗಳಲ್ಲಿ ಮುಕ್ತತೆ ಹೆಚ್ಚು ಕಾಣುತ್ತೇವೆ. ನಿವೇದನಾತ್ಮಕ ನಿರೂಪಣಾ ವಿಧಾನವನ್ನು ದಾಟಿ ಹೆಣ್ಣಿನ ಒಳಲೋಕದ ಆವರಣವನ್ನು ತಲುಪುತ್ತಿರುವ ಕವಿತೆಗಳನ್ನು ಕಾಣುತ್ತೇವೆ’ ಎಂದರು.
ನಾಗರತ್ನ ಎಚ್.ಮಾತನಾಡಿ,‘ಜಯಶ್ರೀ ಹಕ್ಕಂಡಿಯವರ ಉಲಿದಷ್ಟೇ ದನಿ ಹಾಗೂ ಮಿಣುಕು ದೀಪಗಳು ಕೃತಿಗಳು ಉತ್ತಮ ಸಂದೇಶವನ್ನು ನೀಡುತ್ತವೆ. ಅಲ್ಲದೆ ಜಂಜಡದ ಬದುಕಿನ ತಾಕಲಾಟಗಳು, ವಾತ್ಸಲ್ಯ, ಪ್ರೇಮದ ನೆಲೆಗಳು, ಗಾಂಧಿ ತತ್ವ ಚಿಂತನೆಗಳು ಇತ್ಯಾದಿ ಗಂಭೀರವಾಗಿ ಮೂಡಿ ಬಂದಿದೆ. ಸಾಹಿತ್ಯ ಸಮಾಜದ ಹಾಗೂ ಹೋಗುಗಳನ್ನು ಹೇಳುತ್ತ ಅದರಲ್ಲಿ ಉಂಟಾದ ಓರೆ ಕೋರೆಗಳನ್ನು ಖಂಡಿಸುತ್ತ ಮೌಲ್ಯಗಳ ಜೀವಂತಿಕೆಯನ್ನು ಇಲ್ಲಿ ಮುಖ್ಯವಾಗಿ ಬಿಂಬಿಸಲಾಗಿದೆ ಎಂದರು.
ನೀಲಮ್ಮ, ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಮೇಲ್ವಿಚಾರಕಿ ಲಕ್ಷ್ಮಿ ಮಾತನಾಡಿದರು.
ಮೆಟ್ರಿಕ್ ನಂತರ್ ಬಾಲಕಿಯರ ವಸತಿ ನಿಲಯದ ಮೇಲ್ವಿಚಾರಕಿ ಗೌಸಿಯಾ ಬೇಗಂ ಬಿ. ಕವಿಯತ್ರಿ ಜಯಶ್ರೀ ಹಕ್ಕಂಡಿ, ಸುಧಾ ಬಡಿಗೇರ, ಸರಸ್ವತಿ, ಶಾಂತ, ಭಾಗ್ಯ ಸೇರಿ ವಿದ್ಯಾ ರ್ಥಿನಿಯರು ಉಪಸ್ಥಿತರಿದ್ದರು.
ವಿಜಯಲಕ್ಷ್ಮಿ ಕಲಾಲ್ ನಿರೂಪಿಸಿದರು. ಫಲಕ್ಉಜ್ಮಾ ಸ್ವಾಗತಿಸಿದರು. ಶಕೀಲಾ ಪ್ರಾರ್ಥಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.