ADVERTISEMENT

ಶಾಸಕರ ವಿರುದ್ಧ ಕಾಂಗ್ರೆಸ್ ಆರೋಪ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2012, 7:45 IST
Last Updated 4 ಏಪ್ರಿಲ್ 2012, 7:45 IST

ಮಂಡ್ಯ: `ಜಿ ಕೋಟಾದಡಿ ನಿಯಮ ಮೀರಿ ನಿವೇಶನ ಪಡೆದಿರುವ ವಿವಾದ ಮತ್ತೆ ಜಿಲ್ಲೆಯ ಇಬ್ಬರು ಜೆಡಿಎಸ್ ಶಾಸಕರನ್ನು ಆವರಿಸಿದ್ದು, ಶಾಸಕರಾದ ಸಿ.ಎಸ್.ಪುಟ್ಟರಾಜು ಮತ್ತು ಎ.ಬಿ.ರಮೇಶ ಬಂಡಿಸಿದ್ದೇಗೌಡ ಅವರು ತಮ್ಮ ಪತ್ನಿಯರ ಹೆಸರಿನಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಪಡೆದಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಆರೋಪಿಸಿದೆ.

`ಮೇಲುಕೋಟೆಯ ಶಾಸಕ ಸಿ.ಎಸ್.ಪುಟ್ಟರಾಜು ಅವರು ಪತ್ನಿ ನಾಗಮ್ಮ ಅವರ ಹೆಸರಿನಲ್ಲಿ, ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಅವರ ಪತ್ನಿ ಸುಮತಿ ಹೆಸರಿನಲ್ಲಿ ಮುಡಾದಿಂದ ಕ್ರಮವಾಗಿ 50-80 ಮತ್ತು 40-60 ಅಳತೆಯ ನಿವೇಶನ ಪಡೆದಿದ್ದಾರೆ~ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಟಿ.ಎಸ್.ಸತ್ಯಾನಂದ ದೂರಿದ್ದಾರೆ.

`ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಸರ್ಕಾರಿ ಆದೇಶದ ಮೂಲಕವೇ ಈ ನಿವೇಶನಗಳನ್ನು ಪಡೆದಿದ್ದು, ಅಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಪಡೆಯಲು ಇರುವ ನಿಯಮಗಳನ್ನು ಪೂರ್ಣವಾಗಿ ಉಲ್ಲಂಘಿಸಲಾಗಿದೆ~ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಈಗಾಗಲೇ ಇಬ್ಬರು ಶಾಸಕರು ನಿಯಮ ಮೀರಿ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಖರೀದಿಸಿದ್ದು, ಪ್ರಕರಣ ಬಹಿರಂಗ ಆದ ಹಿಂದೆಯೇ ಅನ್ಯರಿಗೆ ಮಾರಾಟ ಮಾಡಿದ್ದರೂ ಮತ್ತೆ ಮುಡಾಗೆ ವಾಪಸು ಬರೆದುಕೊಡುವ ಮೂಲಕ ತಪ್ಪು ಎಸಗಿದ್ದರು ಎಂಬುದನ್ನು ಅವರು ಉಲ್ಲೇಖಿಸಿದರು.

`ಎ.ಬಿ.ರಮೇಶ ಬಂಡಿಸಿದ್ದೇಗೌಡ ಅಲ್ಲದೇ ಅವರ ತಾಯಿ ಹಾಗೂ ಮಾಜಿ ಶಾಸಕಿ ವಿಜಯಲಕ್ಷ್ಮಿ ಅವರೂ ಮೈಸೂರು ಅಭಿವೃದ್ಧಿ ಪ್ರಾಧಿಕಾರದಿಂದ 50-80 ಅಳತೆ ನಿವೇಶನ ಪಡೆದಿದ್ದಾರೆ. ಜನ ಪ್ರತಿನಿಧಿಗಳಾದ ಇವರು ಕೇವಲ ಸ್ವಂತಕ್ಕೆ ನಿವೇಶನ ಪಡೆಯಲು ಒತ್ತುನೀಡಿದ್ದು, ಜನಹಿತವನ್ನು ಪೂರ್ಣ ಕಡೆಗಣಿಸಿದ್ದಾರೆ~ ಎಂದು ತರಾಟೆ ತೆಗೆದುಕೊಂಡರು.

ಕೋರ್ಟ್‌ನಲ್ಲಿ ಪ್ರಶ್ನೆ: ಈಗಾಗಲೇ ಮಂಡ್ಯ ಅಭಿವೃದ್ಧಿ ಪ್ರಾಧಿಕಾರದಿಂದ ಅಕ್ರಮವಾಗಿ ನಿವೇಶನ ಪಡೆದಿದ್ದನ್ನು ಕೋರ್ಟ್‌ನಲ್ಲಿ ಪ್ರಶ್ನೆ ಮಾಡಲಾಗಿದೆ. ಅದರ ಜೊತೆಗೆ ಈ ಪ್ರಕರಣವನ್ನು ಒಗ್ಗೂಡಿಸಿ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಲಾಗುವುದು ಎಂದು ಸತ್ಯಾನಂದ ತಿಳಿಸಿದರು.

ಶಾಸಕರಾಗಿ ಜಿ ಕೋಟಾದಡಿ ಒಂದು ನಗರದಲ್ಲಿ ನಿವೇಶನ ಪಡೆಯುವುದು ಸರಿ. ಆದರೆ, ತಮ್ಮ ಪ್ರಭಾವವನ್ನು ಬಳಸಿ ಮಂಡ್ಯ, ಮೈಸೂರು, ಬೆಂಗಳೂರು ಎಂದು ಎಲ್ಲ ಕಡೆ ನಿವೇಶನ ಪಡೆಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಜಿಲ್ಲೆಯ ಇತರ ಶಾಸಕರೂ ಹೀಗೆ ನಿವೇಶನ ಖರೀದಿಸಿರುವ ಸಾಧ್ಯತೆಗಳಿದೆಯಾ? ಎಂಬ ಪ್ರಶ್ನೆಗೆ, `ನನಗೆ ಆ ಬಗ್ಗೆ ಮಾಹಿತಿ ಇಲ್ಲ. ಈ ಇಬ್ಬರೂ ಶಾಸಕರು ನಿವೇಶನ ಖರೀದಿ ಮಾಡಿರುವ ಬಗ್ಗೆ ಸ್ಪಷ್ಟ ದಾಖಲೆ ಸಿಕ್ಕಿರುವ ಕಾರಣ ಬಹಿರಂಗ ಪಡಿಸಿದ್ದೇನೆ~ ಎಂದು ಪ್ರತಿಕ್ರಿಯಿಸಿದರು.

ಕ್ರಮಕ್ಕೆ ಪುಟ್ಟಣ್ಣಯ್ಯ ಆಗ್ರಹ
ಮಂಡ್ಯ: ಜೆಡಿಎಸ್‌ನ ಶಾಸಕರಾದ ಸಿ.ಎಸ್.ಪುಟ್ಟರಾಜು ಮತ್ತು ರಮೇಶ್‌ಬಾಬು ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದಲೂ ನಿವೇಶನ ಪಡೆದಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ತನಿಖೆ ನಡೆಸಿ ಕ್ರಮ ಜರುಗಿಸಬೇಕು ಎಂದು ಮಾಜಿ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಇವರು ಬೆಂಗಳೂರಿನಲ್ಲೂ ನಿವೇಶನ ಪಡೆದಿದ್ದಾರೆ. ಶಾಸಕರಿಗೆ ನಿವೇಶನ ಮಾಡುವುದೇ ಆಗಿದೆ. ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಲ್ಲೂ ಅವರು ತಪ್ಪು ಮಾಹಿತಿ ನೀಡಿ ನಿವೇಶನವನ್ನು ಪಡೆದಿದ್ದರು. ನಿಯಮಗಳ ಉಲ್ಲಂಘನೆ  ಸ್ಪಷ್ಟವಾಗಿದ್ದು, ಈ ಹಿನ್ನೆಲೆಯಲ್ಲಿ ಕ್ರಮ ಜರುಗಿಸ ಬೇಕು ಎಂದು ಆಗ್ರಹಪಡಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.