ADVERTISEMENT

ಬೇಬಿಬೆಟ್ಟದಲ್ಲಿ ಫೆ.15 ರಿಂದ ದನಗಳ ಭಾರಿ ಜಾತ್ರಾಮಹೋತ್ಸವ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 8:02 IST
Last Updated 12 ಫೆಬ್ರುವರಿ 2026, 8:02 IST
ದರ್ಶನ್ ಪುಟ್ಟಣ್ಣಯ್ಯ
ದರ್ಶನ್ ಪುಟ್ಟಣ್ಣಯ್ಯ   

ಪಾಂಡವಪುರ: ತಾಲ್ಲೂಕಿನ ಬೇಬಿ ಬೆಟ್ಟದ ಭಾರಿ ದನಗಳ ಜಾತ್ರಾ ಮಹೋತ್ಸವವು ಫೆ.15 ರಿಂದ 23ರವರೆಗೆ ನಡೆಯಲಿದೆ. ಮಹಾಶಿವರಾತ್ರಿಯ ದಿನದಂದು ಸಂಜೆ 4 ಗಂಟೆಗೆ ಜಾತ್ರೆಗೆ ಚಾಲನೆ ನೀಡಲಾಗುವುದು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.

ಪಟ್ಟಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ದನಗಳ ಜಾತ್ರಾಮಹೋತ್ಸವವನ್ನು ಪದ್ಮಶ್ರೀ ಪುರಸ್ಕೃತ ಪುಸ್ತಕ ಪ್ರೇಮಿ ಎಂ.ಅಂಕೇಗೌಡ ಉದ್ಪಾಟಿಸಲಿದ್ದು, ಬೇಬಿಬೆಟ್ಟದ ಶ್ರೀ ರಾಮಯೋಗೀಶ್ವರ ಮಠದ ಪೀಠಾಧ್ಯಕ್ಷ ಶಿವಬಸವಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.

ಬೇಬಿಬೆಟ್ಟದ ದನಗಳ ಜಾತ್ರಾಮಹೋತ್ಸವದ ಸಮಿತಿಯಿಂದ ಎಲ್ಲ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಬೇಬಿ ಬೆಟ್ಟದ ತಪ್ಪಲಿನ ಜಾತ್ರಾ ಮಾಳದಲ್ಲಿ ನಡೆಯುವ ಜಾತ್ರೆಯಲ್ಲಿ ಪಾಲ್ಗೊಳ್ಳುವ ರೈತರಿಗೆ ಮತ್ತು ಜಾನುವಾರುಗಳಿಗೆ ಶುದ್ಧ ಕುಡಿಯುವ ನೀರು, ದನಗಳ ತೊಟ್ಟಿಗಳು, ಗೊಂತುಗಳು, ವಿದ್ಯುತ್ ದೀಪ ಸೇರಿ ಎಲ್ಲ ಸೌಕರ್ಯಗಳನ್ನು ಒದಗಿಸಲಾಗಿದೆ. ಜಾತ್ರಾ ಸ್ಥಳದಲ್ಲಿ ಪಶುವೈದ್ಯಕೀಯ ಕೇಂದ್ರ, ಆರೋಗ್ಯ ಕೇಂದ್ರ, ತಾತ್ಕಾಲಿಕ ಪೊಲೀಸ್ ಹೊರ ಠಾಣೆ ತೆರೆಯಲಾಗುವುದು ಎಂದು ಹೇಳಿದರು.

ADVERTISEMENT

ರೈತರಿಗೆ ಮಾಹಿತಿ ಕೇಂದ್ರ: ಜಾತ್ರೆಯಲ್ಲಿ ಭಾಗವಹಿಸುವ ರೈತರಿಗೆ ಕೃಷಿ, ತೋಟಗಾರಿಕೆ, ರೇಷ್ಮೆ, ನೀರಾವರಿ ಸೇರಿ ಇನ್ನಿತರ ಇಲಾಖೆಗಳಿಂದ ಮಾಹಿತಿ ನೀಡುವ ಮಳಿಗೆ, ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ಕೇಂದ್ರ ತೆರೆಯಲಾಗುವುದು ಎಂದರು.

ಕ್ರೀಡೆ, ಸಾಂಸ್ಕತಿಕ, ನಾಟಕ: ಜಾತ್ರೆಯಲ್ಲಿ ಭಾಗವಹಿಸುವ ರೈತರಿಗೆ ಸಂಜೆ ವೇಳೆ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ನಾಟಕ ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಜತೆಗೆ ವಿವಿಧ ಕ್ರೀಡೆಗಳು, ಮಹಿಳಾ ಉತ್ಸವ ನಡೆಯಲಿದೆ.

19ಕ್ಕೆ ಸರಳ ಸಾಮೂಹಿಕ ಮದುವೆ: ಜಾತ್ರಾಮಹೋತ್ಸವದಲ್ಲಿ ಫೆ.19ರಂದು ಉಚಿತ, ಸರಳ ಸಾಮೂಹಿಕ ಮದುವೆಗಳನ್ನು ಆಯೋಜಿಸಲಾಗಿದ್ದು, ಈಗಾಗಲೇ 25 ಜೋಡಿಗಳು ಹೆಸರು ನೋಂದಾಯಿಸಿವೆ. ಮದುವೆಯಾಗುವ ಆಸಕ್ತರು ಕೂಡಲೇ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ನವ ಜೋಡಿಗಳಿಗೆ ಉಚಿತವಾಗಿ ತಾಳಿ, ಸೀರೆ, ಬಟ್ಟೆ ನೀಡಲಾಗುವುದು ಎಂದು  ಶಾಸಕ ದರ್ಶನ್ ತಿಳಿಸಿದರು.

ಉತ್ತಮ ರಾಸುಗಳಿಗೆ ಬಹುಮಾನ: ಜಾತ್ರೆಯಲ್ಲಿ ಭಾಗವಹಿಸುವ ಹಾಲು ಹಲ್ಲಿನ ಜತೆಗೆ, 2,4, 6, 8 ಹಲ್ಲಿನ ಉತ್ತಮ ಜೋಡೆತ್ತುಗಳಿಗೆ ಸೂಕ್ತ ಬಹುಮಾನ ನೀಡಲಾಗುವುದು. ಫೆ.17ರ ಸಂಜೆಯೊಳಗೆ ಜಾನುವಾರುಗಳೊಂದಿಗೆ ಜಾತ್ರೆಯಲ್ಲಿ ಭಾಗಹಿಸುವ ರೈತರು ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ, ಸರ್ವೋದಯ ಕರ್ನಾಟಕ ಪಕ್ಷದ ತಾಲ್ಲೂಕು ಅಧ್ಯಕ್ಷ ಎಸ್.ದಯಾನಂದ, ರೈತ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ವೈ.ಪಿ.ಮಂಜುನಾಥ್, ಸಂಘಟನಾ ಕಾರ್ಯದರ್ಶಿ ಹಿರೇಮರಳಿ ಶಿವಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ಹಾರೋಹಳ್ಳಿ ಸತೀಶ್ ಕುಮಾರ್, ಮುಖಂಡರಾದ ಶ್ಯಾದನಹಳ್ಳಿ ಜಯರಾಮ್, ಹಿರೇಮರಳಿ ಸತ್ಯಪ್ಪ, ಸುನೀಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.